Puneeth Rajkumar; ಬಳ್ಳಾರಿಯಲ್ಲಿ 23 ಅಡಿಯ ಪ್ರತಿಮೆ ಅನಾವರಣ
ಬಳ್ಳಾರಿ, ಜನವರಿ 20; ಅಭಿಮಾನಿಗಳ ಪಾಲಿನ ಪವರ್ ಸ್ಟಾರ್, ಕರ್ನಾಟಕ ರತ್ನ ದಿ. ಪುನೀತ್ ರಾಜ್ಕುಮಾರ್ರ 23 ಅಡಿ ಎತ್ತರದ ಪ್ರತಿಮೆ ಬಳ್ಳಾರಿಯಲ್ಲಿ ಲೋಕಾರ್ಪಣೆಗೊಂಡಿದೆ. ಅಶ್ವಿನಿ ಪುನೀತ್ರಾಜಕುಮಾರ್ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಬಳ್ಳಾರಿ ಉತ್ಸವ 2023ರ ಕೊನೆಯ ದಿನವಾದ ಶನಿವಾರ ಸಂಜೆ ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದ ನಲ್ಲಚೇರುವು ಕೆರೆಯ ಪಕ್ಕದಲ್ಲಿ ನಿರ್ಮಿಸಿದ್ದ 23 ಅಡಿಯ ಡಾ. ಪುನೀತ್ ರಾಜ್ಕುಮಾರ್ ಪ್ರತಿಮೆಯನ್ನು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅನಾವರಣಗೊಳಿಸಿದರು.
ಅಂಜನಾದ್ರಿ ಬೆಟ್ಟಕ್ಕೆ ಪುನೀತ್ ಫೋಟೋ ಜೊತೆ ಭಕ್ತರ ಪಾದಯಾತ್ರೆ!
ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಎಂ. ರಾಜೇಶ್ವರಿ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಮುಂತಾದವರು ಉಪಸ್ಥಿತರಿದ್ದರು.
ಅಪ್ಪು ಜೀವನ ಕಥೆಯನ್ನು ಪಠ್ಯಕ್ಕೆ ಸೇರಿಸುವಂತೆ ಸಿಎಂಗೆ ಪತ್ರ ಬರೆದ ಪುನೀತ್ ಅಭಿಮಾನಿ
ಶಿವಮೊಗ್ಗದಲ್ಲಿ ನಿರ್ಮಾಣ; ಪುನೀತ್ ರಾಜ್ಕುಮಾರ್ರ ಪ್ರತಿಮೆಯನ್ನು ಶಿವಮೊಗ್ಗದಲ್ಲಿ ನಿರ್ಮಾಣ ಮಾಡಲಾಗಿತ್ತು. 40 ಅಡಿ ಉದ್ದದ 18 ಚಕ್ರದ ಲಾರಿಯನ್ನು ಅದನ್ನು ಬಳ್ಳಾರಿಗೆ ಕಳುಹಿಸಿ ಕೊಡಲಾಗಿತ್ತು.
ದಾವಣಗೆರೆ: ಪುನೀತ್ ಆನಂದಗೂಡಿನಲ್ಲಿ ಅಪ್ಪು ಸ್ಮರಣೆ, ಅನ್ನಸಂತರ್ಪಣೆ
ಶಿವಮೊಗ್ಗದ ಹಿಂದೂ ಮಹಾಸಭೆ ಗಣಪತಿ ತಯಾರು ಮಾಡುವ ಕಲಾವಿದ ಜೀವನ್ ಈ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಶಿವಮೊಗ್ಗ ಸಮೀಪದ ನಿದಿಗೆಯಲ್ಲಿ ಈ ಪ್ರತಿಮೆ ನಿರ್ಮಾಣ ಕಾರ್ಯ ನಡೆದಿತ್ತು.
ಮೂರು ತಿಂಗಳಿನಲ್ಲಿ 23 ಅಡಿಯ ಮೂರು ಸಾವಿರ ಕೆಜಿ ತೂಕದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಕಬ್ಬಿಣ, ಫೈಬರ್ ಬಳಕೆ ಮಾಡಿಕೊಂಡು ನಿರ್ಮಾಣ ಮಾಡಿದ್ದ ಪ್ರತಿಮೆ ಈಗ ಬಳ್ಳಾರಿಯಲ್ಲಿ ಅನಾವರಣಗೊಂಡಿದೆ.
