ಸುಕ್ಷೇತ್ರ ಮೈಲಾರ ಕಾರ್ಣಿಕ ಭವಿಷ್ಯ: ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್!
ಬಳ್ಳಾರಿ, ಫೆಬ್ರವರಿ 22: ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ವಾರ್ಷಿಕ ಕಾರ್ಣಿಕ ಉತ್ಸವ ಸಾಂಗವಾಗಿ ಜರುಗಿದೆ.
ಶತ ಶತಮಾನಗಳಿಂದ ಹೇಳುತ್ತಾ ಬರುತ್ತಿರುವ ಕಾರ್ಣಿಕ ಭವಿಷ್ಯದ ಮುನ್ನುಡಿ ಎಂದು ಭಕ್ತರ ನಂಬಿಕೆಯಾಗಿದೆ. ಐತಿಹಾಸಿಕ ಜಾತ್ರೆಯಲ್ಲಿ ಗೊರವಯ್ಯ ರಾಮಯ್ಯ, "ಕಬ್ಬಿಣದ ಸರಪಳಿ ಹರಿದೀತಲೇ ಪರಾಕ್" ಎಂದು ಈ ವರ್ಷದ ಕಾರ್ಣಿಕದಲ್ಲಿ ನುಡಿದ ಭವಿಷ್ಯ ನುಡಿದರು.
ಈ ಬಗ್ಗೆ ನಾಡಿನ ಭವಿಷ್ಯವಾಣಿಯಾದ ಕಾರ್ಣಿಕ, ಶುಭಾಶುಭ ಫಲಗಳ ಬಗ್ಗೆ ಸಾರ್ವಜನಿಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ರಾಜಕೀಯ, ಸಾಮಾಜಿಕ ಹಾಗೂ ಇತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರುವ ವಿಶ್ಲೇಷಣೆಗಳು, ವಿಶೇಷ ಅರ್ಥಗಳು ಕೇಳುತ್ತಿದ್ದು, ಪರಸ್ಪರ ಚರ್ಚೆಗಳಿಗೆ ಕಾರಣವಾಗಿದೆ.
'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್' ಮೈಲಾರ ಕಾರ್ಣಿಕ ಭವಿಷ್ಯ
ಗೊರವಪ್ಪ 2017ರ ಫೆಬ್ರವರಿ ಮೊದಲ ವಾರದಲ್ಲಿ 'ಆಕಾಶ ಗಿಡಕ್ಕೆ ಗಿಣಿ ಕಿತ್ತಿತ್ತಲೆ ಪರಾಕ್' ಎಂದು ಕಾರ್ಣಿಕ ನುಡಿ ಹೇಳಿದ್ದರು. ಪ್ರಸ್ತುತ ರಾಜಕಾರಣದ ಸ್ಥಿತಿ ಕುರಿತಂತೆ ಭವಿಷ್ಯ ನುಡಿದಿದ್ದು ನಿಜವಾಗಿದೆ, ಜೆಡಿಎಸ್ ಗೆ ಅಧಿಕಾರ ಸಿಕ್ಕಿದೆ ಎಂದು ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ಧರ್ಮದರ್ಶಿ ವೆಂಕಪ್ಪ ಒಡೆಯರ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಬಾರಿ ಭವಿಷ್ಯದ ವಿಶ್ಲೇಷಣೆ
ಗೊರವಯ್ಯ ರಾಮಯ್ಯ ಅವರು ಈ ಬಾರಿಯ ಭವಿಷ್ಯ ನುಡಿಯನ್ನು ಕಾರ್ಣಿಕರು ವಿಶ್ಲೇಷಣೆ ಮಾಡಿದ್ದಾರೆ. ಅದರಂತೆ, "ರಾಜಕೀಯ ನಾಯಕರ ಸಂಕಲ್ಪ ಸಿದ್ಧಿಸುತ್ತದೆ. ರಾಜ್ಯದಲ್ಲಿ ರೈತರ ಸಂಕಷ್ಟಗಳು ನಿವಾರಣೆಯಾಗಲಿವೆ. ವ್ಯಾಪಾರ ವಾಣಿಜ್ಯ ಉದ್ಯಮಗಳಲ್ಲಿ ತೊಡಗಿಸಿಕೊಂಡವರಿಗೆ ಈ ಬಾರಿ ಒಳ್ಳೆಯದಾಗಲಿದೆ," ಎಂಬರ್ಥ ಬರಲಿದೆ.
