ಬಳ್ಳಾರಿ: ಭಾರತ್ ಜೋಡೊ ಸಮಾವೇಶದ ಕಸ ಸ್ವಚ್ಛಗೊಳಿಸಿದ ಸಚಿವ ಶ್ರೀರಾಮುಲು
ಬಳ್ಳಾರಿ, ಅಕ್ಟೋಬರ್ 17: ಜಿಲ್ಲೆಯ ಮುನಿಸಿಪಲ್ ಕಾಲೇಜಿನ ಮೈದಾನದಲ್ಲಿ ಅಕ್ಟೋಬರ್ 15ರಂದು ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸಲಾಗಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಅದ್ಧೂರಿಯಾಗಿ ಭಾರತ್ ಜೋಡೊ ಯಾತ್ರೆಯ ಬಹಿರಂಗ ಸಮಾವೇಶ ನಡೆಸಿದ್ದರು.
ಭಾರತ್ ಜೋಡೊ ಯಾತ್ರೆಯ ಬಹಿರಂಗ ಸಮಾವೇಶದ ನಂತರ ಮುನಿಸಿಪಲ್ ಕಾಲೇಜಿನ ಮೈದಾನದಲ್ಲಿ ಕಸದ ರಾಶಿ ಬಿದ್ದಿತ್ತು. ಕಾಂಗ್ರೆಸ್ ಸಮಾವೇಶದಿಂದ ಆದ ಕಸವನ್ನು ಅಕ್ಟೋಬರ್ 16 ಭಾನುವಾರ ಮಧ್ಯಾಹ್ನ ಸಚಿವ ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ, ಮಾಜಿ ಸಂಸದೆ ಜೆ.ಶಾಂತಾ ಸೇರಿದಂತೆ ಹಲವು ನಾಯಕರು ಸ್ವಚ್ಛಗೊಳಿಸಿದರು.

ಮೈದಾನ ಸ್ವಚ್ಛತೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು "ಕಾಂಗ್ರೆಸ್ನವರು ಹೊಲಸು ಮಾಡಿ, ರಾಡಿ ಮಾಡಿ ಕುಳಿತಿದಿದ್ದಾರೆ, ಸೋಮವಾರ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು, ರಾಜಕಾರಣಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಾರದೆಂದು ಮತ್ತು ಪ್ರಧಾನಿ ಮೋದಿಯವರ ಕರೆಯಾಗಿರುವ ಸ್ವಚ್ಛ್ ಭಾರತ್ ಅಭಿಯಾನ ಹಿನ್ನೆಲೆಯಲ್ಲಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ಮೈದಾನವನ್ನು ಸ್ವಚ್ಛ ಮಾಡಿದ್ದೇವೆ, ಈ ಕಾರ್ಯವನ್ನು ಅವರ ಕಾರ್ಯಕರ್ತರು ಮಾಡಬೇಕಿತ್ತು, ಆದರೆ ನಾವು ಮಾಡಿದ್ದೇವೆ" ಎಂದರು.
ಇನ್ನು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವ ಶ್ರೀರಾಮುಲು, "ಶನಿವಾರ ಬಳ್ಳಾರಿಯ ಮುನಿಸಿಪಲ್ ಮೈದಾನದಲ್ಲಿ ಭಾರತ್ ಜೋಡೋ ಸಮಾವೇಶದಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿದು ವೀರಾವೇಶದ ಮಾತುಗಳನ್ನಾಡಿದ್ದ ಕಾಂಗ್ರೆಸ್ ನಾಯಕರಿಗೆ ಕನಿಷ್ಟ ಪಕ್ಷ ತಾವು ಮಾಡಿದ್ದ ಹೊಲಸನ್ನು ಸ್ವಚ್ಛಗೊಳಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಇದ್ದಂತೆ ಕಾಣಲಿಲ್ಲ. ಸ್ವತಃ ನಾನು ಹಾಗೂ ನಮ್ಮ ಪಕ್ಷದ ಮುಖಂಡರು ಸ್ವಚ್ಛಗೊಳಿಸುವ ಮೂಲಕ ಕೈ ಕೊಳಕನ್ನು ತೆಗೆದುಹಾಕಿದೆವು," ಎಂದಿದ್ದಾರೆ.

"ನಾವು ಮಾತ್ರ ಸ್ವಚ್ಛವಾಗಿದ್ದರೆ ಸಾಲದು. ನಮ್ಮ ಸುತ್ತಮುತ್ತಲಿನ ಪರಿಸರವೂ ಅಷ್ಟೇ ಶುಭ್ರವಾಗಿರಬೇಕು ಎಂಬ ಕಾರಣಕ್ಕಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಜೀ ಸ್ವಚ್ಛ ಭಾರತ್ ಯೋಜನೆ ಪ್ರಾರಂಭಿಸಿದ್ದರು. ಕಡೆ ಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸ್ಥಳೀಯ ನಾಯಕರಿಗಾದರೂ ಇದರ ಬಗ್ಗೆ ಅರಿವು ಮೂಡಿಸದಿರುವುದು ನನಗೆ ಆಶ್ಚರ್ಯ ಉಂಟು ಮಾಡಿದೆ. ರಾಹುಲ್ ಗಾಂಧಿಯವರೇ, ದೇಶ ಜೋಡಿಸುತ್ತೇನೆ ಎಂದು ಕೇವಲ ಪಾದಯಾತ್ರೆ ನಡೆಸಿದರೆ ಸಾಲದು. ಭಾರತವನ್ನು ನೀವು ಬೇಸೆಯುವ ಯತ್ನ ಮಾಡಿ. ನಮ್ಮದೇನು ಅಭ್ಯಂತರ ಇಲ್ಲ. ಆದರೆ, ನೀವೇ ನಿಂತು ಅಬ್ಬರಿಸಿ ಬೊಬ್ಬಿರಿಸಿದ ಸ್ಥಳವನ್ನು ಸ್ವಚ್ಛಗೊಳಿಸುವಂತೆ ನಿಮ್ಮ ಕಾರ್ಯಕರ್ತರಿಗೆ ಕಿವಿ ಮಾತು ಹೇಳದಿದ್ದರೆ, ನಿಮ್ಮ ಪಾದಯಾತ್ರೆಯ ಸದುದ್ದೇಶ ಈಡೇರುತ್ತದೆಯೇ..?," ಎಂದು ಪ್ರಶ್ನಿಸಿದ್ದಾರೆ.

ಇನ್ನು ಮುನಿಸಿಪಲ್ ಕಾಲೇಜಿನ ಮೈದಾನದ ಸ್ಛಚ್ಛತಾ ಕಾರ್ಯಕ್ರಮದಲ್ಲಿ, ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ, ಮಾಜಿ ಸಂಸದೆ ಜೆ.ಶಾಂತಾ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ಮುರಾರಿಗೌಡ, ಗುರುಲಿಂಗನಗೌಡ ಸೇರಿದಂತೆ ಹಲವಾರು ಸ್ಥಳೀಯ ಬಿಜೆಪಿ ನಾಯಕರು ಭಾಗಿಯಾಗಿಯಾಗಿದ್ದರು.












Click it and Unblock the Notifications