ವಿಜಯನಗರ ಜಿಲ್ಲೆ ರಚನೆ; ಸರ್ಕಾರಕ್ಕೆ ಜನರ ಪ್ರಶ್ನೆ!
ವಿಜಯನಗರ, ಸೆಪ್ಟೆಂಬರ್ 09; ವಿಜಯನಗರ ಜಿಲ್ಲೆಯನ್ನು ನಾಮಕಾವಸ್ಥೆಗೆ ಮಾಡಿದ್ದಾರ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಹೌದು ಬಳ್ಳಾರಿ ಜಿಲ್ಲೆಯನ್ನು ಇಬ್ಬಾಗ ಮಾಡಿ ಹೊಸಪೇಟೆಯನ್ನು ಕೇಂದ್ರವಾಗಿಸಿ ವಿಜಯನಗರ ಜಿಲ್ಲೆ ರಚನೆ ಮಾಡಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಫೆಬ್ರವರಿ 8ರಂದು ಘೋಷಣೆ ಮಾಡಿದರು.
ಸಚಿವ ಆನಂದ್ ಸಿಂಗ್ ಖಾತೆ ಬಗ್ಗೆ ಅಸಮಧಾನಗೊಂಡಿದ್ದು ಇಡೀ ರಾಜ್ಯದ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿತ್ತು. ನನಗೆ ದೊಡ್ಡ ಖಾತೆ ಬೇಕು ಅಂತ ಪಟ್ಟು ಹಿಡಿದು ರಾಜೀನಾಮೆ ಹಂತಕ್ಕೂ ತಲುಪುವ ಮಟ್ಟಕ್ಕೆ ಹೋಗಿದ್ದಾರೆ ಎಂದು ರಾಜ್ಯದ ಜನರು ಮಾತನಾಡಿಕೊಂಡಿದ್ದರು. ಇದರಿಂದಾಗಿ ತಿಂಗಳಾನುಗಟ್ಟಲೇ ಸಮಯ ಹಾಳಾಯಿತು.
ಆನಂದ್ ಸಿಂಗ್ ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗಾಗಿ ಮತ್ತು ಜಿಂದಾಲ್ಗೆ ಭೂಮಿ ಪರಭಾರೆ ವಿಚಾರಗಳನ್ನಿಟ್ಟುಕೊಂಡು ರಾಜೀನಾಮೆಯನ್ನು ಸಲ್ಲಿಸಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಜಯಗಳಿಸಿ ಮತ್ತೆ ಶಾಸಕನಾಗಿ ಮುಂದುವರೆದರು.

ಯಡಿಯೂರಪ್ಪ ಮೊದಲ ಸಚಿವ ಸಂಪುಟದಲ್ಲಿ, "ನನಗೆ ಖಾತೆ ಮುಖ್ಯವಲ್ಲ ಮೊದಲು ನನಗೆ ಜಿಲ್ಲೆ ಘೋಷಣೆ ಮುಂದೆ ಸಚಿವ ಸ್ಥಾನ ಅದು ತೃಣ ಅಷ್ಟೇ ವಿಜಯನಗರ ಜಿಲ್ಲೆಯಂದು ಘೋಷಣೆ" ಮಾಡಬೇಕೆಂದು ಪಟ್ಟು ಹಿಡಿದಿದ್ದರು.
ಅದರಂತೆ ಯಡಿಯೂರಪ್ಪ ಮಾತಿನಂತೆ ವಿಜಯನಗರ ಜಿಲ್ಲೆಯಾಗಿ ಫೆಬ್ರವರಿ 8ರಂದು ಘೋಷಣೆ ಮಾಡಿದರು. ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆಗಳ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆಯು ಸೇರಿಕೊಂಡಿದೆ.
ಬಳ್ಳಾರಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಇಬ್ಬಾಗ ಮಾಡಿ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಘೋಷಣೆ ಮಾಡಿತು.
ಜಿಲ್ಲೆ ಘೋಷಣೆಯಾಗಿ 8 ತಿಂಗಳು ಕಳೆಯುತ್ತಾ ಬಂದರೂ ಇನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ನೇಮಕವಾಗಿಲ್ಲ. ವಿಜಯನಗರ ಜಿಲ್ಲಾ ವಿಶೇಷಧಿಕಾರಿಯೊಬ್ಬರನ್ನು ಹೊರತು ಪಡಿಸಿದರೆ ಬೇರೆ ಯಾವೊಬ್ಬ ಅಧಿಕಾರಿಯನ್ನು ಇದುವರೆಗೂ ನೇಮಕ ಮಾಡಿಲ್ಲ. ಜಿಲ್ಲಾ ಮಟ್ಟದ ಯಾವ ಕಚೇರಿಯು ಸಹ ಇದುವರೆಗೂ ತೆರೆದಿಲ್ಲ.
