'ಎಷ್ಟು ದಿನ ಬದುಕಿರ್ತೇನೆ ಗೊತ್ತಿಲ್ಲ, ರೈತರ ಸೇವೆಗೆ ಅವಕಾಶ ಕೊಡಿ'
ಬಳ್ಳಾರಿ, ಫೆಬ್ರವರಿ 26: ಮುಖ್ಯಮಂತ್ರಿ ಆಗುವ ಆಸೆ ನನಗಿಲ್ಲ. ಆದರೆ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಮೇಲಿರುವ 51 ಸಾವಿರ ಕೋಟಿ ರುಪಾಯಿ ಸಾಲ ಮನ್ನಾ ಮಾಡಲಿಕ್ಕಾಗಿ ನನ್ನನ್ನು ಬೆಂಬಲಿಸಿ. ನಿಮ್ಮಲ್ಲಿ ಮತ ಭಿಕ್ಷೆ ಕೇಳಲು ಬಂದಿದ್ದೇನೆ. ಬೆಂಬಲಿಸಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರು ಕೂಡ್ಲಿಗಿ, ಕೊಟ್ಟೂರು, ಸಂಡೂರು ಜನರಲ್ಲಿ ಮನವಿ ಮಾಡಿದ್ದಾರೆ.
ಕೂಡ್ಲಿಗಿಯ ಹಿರೇಮಠ ಪದವಿ ಪೂರ್ವ ಕಾಲೇಜು ಅವರಣದಲ್ಲಿ ತಾಲೂಕು ಜೆಡಿಎಸ್ ಘಟಕ ಹಮ್ಮಿಕೊಂಡಿದ್ದ 'ಕುಮಾರ ವಿಕಾಸ ಪರ್ವ' ಉದ್ಘಾಟಿಸಿ, ಕೊಟ್ಟೂರು ಪಟ್ಟಣದಲ್ಲಿ ಪಕ್ಷದ ಮುಖಂಡರು ಏರ್ಪಡಿಸಿದ್ದ ಸಾಮೂಹಿಕ ವಿವಾಹ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ರೈತರ ಎಲ್ಲ ಸಾಲ ಮನ್ನಾ ಮಾಡಿ, ಅವರನ್ನು ಸಾಲಗಳಿಂದ ವಿಮುಕ್ತಿಗೊಳಿಸುತ್ತೇನೆ. ನೆಮ್ಮದಿಯ ದಿನಗಳನ್ನು ಕಳೆಯಲು ಅವಕಾಶ ಕಲ್ಪಿಸುತ್ತೇನೆ. ಈಗ ಸಾಲ ಮನ್ನಾ ಮಾಡಿ, ಮುಂದೆ ಮತ್ತೆ ಸಾಲ ಮಾಡದಂತೆ ಸೂಕ್ತವಾದ ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದರು.

ಎಷ್ಟು ದಿನ ಬದುಕಿರ್ತೀನಿ ಅನ್ನೋದು ಮುಖ್ಯವಲ್ಲ
ರೈತರ ಹಿತ ಕಾಪಾಡಲಿಕ್ಕಾಗಿ ಇಸ್ರೇಲ್ ಗೆ ಹೋಗಿ ಅಲ್ಲಿ ಅಧ್ಯಯನ ನಡೆಸಿದ್ದೇನೆ. ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಆಗಿದೆ. ವೈದ್ಯರು ವಿಶ್ರಾಂತಿಗೆ ತಿಳಿಸಿದ್ದಾರೆ. ಆದರೆ ರೈತರ ಉತ್ತಮ ಬದುಕಿಗಾಗಿ ಅವಿರತವಾಗಿ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿದ್ದೇನೆ. ನಾನು ಎಷ್ಟು ದಿನ ಬದುಕಿರುತ್ತೇನೆ ಎನ್ನುವುದು ಮುಖ್ಯವಲ್ಲ. ರೈತರಿಗಾಗಿ ನಾನು ಏನು ಮಾಡುತ್ತೇನೆ ಎನ್ನುವುದು ಮುಖ್ಯ ಎಂದರು.

ರೈತರಿಗಾಗಿ ಹಲವು ಯೋಜನೆಗಳು
ರೈತರ ಸಮಸ್ಯೆ ತಿಳಿದು, ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ. ಆದರೆ ಯಾವುದೋ ಐಎಎಸ್ ಅಧಿಕಾರಿ ಕೊಡುವ ಸಲಹೆಯಂತೆ ನಾನು ಕೆಲಸ ಮಾಡುವುದಿಲ್ಲ. ಕೃಷಿ ಹೇಗೆ ಮಾಡಬೇಕು ಮತ್ತು ಸ್ಥಳೀಯ ಭೌಗೋಳಿಕ ವಾತಾವರಣಕ್ಕೆ ರೈತ ಏನು ಬೆಳೆ ಬೆಳೆಯಬೇಕು. ನೀರಾವರಿ ಇಲ್ಲದಿದ್ದರೂ ಯಾವ ರೀತಿಯ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ಕುರಿತು ನನ್ನಲ್ಲಿ ಹಲವಾರು ಯೋಜನೆಗಳು ಇವೆ ಎಂದರು.

ದೇವೇಗೌಡರ ಋಣ ತೀರಿಸಬೇಕು
ಕೂಡ್ಲಿಗಿ ಎಸ್ಟಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನ ನಿಯೋಜಿತ ಅಭ್ಯರ್ಥಿ ಎನ್.ಟಿ. ಬೊಮ್ಮಣ್ಣ ಮಾತನಾಡಿ, ಗಣಿ ಧೂಳಿನ ಪ್ರಭಾವದಿಂದ ಜಿಲ್ಲೆಯಲ್ಲಿನ ಹಿರಿಯ ರಾಜಕಾರಣಿಗಳು ಹಿಂದೆ ಸರಿದಿದ್ದೆವು. ವಾಲ್ಮೀಕಿ ಗುರುಪೀಠ ಸ್ಥಾಪಿಸಲು ಎಚ್.ಡಿ. ದೇವೇಗೌಡ ಅವರು ಜಾಗ ನೀಡಿದ್ದಾರೆ. ಅವರ ಋಣ ತೀರಿಸಲಿಕ್ಕಾಗಿ ನಾವೆಲ್ಲರೂ ಜೆಡಿಎಸ್ ಗೆ ಮತ ನೀಡಬೇಕು ಎಂದರು.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ಮಾಜಿ ಶಾಸಕ ಕೆ.ವಿ. ರವೀಂದ್ರನಾಥ ಬಾಬು ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಬೋರಮ್ಮ ತಮ್ಮಪ್ಪ ಪ್ರೌಢಶಾಲೆ ಆವರಣದಲ್ಲಿ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿ, 'ವಿಕಾಸ ವಾಹಿನಿ' ವಿಶೇಷ ಬಸ್ ಹಾಗೂ ಬೈಕ್ ಗಳಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ವೇದಿಕೆಗೆ ಕರೆತರಲಾಯಿತು.












Click it and Unblock the Notifications