ಅಶ್ವಿನಿ ಪುನೀತ್ರಾಜ್ಕುಮಾರ್ಗೆ ಸನ್ಮಾನ; ಪ್ರತಿಮೆ ಅನಾವರಣದ ಬಳಿಕ ರಾಘವೇಂದ್ರ ರಾಜ್ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ ನಗರ ಮುನ್ಸಿಪಲ್ ಮೈದಾನದ ರಾಘವ ವೇದಿಕೆಯಲ್ಲಿ ನಡೆದ ಬಳ್ಳಾರಿ ಉತ್ಸವ 2023ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ ಮಾತನಾಡಿ ಅಭಿಮಾನಿ ದೇವರುಗಳಿಗೆ ನಮಸ್ಕಾರ ತಿಳಿಸಿದರು. "ಈ ಬಳ್ಳಾರಿ ಉತ್ಸವ ಒಂದು ರೀತಿಯಲ್ಲಿ ಬಳ್ಳಾರಿಯ ದಸರಾ ಆಗಿ ಆಚರಣೆ ಮಾಡಲಾಗುತ್ತಿದೆ" ಎಂದು ಬಣ್ಣಿಸಿದರು.
"ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಸ್ಟಾರ್ ಆಗಿ ನೋಡುತ್ತಿದ್ದರು. ಆದರೆ ಈಗ ಅವರನ್ನು ಪುತ್ತಳಿಯ ರೂಪದಲ್ಲಿ ನೋಡುವಂತಾಗಿದೆ. ಪುನೀತ್ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನ ಅಜರಾಮರ" ಎಂದರು.
ಪುನೀತ್ ರಾಜ್ಕುಮಾರ್ರ 'ರಾಜಕುಮಾರ' ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಎಂಬ ಹಾಡು ಹೇಳಿದರು.
ರಾಜ್ಕುಮಾರ್ ಕುಟುಂಬದ ಮೇಲೆ ಬಳ್ಳಾರಿಯ ಜನರು ಮೊದಲಿನಿಂದಲೂ ಅಪಾರ ಅಭಿಮಾನ ಹೊಂದಿದ್ದಾರೆ. ಈಗ ರಾಜ್ಯದಲ್ಲಿಯೇ ಅತಿ ಎತ್ತರದ ಪುನೀತ್ ರಾಜ್ಕುಮಾರ್ರ ಪ್ರತಿಮೆ ಜಿಲ್ಲೆಯಲ್ಲಿ ಸ್ಥಾಪನೆಯಾಗಿದೆ.
23 ಅಡಿ ಪ್ರತಿಮೆಯನ್ನು ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು 1 ಸಾವಿರ ಕೆಜಿ ಕಬ್ಬಿಣವನ್ನು ಪ್ರತಿಮೆಗೆ ಬಳಕೆ ಮಾಡಲಾಗಿದೆ. ಕಲಾವಿದ ಜೀವನ್ ನೇತೃತ್ವದಲ್ಲಿ 15 ಶಿಲ್ಪಿಗಳು ಪ್ರತಿಮೆ ನಿರ್ಮಾಣಕ್ಕೆ ಕೆಲಸ ಮಾಡಿದ್ದಾರೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ವಿಭಜನೆಯಾದ ಬಳಿಕ ಮೊದಲ ಬಾರಿಗೆ ಬಳ್ಳಾರಿ ಉತ್ಸವ ಆಯೋಜನೆ ಮಾಡಲಾಗಿತ್ತು. ಈ ಉತ್ಸವದ ಸಮಯದಲ್ಲಿಯೇ ಪುನೀತ್ ರಾಜ್ಕುಮಾರ್ ಪ್ರತಿಮೆ ಅನಾವರಣ ಮಾಡಲಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಹ ಪುನೀತ್ ರಾಜ್ಕುಮಾರ್ ಪ್ರತಿಮೆ ಇದೆ. ಡಾ. ರಾಜ್ ಕುಟುಂಬ ಸದಸ್ಯರ ಸಮ್ಮುಖದಲ್ಲಿಯೇ 7.4 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಹೊಸಪೇಟೆಯ ಬಗ್ಗೆ ಡಾ. ಪುನೀತ್ ರಾಜ್ಕುಮಾರ್ ವಿಶೇಷ ಪ್ರೀತಿ ಹೊಂದಿದ್ದರು.