ಬಳ್ಳಾರಿಯಲ್ಲಿ ಕುಕ್ಕರ್ ವಿತರಿಸಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾರಾ ಭರತ್ ರೆಡ್ಡಿ
ಬಳ್ಳಾರಿ,ನವೆಂಬರ್ 4: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಆರು ತಿಂಗಳು ಇರುವಾಗಲೇ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ನಾರಾ ಭರತ್ ರೆಡ್ಡಿ ಈಗಾಗಲೇ ಕಣಕ್ಕಿಳಿದಿದ್ದಾರೆ. ಕಳೆದ ಹಲವು ವರ್ಷಗಳಿಂದ ಟಚ್ ಫಾರ್ ಲೈಫ್ ಫೌಂಡೇಶನ್ ಎಂಬ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಾರಾ ಭರತ್ ರೆಡ್ಡಿ, ಈಗ ಫೌಂಡೇಶನ್ನ ಹೆಸರಿನಲ್ಲೇ ರಾಜಕೀಯ ಚದುರಂಗದಾಟದಲ್ಲಿ ದಾಳ ಉರುಳಿಸಿದ್ದಾರೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಮನೆ ಮನೆಗೆ ತೆರಳಿ ಕುಕ್ಕರ್ ಗಿಫ್ಟ್ ನೀಡುತ್ತಿದ್ದಾರೆ. ಸದರಿ ಗಿಫ್ಟ್ ನೀಡುವ ಈ ಕೆಲಸವನ್ನು ಗುರುವಾರ ಬೆಳಗ್ಗೆಯಿಂದ ಅಧಿಕೃತವಾಗಿ ಆರಂಭಿಸಿರುವ ಅವರು, ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 23ನೇ ವಾರ್ಡ್ನ ಮಹಾನಂದಿ ಕೊಟ್ಟಂ ಪ್ರದೇಶದಲ್ಲಿ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕುಕ್ಕರ್ ಗಿಫ್ಟ್ ವಿತರಣೆ ಮಾಡಿದ್ದಾರೆ.

50 ಸಾವಿರ ಕುಟುಂಬಗಳಿಗೆ ಕುಕ್ಕರ್ ಗಿಫ್ಟ್
ಐದು ಲೀಟರ್ ಸಾಮರ್ಥ್ಯದ 5 ವರ್ಷ ವಾರಂಟಿ ಇರುವ ಪ್ರೆಶರ್ ಕುಕ್ಕರ್ ಇದಾಗಿದ್ದು ಒಂದು ಮನೆ ಅಥವಾ ಒಂದು ಕುಟುಂಬಕ್ಕೆ ಒಂದು ಕುಕ್ಕರ್ ನೀಡಲಾಗುತ್ತಿದೆ. ಬಳ್ಳಾರಿ ನಗರದ ಅಂದಾಜು 50 ಸಾವಿರ ಕುಟುಂಬಗಳಿಗೆ ಕುಕ್ಕರ್ ಗಿಫ್ಟ್ ನೀಡುವ ಆಲೋಚನೆ ಇದೆ ಎನ್ನಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಗಿಫ್ಟ್ ನೀಡುವುದು ಹೊಸತೇನಲ್ಲ. ಆದರೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅಥವಾ ಚುನಾವಣೆ ಘೋಷಣೆಯಾದ ತಕ್ಷಣ ಗುಪ್ತವಾಗಿ ನೀಡುವ ಪರಿಪಾಠ ಇದೆ. ಸೀರೆ, ರವಿಕೆ ಪೀಸ್, ಮೂಗುತಿ, ಬೆಳ್ಳಿ ನಾಣ್ಯ, ಹೀಗೆ ಬಗೆ ಬಗೆಯ ವಸ್ತುಗಳನ್ನು ಗಿಫ್ಟ್ ರೂಪದಲ್ಲಿ ಮತದಾರರಿಗೆ ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಮತದಾರರಿಗೆ ನೀಡಿರುವ ಉದಾಹರಣೆಗಳಿವೆ.

