ವೈರಲ್ ವಿಡಿಯೋ; ಕರ್ನಾಟಕ ರಾಜಕೀಯದ ಬಗ್ಗೆ ವೆಂಕಪ್ಪಯ್ಯ ಒಡೆಯರ್ ಭವಿಷ್ಯ
ವಿಜಯನಗರ, ಆಗಸ್ಟ್ 02; ಕರ್ನಾಟಕದ ರಾಜಕೀಯದಲ್ಲಿ ಕಳೆದ ವಾರ ಹಲವು ಬದಲಾವಣೆಗಳು ಆಗಿವೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ ಅವರು ಅವಧಿ ಪೂರ್ಣಗೊಳಿಸುವುದಿಲ್ಲ ಎಂದು ಹೇಳಿರುವ ಭವಿಷ್ಯ ವಾಣಿ ವೈರಲ್ ಆಗದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಾಲಯದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಭವಿಷ್ಯವಾಣಿ ಬಗ್ಗೆ ರಾಜ್ಯಾದ್ಯಂತೆ ಚರ್ಚೆಗಳು ನಡೆಯುತ್ತಿವೆ. ಮೈಲಾರ ಭವಿಷ್ಯವಾಣಿಯನ್ನು ಉಲ್ಲೇಖಿಸಿ ಧರ್ಮಕರ್ತ ಹೇಳಿರುವುದು ನಿಜವಾಗಲಿದೆಯೇ? ಕಾದು ನೋಡಬೇಕು.
ವೆಂಕಪ್ಪಯ್ಯ ಒಡೆಯರ್ ಮಾತನಾಡಿ, "ಪ್ರಸ್ತುತ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಆಯ್ಕೆಗೊಂಡಿದ್ದಾರೆ. ಆದರೆ ಬೊಮ್ಮಾಯಿ ಅವರು 6 ರಿಂದ 7 ತಿಂಗಳ ಕಾಲ ಮಾತ್ರ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ. ಇದು ಮೈಲಾರ ಭವಿಷ್ಯವಾಣಿಯಿಂದ ತಿಳಿದು ಬರುತ್ತಿದೆ" ಎಂದು ಹೇಳಿದ್ದಾರೆ.
ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಜುಲೈ 27ರಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಜುಲೈ 28ರಂದು ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ.

ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್
ಮಾರ್ಚ್ 01 ರಂದು 'ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್' ಎಂದು ಐತಿಹಾಸ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯಾಗಿತ್ತು. ಮೈಲಾರದ ಸಂಕಣ ಮರಡಿಯಲ್ಲಿ ಅಪಾರ ಭಕ್ತರ ಜಯಘೋಷ ಹರ್ಣೋದ್ವಾರದ 2021 ಸಾಲಿನ ಕಾರಣಕ ಅನುರಣಿಸಿತ್ತು. ದೇವಾಲಯದ ಮಹಾಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಸ್ವಾಮೀಜಿಗಳು ಕಾರಣಿಕ ನುಡಿಯಲ್ಲಿ ಶುಭ ಫಲ ಕಾಣಿಸುತ್ತಿಲ್ಲ ಎಂದು ಹೇಳಿದ್ದರು. ಭವಿಷ್ಯವಾಣಿಯಂತೆ ರಾಜಕೀಯ, ಕೃಷಿ, ವ್ಯವಹಾರಿಕ ಕ್ಷೇತ್ರದಲ್ಲಿ ಏರುಪೇರಾಗುವ ಸೂಚನೆ ಕಾಣಿಸುತ್ತದೆ ಎಂದು ವೆಂಕಪ್ಪಯ್ಯ ಒಡೆಯರ್ ಸ್ವಾಮೀಜಿ ವಿಶ್ಲೇಷಿಸಿದ್ದರು.

ಯಡಿಯೂರಪ್ಪ ರಾಜೀನಾಮೆ ಸಾಕ್ಷಿ
ಮೈಲಾರ ಭವಿಷ್ಯ ವಾಣಿಯಂತೆ ಕರ್ನಾಟದ ರಾಜಕೀಯದಲ್ಲಿ ಬದಲಾವಣೆಯಾಗಿದೆ. ಬಿ. ಎಸ್. ಯಡಿಯೂರಪ್ಪ ರಾಜೀನಾಮ ಇದಕ್ಕೆ ಸಾಕ್ಷಿಯಾಗಿದೆ. ಇದೀಗ ಮತ್ತೆ ಏಳು ತಿಂಗಳ ನಂತರ ಮೂರನೇ ಸಿಎಂ ಬರುವ ಬಗ್ಗೆ ಸುಳಿವು ನೀಡಿರುವ ಶ್ರೀಗಳ ಮಾತು ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್ ದೈವವಾಣಿಯಂತೆ ನಿಜವಾಗುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಬಸವರಾಜ್ ಬೊಮ್ಮಾಯಿ ದೇವರಿಗೆ ವಿಶೇಷ ಪೂಜೆ
ಕಳೆದ 15 ದಿನಗಳ ಹಿಂದೆ ಮೈಲಾರಲಿಂಗೇಶ್ವರ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿ ಎಂದು ವಿಶೇಷಪೂಜೆ ಮಾಡಿಸಲು ಬಂದಿದ್ದೇನೆ ಎಂದಿದ್ದರು. ಆದರೆ ಇನ್ನು ಸ್ವಲ್ಪ ದಿನದಲ್ಲಿ ನೀವೇ ರಾಜ್ಯದ ಸಿಎಂ ನೀವೇ ಆಗುತ್ತೀರಿ ಎಂದು ಸ್ವಾಮೀಜಿ ಆಶೀರ್ವಾದ ಮಾಡಿದ್ದರು. ಬಸವರಾಜ ಬೊಮ್ಮಾಯಿ ಸಾತ್ವಿಕ ವ್ಯಕ್ತಿ. ಸಾಕಷ್ಟು ರಾಜಕೀಯ ಸಂಕಷ್ಟಗಳು ಎದುರಾಗಲಿವೆ ಎಂದು ಭವಿಷ್ಯವನ್ನು ನುಡಿದಿದ್ದಾರೆ.

ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ
ಹೌದು ಶ್ರೀಕ್ಷೇತ್ರ ಮೈಲಾರ ಲಿಂಗೇಶ್ವರನ ದೈವವಾಣಿಯಂತೆ ಮೊದಲನೆಯವರು ಬಿ. ಎಸ್. ಯಡಿಯೂರಪ್ಪ, ಎರಡನೇಯವರು ಬಸವರಾಜ್ ಬೊಮ್ಮಾಯಿ, ಮುಂದಿನ ಅವಧಿಗೆ ಮೂರನೇ ಮುಖ್ಯಮಂತ್ರಿ ಗಡ್ಡದಾರಿಯಾಗಿರುತ್ತಾರೆ ಎಂದು ಭವಿಷ್ಯವಾಣಿ ಹೇಳಲಾಗಿದೆ. ಮೈಲಾರ ಭವಿಷ್ಯವಾಣಿಯಂತೆ ಪ್ರಸ್ತುತ ರಾಜಕಾರಣ ನಡೆಯುತ್ತಿದೆ. ಮುಂದೆಯೋ ಬದಲಾವಣೆ ನಡೆಯಲಿದೆಯೇ ಕಾದು ನೋಡಬೇಕು. ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಲಿದೆ. ಹಾಗಾಗಿ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅಲ್ಲದೇ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು ಎಂದು ಶ್ರೀಗಳು ಹೇಳಿದ್ದಾರೆ.












Click it and Unblock the Notifications