ಗುರುವಿಗೆ ಮಿಡಿದ ಮನ; ಗುಡಿಸಲಲ್ಲಿದ್ದ ಶಿಕ್ಷಕಿಗೆ ಮನೆ ಕಟ್ಟಿಕೊಟ್ಟ ವಿದ್ಯಾರ್ಥಿಗಳು
ಬಳ್ಳಾರಿ, ಸೆಪ್ಟೆಂಬರ್ 9: ತಿದ್ದಿ ತೀಡಿ, ತಪ್ಪು ಮಾಡಿದಾಗ ಚಾಟಿ ಏಟು ಕೊಟ್ಟು ಪಾಠ ಕಲಿಸಿ, ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ದಾರಿ ಮಾಡಿಕೊಟ್ಟ ಶಿಕ್ಷಕರನ್ನು ಬಹುತೇಕರು ಮರೆತು ಬಿಡುತ್ತಾರೆ. ಆದರೆ ಈ ವಿದ್ಯಾರ್ಥಿಗಳು ಹಾಗಾಗಲಿಲ್ಲ. ತಮಗೆ ವಿದ್ಯೆ ಕಲಿಸಿದ ಶಿಕ್ಷಕಿ ಸಂಕಷ್ಟದಲ್ಲಿರುವುದನ್ನು ಕಂಡು ಅವರಿಗೆ ನೆರವಾಗಲು ಟೊಂಕ ಕಟ್ಟಿ ನಿಂತಿದ್ದಾರೆ.
Recommended Video
ಕಳೆದ 30 ವರ್ಷಗಳ ಕಾಲ ಖಾಸಗಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಈಗ ಬದುಕು ನಡೆಸಲು ಆಗದ ಪರಿಸ್ಥಿತಿಯಲ್ಲಿ ಇರುವ ಶಿಕ್ಷಕಿಗೆ ಆ ಹಳೆಯ ವಿದ್ಯಾರ್ಥಿಗಳು ಸೇರಿ ಚೆಂದದ ಮನೆ ಕಟ್ಟಿಸಿಕೊಟ್ಟಿದ್ದಾರೆ. ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದ ಶಿಕ್ಷಕಿಗೆ ಈ ಮೂಲಕ ಗುರು ದಕ್ಷಿಣೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ವಿವರ ಮುಂದಿದೆ...

ಸಣ್ಣ ಜೋಪಡಿಯಲ್ಲಿ ಟ್ಯೂಷನ್ ಹೇಳುತ್ತಿದ್ದ ಶಿಕ್ಷಕಿ
ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕಿ ಪರಿಮಳಾ ಅವರ ಆರೋಗ್ಯ ಕೈಕೊಟ್ಟು ಜೀವನ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸಣ್ಣ ಜೋಪಡಿಯಲ್ಲಿ ಟ್ಯೂಷನ್ ಹೇಳಿ ಕೊಡುತ್ತಾ ಜೀವನ ಸಾಗಿಸುತ್ತಿದ್ದರು. ಇವರ ಈ ಪರಿಸ್ಥಿತಿಯನ್ನು ಅವರಿಂದ ಪಾಠ ಕಲಿತಿದ್ದ ವಿದ್ಯಾರ್ಥಿಗಳು ಗಮನಿಸಿದ್ದರು. ತಮ್ಮ ಶಿಕ್ಷಕಿಗೆ ಇಂತಹ ಸ್ಥಿತಿ ಬಂದಿರುವುದನ್ನು ಕಂಡು ಮರುಗಿದ್ದರು.

