ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣಗೊಳಿಸಿದ ಗಾಲಿ ಜನಾರ್ದನ ರೆಡ್ಡಿ
ಬಳ್ಳಾರಿ, ಅಕ್ಟೋಬರ್ 27: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಮರಣವನ್ನು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳುಲಾಗುತ್ತಿಲ್ಲ. ಅಪ್ಪು ಅಪಾರ ಅಭಿಮಾನಿಗಳನ್ನು ಅಗಲಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಆದರೆ ಅಭಿಮಾನಿಗಳಿಗೆ ಇನ್ನೂ ಆ ನೋವು ಮಾಸಿಲ್ಲ.
ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿದ್ದರು, ತಮ್ಮ ಮೆಚ್ಚಿನ ನಟ ಹಾಕಿಕೊಟ್ಟ ಮಾರ್ಗದಲ್ಲಿ ಅಭಿಮಾನಿಗಳು ನಡೆಯುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತವಾಗಿದೆ.
ಪುನೀತ್ ರಾಜ್ಕುಮಾರ್ ಅವರ ಸವಿ ನೆನಪಿನಪಿನಲ್ಲಿ ಗಣಿ ನಾಡು ಬಳ್ಳಾರಿಯಲ್ಲಿ ಕೃಷ್ಣ ಶಿಲೆಯಲ್ಲಿ ಅಪ್ಪು ಅದ್ಭುತವಾದ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

ಅಪ್ಪು ನೆನೆದು ಜನಾರ್ದನ ರೆಡ್ಡಿ ಭಾವುಕ
ಬಳ್ಳಾರಿ ಜಿಲ್ಲೆಯ ತಾಳೂರ ರಸ್ತೆಯ ಕುರುವಳ್ಳಿ ಎನ್ ಕ್ಲೈವ್ನಲ್ಲಿ ಸ್ಥಾಪಿಸಲಾಗಿರುವ ಪುನೀತ್ ರಾಜ್ಕುಮಾರ್ ಕಪ್ಪು ಶಿಲೆ ಪ್ರತಿಮೆ ಅನಾವರಣಗೊಂಡಿದೆ. ಪುನೀತ್ ರಾಜ್ಕುಮಾರ್ ಅವರ ಪ್ರತಿಮೆಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಲೋಕಾರ್ಪಣೆ ಮಾಡಿದ್ದಾರೆ. ಈ ವೇಳೆ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾವುಕರಾದರು. ತಾವು ಅಪ್ಪು ಜೊತೆಗಿದ್ದ ಸಮಯ ಹಾಗೂ ಒಡನಾಟವನ್ನು ಅಭಿಮಾನಿಗಳೊಂದಿದೆ ವಿವರಿಸಿದರು.

ಅಪ್ಪು ನಮ್ಮೆಲ್ಲರಿಗೂ ಆದರ್ಶ ಎಂದ ಸೋಮಶೇಖರ್ ರೆಡ್ಡಿ
ಇನ್ನು ಈ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಮೈಸೂರಿನಲ್ಲಿ ನಡೆಸುತ್ತಿದ್ದ ಶಕ್ತಿಧಾಮದ ಶಾಖೆಯನ್ನು ಬಳ್ಳಾರಿಯಲ್ಲೂ ಆರಂಭಿಸುವುದಾಗಿ ಜನಾರ್ದನ ರೆಡ್ಡಿ ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ ಕೆಎಂಎಫ್ ರಾಯಭಾರಿಯಾಗಿದ್ದ ಅಪ್ಪುವಿನ ಸರಳತೆಯ ಗುಣಗಾನ ಮಾಡಿದ್ದಾರೆ. ಅಲ್ಲದೇ ಅಪ್ಪು ನಮಗೆಲ್ಲರಿಗೂ ಆದರ್ಶವಾಗಿದ್ದಾರೆ. ಯುವರತ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮೊಂದಿಗಿಲ್ಲ ಆದರೆ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಮಾದರಿಯಾಗಿದೆ ಎಂದು ಪುನೀತ್ ರಾಜ್ಕುಮಾರ್ ಅವರನ್ನು ಹೊಗಳಿದರು.

ಪುನೀತ್ ರಾಜ್ಕುಮಾರ್ ಉದ್ಯಾನವನ ಲೋಕಾರ್ಪಣೆ
ಪುನೀತ್ ರಾಜ್ಕುಮಾರ್ ಅವರು ಮರೆಯಾಗಿದ್ದು ಅವರ ಸಾಧನೆಗಳನ್ನು ಅಜರಾಮರಗೊಳಿಸಲು ಕಪ್ಪು ಶಿಲೆಯಲ್ಲಿ ಅವರ ಪ್ರತಿಮೆಯನ್ನು ಗಣಿ ನಾಡು ಬಳ್ಳಾರಿಯಲ್ಲಿ ನಿರ್ಮಿಸಲಾಗಿದೆ. ಕುರುವಳ್ಳಿ ಎನ್ಕ್ಲೈವ್ನಲ್ಲಿ ಜಿಆರ್ಆರ್ ಡೆವಲಪರ್ ಮುಖ್ಯಸ್ಥ ಸುನೀಲ್ ಕುಮಾರ್, ಪುನೀತ್ ರಾಜ್ಕುಮಾರ್ ಪ್ರತಿಮೆ ಹಾಗೂ ಉದ್ಯಾನವನವನ್ನು ನಿರ್ಮಿಸಿದ್ದಾರೆ. ಸದ್ಯ ಈ ಸ್ಥಳ ಬಳ್ಳಾರಿಯಲ್ಲಿ ಆಕರ್ಷಣೀಯ ಸ್ಥಳವಾಗಿದೆ. ಅಪ್ಪು ಪ್ರತಿಮೆ ಅನಾವರಣ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆದಿದ್ದು, ನೂರಾರು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹಳ್ಳಿ ಹಳ್ಳಿಗಳಲ್ಲಿ.. ಊರು ಊರುಗಳಲ್ಲಿ.. ಅಪ್ಪು ಜಪ
6.50 ಅಡಿ ಎತ್ತರ ಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ ಪುನೀತ್ ರಾಜ್ಕುಮಾರ್ ಪ್ರತಿಮೆ ಮುಂದೆ ಅಭಿಮಾನಿಗಳು ಹಾಗೂ ಸ್ಥಳೀಯರು ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಮೇಲಿನ ಅಭಿಮಾನ, ಪ್ರೀತಿ ಗೌರವ ಎಳ್ಳಷ್ಟು ಕಡಿಮೆಯಾಗಿಲ್ಲ. ಹೀಗಾಗಿಯೇ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಊರು ಊರುಗಳಲ್ಲಿ ಪುನೀತ್ ರಾಜ್ಕುಮಾರ್ ಪ್ರತಿಮೆ ಅನಾವರಣಗೊಳ್ಳುತ್ತಿದೆ. ಅಪ್ಪು ಅವರ ಸಾಧನೆ ಹಾಗೂ ಜೀವನ ಇಂದು ಅದೆಷ್ಟೋ ಅಭಿಮಾನಿಗಳಿಗೆ ಪ್ರೇರಣೆಯಾಗಿದೆ.











Click it and Unblock the Notifications