ಭೂಮಿ ಖರೀದಿ; ವಿಜಯನಗರ ಜಿಲ್ಲೆ ಘೋಷಯಾದ ಬೆನ್ನಲ್ಲೆ ಹಳೇ ಟಿಎಸ್ಪಿ ಆವರಣದಿಂದ ಒಟ್ಟು 83 ಎಕರೆ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಕಚೇರಿಗಳ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಗೃಹ ನಿರ್ಮಾಣ ಇಲಾಖೆಯಿಂದ 42 ಎಕರೆ ಪ್ರದೇಶವನ್ನು ಖರೀದಿ ಮಾಡಲಾಗಿದೆ.
ಆದರೆ ಈ ಪ್ರದೇಶದಲ್ಲಿ ತಾತ್ಕಾಲಿಕ ಜಿಲ್ಲಾ ಕಚೇರಿ ನಿರ್ಮಾಣ ಮಾಡುವುದಾಗಿ ಹೇಳಿ ಅಲ್ಲಿ ಸಣ್ಣ-ಪುಟ್ಟ ಕಾಮಗಾರಿ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸಗಳು ನಡೆದಿಲ್ಲ. ಫೆಬ್ರವರಿಯಲ್ಲಿ ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಇಲ್ಲಿಗೆ 8 ತಿಂಗಳು ಕಳೆಯುತ್ತಾ ಬಂದರೂ ಸರ್ಕಾರ ಯಾವೊಬ್ಬ ಖಾಯಂ ಅಧಿಕಾರಿಯನ್ನು ನೇಮಕ ಮಾಡಿಲ್ಲ.
ಸಚಿವ ಆನಂದ್ ಸಿಂಗ್ಗೆ ನೂತನ ವಿಜಯನಗರ ಜಿಲ್ಲೆ ಘೋಷಣೆ ಮಾಡಿಸುವಾಗ ತೋರಿಸಿದ ಉತ್ಸಾಹ ಈಗ ಜಿಲ್ಲೆ ರಚನೆ ಮಾಡುವಾಗ ತೋರುತ್ತಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
11 ಕಚೇರಿಗಳು ತೆರೆಯಲಿವೆ; ಸೆಪ್ಟೆಂಬರ್ 6ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನೂತನವಾಗಿ ಘೋಷಣೆಯಾದ ವಿಜಯನಗರ ಜಿಲ್ಲೆ ಅಭಿವೃದ್ಧಿಪಡಿಸುವ ಸಲುವಾಗಿ ಮೊದಲ ಹಂತದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ, ಎಸ್ಪಿ ಕಚೇರಿ, ಜಿಲ್ಲಾ ಆರೋಗ್ಯಾಧಿಕಾರಿ, ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆ, ನೊಂದಣಿ ಮತ್ತು ಮುದ್ರಾಂಕ ಇಲಾಖೆ, ನಗರ ಯೋಜನೆ ಹಾಗೂ ಅರಣ್ಯ ಇಲಾಖೆಗಳನ್ನೊಳಗೊಂಡಂತೆ ಒಟ್ಟು 11 ಕಚೇರಿಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ಅಧಿಕಾರಿಗಳ ನೇಮಕ; ಅಧಿಕಾರಿಗಳು ಈ ತಿಂಗಳು ಬರುತ್ತಾರೆ ಮುಂದಿನ ತಿಂಗಳು ಬರುತ್ತಾರೆ ಅಂತ ಸಚಿವ ಆನಂದ್ ಸಿಂಗ್ ಹೇಳುತ್ತಾ ಹೊರಟಿದ್ದಾರೆ. ಆದರೆ ಹೀಗೆ ಹೇಳುತ್ತಿರುವುದರಿಂದ ವಿಜಯನಗರ ಜಿಲ್ಲೆ ಸಂಪೂರ್ಣ ಕಾರ್ಯಾರಂಭ ಯಾವಾಗ ಮಾಡುತ್ತದೆ? ಎಂದು ಜನರಲ್ಲಿ ಪ್ರಶ್ನೆ ಕಾಡುತ್ತಿದೆ.
ಒಟ್ಟಾರೆಯಾಗಿ ಜಿಲ್ಲೆ ಘೋಷಣೆ ಮಾಡಿದ್ದಾಗಿದೆ. ವಿಜಯನಗರ ಜಿಲ್ಲೆ ಸಂಪೂರ್ಣವಾಗಿ ಯಾವಾಗ ಕಾರ್ಯಾರಂಭ ಮಾಡುತ್ತದೆ? ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನು ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಈ ಕುರಿತು ಮಾತನಾಡಿದ್ದು, "ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಎಲ್ಲಾ ಅಧಿಕಾರಿಗಳು ಬರುತ್ತಾರೆ" ಎಂದು ಹೇಳಿದ್ದಾರೆ.












Click it and Unblock the Notifications