ಕಬ್ಬಿಣ ಸರಪಳಿ ಎಂದರೆ ಮೈತ್ರಿ ಸರ್ಕಾರ ಎಂಬರ್ಥ, ಮೈತ್ರಿ ಸರ್ಕಾರಕ್ಕೆ ಉಳಿಗಾಲವಿಲ್ಲ, ಸರ್ಕಾರ ಉರುಳಿಬೀಳಲಿದೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು, ಇದು ಮಹಾಘಟಬಂದನ್ ಬಗ್ಗೆ ಹೇಳಿದ ಮಾತು ಎಂದಿದ್ದಾರೆ. ಬಹುಮತ ಯಾರಿಗೂ ಸಿಗಲ್ಲ, ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅನಿವಾರ್ಯ. ಕಬ್ಬಿಣದ ಅಧಿಪತಿ ಶನಿ ಕೃಪೆ ಸಿಕ್ಕಿ ರೈತರಿಗೆ ಒಳಿತಾಗಲಿದೆ ಎನ್ನಲಾಗಿದೆ ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.ಕಳೆದ ಬಾರಿಯ ಗೊರವಪ್ಪನ ಭವಿಷ್ಯದ ಅರ್ಥ
ಗೊರವಪ್ಪನ ಕಾರ್ಣಿಕ ಭವಿಷ್ಯ,'ಆಕಾಶ ಗಿಡಕ್ಕೆ ಗಿಣಿ ಕಿತ್ತಿತ್ತಲೆ ಪರಾಕ್' ಅರ್ಥ: ಆಕಾಶದಂತಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಅಧಿಕಾರ ಸಿಕ್ಕಿಲ್ಲ. ಬದಲಿಗೆ ಗಿಳಿಯಂತಿರುವ ಹಸಿರು ಬಣ್ಣದ ಸಣ್ಣ ಪಕ್ಷ ಜೆಡಿಎಸ್ಗೆ ಅಧಿಕಾರ ಸಿಕ್ಕಿದೆ ಎಂದು ವೆಂಕಪ್ಪ ಒಡೆಯರ್ ವಿಶ್ಲೇಷಿಸಿದ್ದಾರೆ. ಈ ಹಿಂದೆ ಸಹ ಗೊರವಪ್ಪ ಹೇಳಿರುವ ಕಾರ್ಣಿಕಗಳು ಸತ್ಯವಾಗಿದ್ದು, ಇದು ಶ್ರೀಕ್ಷೇತ್ರದ ಮಹಿಮೆಯಾಗಿದೆ ಎಂದು ಒಡೆಯರ್ ಹೇಳಿದ್ದಾರೆ.
ಗೊರವಯ್ಯ ನುಡಿಯುವ ಭವಿಷ್ಯ
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ನೈಋತ್ಯಕ್ಕಿರುವ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ತುಂಗಭದ್ರಾ ನದಿ ತಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಕುರುಬ ಗೌಡ ಸಮುದಾಯದರು ಆರಾಧಿಸುವ ಈ ಶಿವನ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಕಾರ್ಣಿಕೋತ್ಸವ ಜಗತ್ಪ್ರಸಿದ್ದ. ಹಾಗೇ, ಒಂದೇ ವಾಕ್ಯದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ.
ಕಟ್ಟು ನಿಟ್ಟಿನ ಉಪವಾಸ, ಜಪ ತಪದಲ್ಲಿರುವ ಗೊರವಯ್ಯ
ಭವಿಷ್ಯವಾಣಿ ನುಡಿಯುವ ಕಾರ್ಣಿಕೋತ್ಸವದ ಮೊದಲು ಗೊರವಯ್ಯ ಒಂಬತ್ತು ದಿನಗಳ ಕಟ್ಟುನಿಟ್ಟಿನ ಉಪವಾಸ, ಜಪ, ತಪದಲ್ಲಿರುತ್ತಾನೆ. ತದನಂತರ ಕ್ಷೇತ್ರದ ಧರ್ಮದರ್ಶಿ ಯವರೊಂದಿಗೆ ಮತ್ತು ವಿಜಯನಗರದ ಅರಸರು ಅರ್ಪಿಸಿದ್ದ ಮೂರ್ತಿಯೊಂದಿಗೆ ಕುದುರೆ ಏರಿ ಡಂಕನಮರಡಿ ಎನ್ನುವ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಧರ್ಮದರ್ಶಿಗಳಿಂದ ಬಂಡಾರದ ಆಶೀರ್ವಾದ ಪಡೆದು ಕ್ಷೇತ್ರದ ಪರಂಪರೆಯಂತೆ 15 ಅಡಿ ಎತ್ತರದ ಬಿಲ್ಲುಗಂಬವನ್ನು ಸರ ಸರನೇರಿ, ಆಕಾಶವನ್ನು ನೋಡುತ್ತಾ ಒಂದು ವಾಕ್ಯದ ಭವಿಷ್ಯವನ್ನು ನುಡಿಯುತ್ತಾನೆ.