ಆಸರೆಗಿದ್ದ ಎಲ್ಲರನ್ನೂ ಕಳೆದುಕೊಂಡಿದ್ದರು
ಮೂಲತ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಸಿರುಗುಪ್ಪ ಎಜುಕೇಶನ್ ಸೊಸೈಟಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1985 ರಿಂದ 1996ರವರೆಗೆ ಶಿಕ್ಷಕಿಯಾಗಿ ಕೆಲಸ ಮಾಡಿದ್ದ ಪರಿಮಳ ಅವರು, ಸಣ್ಣವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಮದುವೆಯೂ ಆಗಿರಲಿಲ್ಲ. ಅಲ್ಲದೇ, ಪರಿಮಳ ಟೀಚರ್ ಆಸರೆಯಾಗಿದ್ದ ಅವರ ಅಕ್ಕ ಇತ್ತೀಚೆಗೆ ಮರಣಹೊಂದಿದ್ದರು. ಇದರಿಂದ ಒಬ್ಬರೇ ಹಳೆಯ ಜೋಪಡಿಯೊಂದರಲ್ಲಿ ಟ್ಯೂಷನ್ ಹೇಳಿಕೊಂಡು ಜೀವನ ನಡೆಸುತ್ತಿದ್ದರು.

20 ಲಕ್ಷ ಮೌಲ್ಯದ ಮನೆ ಕಟ್ಟಿಸಿಕೊಟ್ಟ ವಿದ್ಯಾರ್ಥಿಗಳು
ಗುರುವಂದನಾ ಕಾರ್ಯಕ್ರಮವೊಂದರಲ್ಲಿ ಸಿಕ್ಕಾಗ ಪರಿಮಳಾ ಟೀಚರ್ ಅವರ ಕಷ್ಟ ತಿಳಿದ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಗೆ ಹೇಗಾದರೂ ನೆರವಾಗಲೇಬೇಕೆಂದು ದೃಢ ನಿಶ್ಚಯ ಮಾಡಿಕೊಂಡರು. ಕೊನೆಗೆ ಜೀವನಕ್ಕೆ ಅತಿ ಅಗತ್ಯವಾದ ಮನೆಯನ್ನು ನಿರ್ಮಿಸಿಕೊಡಬೇಕೆಂದು ನಿರ್ಧಾರ ಮಾಡಿದರು. ಎಲ್ಲರೂ ಒಟ್ಟಾಗಿ ತಮ್ಮ ಗುರುವಿಗೆ 20 ಲಕ್ಷ ಮೌಲ್ಯದ ಭವ್ಯವಾದ ಮನೆಯೊಂದನ್ನು ಕಟ್ಟಿಸಿಕೊಟ್ಟರು. ಈ ಮೂಲಕ ಗುರು ಶಿಷ್ಯ ಬಾಂಧವ್ಯ ಎತ್ತಿ ಹಿಡಿದಿದ್ದಾರೆ.

"ಅಸಹಾಯಕ ಗುರುಗಳಿಗೆ ನೆರವಾಗಿ"
ಈ ಕುರಿತು ಮಾತನಾಡಿದ ವಿದ್ಯಾರ್ಥಿಗಳು, "ಮಕ್ಕಳಿಗೆ ವಿದ್ಯೆ ಕಲಿಸಿದ ಇಂಥ ಸಾವಿರಾರು ಶಿಕ್ಷಕರು ಇಂದು ಅಸಹಾಯಕತೆಯಲ್ಲಿದ್ದಾರೆ. ನಾವೆಲ್ಲ ಅಂದು ಇವರಿಂದ ವಿದ್ಯೆ ಕಲಿತು ಇಂದು ಉನ್ನತ ಸ್ಥಾನದಲ್ಲಿ ಇದ್ದೇವೆ. ಇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಇಂತಹ ಶಿಕ್ಷಕರಿಗೆ ಸಹಾಯ ಮಾಡಿ ಎಂಬ ಸಂದೇಶ ಎಲ್ಲೆಡೆ ಹೋಗಲಿ ಎಂಬುದಷ್ಟೇ ನಮ್ಮ ಆಶಯ" ಎನ್ನುತ್ತಾರೆ.












Click it and Unblock the Notifications