ಕುಕ್ಕರ್ ವಿತರಣೆ ಬಗ್ಗೆ ಭರತ್ ರೆಡ್ಡಿ ಹೇಳಿದ್ದೇನು..?
ಭರತ್ ರೆಡ್ಡಿ ಅವರು ಸಾರ್ವಜನಿಕರಿಗೆ ನೀಡುತ್ತಿರುವ ಕುಕ್ಕರ್ನ ಬಾಕ್ಸ್ ಮೇಲೆ ಟಚ್ ಫಾರ್ ಲೈಫ್ ಫೌಂಡೇಶನ್ನ ಹೆಸರಿದ್ದು, ಅವರ ಫೋಟೊ ಮುದ್ರಿಸಲಾಗಿದ್ದು, ನಾರಾ ಭರತ್ ರೆಡ್ಡಿ ಎಂದು ಹೆಸರು ಮುದ್ರಿಸಲಾಗಿದೆ, ಕೊಹಿನೂರ್ ಕಂಪನಿಯ ಬ್ರಾಂಡೆಡ್ ಕುಕ್ಕರ್ಗಳು ಇವಾಗಿದ್ದು, ನೀಡಲಾಗುತ್ತಿದೆ.
ಈ ಕುರಿತು ಮಾಧ್ಯಮದವರಿಗೆ ಹೇಳಿಕೆ ನೀಡಿದ ನಾರಾ ಭರತ್ ರೆಡ್ಡಿ, "ಇತ್ತೀಚೆಗೆ ನನ್ನ ಜನ್ಮ ದಿನ ಆಚರಣೆ ನಡೆಯಿತು, ಬಳ್ಳಾರಿಯ ನನ್ನ ಅಕ್ಕ ತಂಗಿಯರಿಗೆ ಒಂದು ಸಣ್ಣ ಕೊಡುಗೆ ನೀಡುವ ಉದ್ಧೇಶ ಇತ್ತು, ನಾನು ಉಡುಗೊರೆ ನೀಡುತ್ತಿರುವೆ, ಆ ದಿನ ಗ್ರಹಣ ಇದ್ದಿದ್ದರಿಂದ ಕೊಡಲು ಆಗಿರಲಿಲ್ಲ, ಇವತ್ತು ಕೊಡುತ್ತಿದ್ದೇನೆ" ಎಂದು ಹೇಳಿದರು.

ಪಕ್ಷ ನನಗೆ ಅವಕಾಶ ನೀಡಿದರೆ ಭರತ್ ರೆಡ್ಡಿ ಸ್ಪರ್ಧೆ
ಚುನಾವಣೆಗೆ ಆಕಾಂಕ್ಷಿಯಾಗಿರುವುದರಿಂದ ಈ ರೀತಿ ಉಡುಗೊರೆ ನೀಡುತ್ತಿದ್ದೀರಾ..? ಎಂಬ ಪ್ರಶ್ನೆಗೆ ಉತ್ತರಿಸಿದ ಭರತ್ ರೆಡ್ಡಿ, "ಇದಕ್ಕೂ ಮೊದಲು ನಾನು ಹೇಳಿರುವೆ, ನಾನೇನೂ ಸಂತನಲ್ಲ, ಪಕ್ಷ ನನಗೆ ಅವಕಾಶ ನೀಡಿದರೆ ಸ್ಪರ್ಧೆ ಮಾಡುವೆ. ಹಾಗೊಂದು ವೇಳೆ ಬೇರೆಯವರಿಗೆ ಅವಕಾಶ ನೀಡಿದರೆ ಪಕ್ಷಕ್ಕಾಗಿ ಕೆಲಸ ಮಾಡುವೆ, ನಿಮಗೆ ಗೊತ್ತಿರುವಂತೆ ನಾನು ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವೆ, ಅದರ ಭಾಗವಾಗಿಯೇ ಜನರಿಗೆ ಉಡುಗೊರೆ ಹಂಚುತ್ತಿರುವೆ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ" ಎಂದರು.

ಘಟಾನುಘಟಿಗಳ ಮಧ್ಯೆ ಸ್ಪರ್ಧೆಗಿಳಿಯುತ್ತಾರಾ ಭರತ್ ರೆಡ್ಡಿ..?
ಭರತ್ ರೆಡ್ಡಿಯವರು ಇದರಲ್ಲಿ ರಾಜಕೀಯ ಇಲ್ಲ ಎಂದು ಹೇಳಿದರೂ ಕೂಡ, ಇದು ಚುನಾವಣೆಯ ತಯಾರಿಯೇ ಎಂದು ಗಣಿನಗರಿಯ ಜನರು ಆಡುವ ಮಾತಾಗಿದೆ. ಭರತ್ ರೆಡ್ಡಿ ಉಡುಗೊರೆ ಹಂಚಿಕೆ ಉಳಿದ ಆಕಾಂಕ್ಷಿಗಳಲ್ಲಿ ಸಂಚಲನಕ್ಕೆ ಕಾರಣವಾಗಿದೆ ಎಂದೇ ಹೇಳಬಹುದು. ಒಂದು ಡಜನ್ಗೂ ಅಧಿಕ ಆಕಾಂಕ್ಷಿಗಳಿರುವ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಘಟಾನುಘಟಿಗಳೇ ಇದ್ದಾರೆ. ಇವರ ಮಧ್ಯೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಾರಾ ಭರತ್ ರೆಡ್ಡಿ, ಈಗ ಫೌಂಡೇಶನ್ನ ಹೆಸರಿನಲ್ಲೇ ರಾಜಕೀಯ ಚದುರಂಗದಾಟದಲ್ಲಿ ದಾಳ ಉರುಳಿಸಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ.












Click it and Unblock the Notifications