ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಎಚ್.ಕೆ. ಪಾಟೀಲ್ ಆರೋಪ
ವಿಜಯನಗರ, ಆಗಸ್ಟ್ 28: "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ," ಎಂದು ಮಾಜಿ ಸಚಿವ ಎಚ್. ಕೆ. ಪಾಟೀಲ್ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಶುಕ್ರವಾರ ಹೊಸಪೇಟೆ ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಈ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರರವರು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ," ಎಂದು ಕಿಡಿಕಾರಿದರು.
"ರಾತ್ರಿ ಸಮಯದಲ್ಲಿ ನಿರ್ಜನ ಪ್ರದೇಶಕ್ಕೆ ಹೋಗುವುದಕ್ಕೆ ಏನು ಕೆಲಸ ಇತ್ತು ಎಂಬ ಹೇಳಿಕೆಯಿಂದ ಅಪರಾಧಿಗಳಿಗೆ ಏನು ಸಂದೇಶ ಕೊಡ್ತಿದ್ದೀರಾ? ನಿಮ್ಮ ಮಾತುಗಳೇ ನಿಮ್ಮ ಸಂಸ್ಕೃತಿ ಏನು ಅಂತ ತಿಳಿಸಿ ಕೊಡುತ್ತದೆ," ಎಂದು ಎಚ್. ಕೆ. ಪಾಟೀಲ್ ವಾಗ್ದಾಳಿ ನಡೆಸಿದರು.

"ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಧ್ಯರಾತ್ರಿ ಮಹಿಳೆ ಸ್ವತಂತ್ರವಾಗಿ ಓಡಾಡಬೇಕು ಅಂತ ಗಾಂಧೀಜಿ ಹೇಳಿದ್ದಾರೆ. ಆದರೆ ಇವರುಗಳು ಮಹಿಳೆಯರು ಹೊರಗಡೆ ಬರಬಾರದು ಅಂತಿದ್ದಾರೆ. ಈ ಸಮಾಜವನ್ನು ಯಾವ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ." ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಇಂತಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿಯವರು ಸೂಕ್ಷ್ಮವಾಗಿ ಗಮನಿಸಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು," ಎಂದು ಎಚ್.ಕೆ. ಪಾಟೀಲ್ ಆಗ್ರಹಿಸಿದರು.
ಅಸಂವಿಧಾನಿಕ ಬಿಜೆಪಿ ಸರ್ಕಾರ: ಮಧು ಬಂಗಾರಪ್ಪ
"ಈಗಿನ ರಾಜ್ಯ ಬಿಜೆಪಿ ಸರ್ಕಾರ ಸಂವಿಧಾನಿಕವಾಗಿ ಆಗಿದ್ದಲ್ಲ," ಎಂದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಆರೋಪಿಸಿದರು.

ಅವರು ಹೊಸಪೇಟೆ ನಗರದ ಖಾಸಗಿ ಹೊಟೇಲ್ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮೈಸೂರಿನ ಸಾಮೂಹಿಕ ಅತ್ಯಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, "ದೇವರು- ದಿಂಡರು ಅಂತ ಹೇಳಿಕೊಳ್ಳುವ ಬಿಜೆಪಿ ಪಕ್ಷದವರು, ಬೇಜವಾಬ್ದಾರಿ ಮಾತುಗಳನ್ನು ಹೇಳುವುದು ಪಕ್ಷಕ್ಕೆ ಅಗೌರವ ತರುತ್ತದೆ," ಎಂದರು.
"ಈ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರರ ಬೇಜವಾಬ್ದಾರಿ ಹೇಳಿಕೆಯನ್ನು ಈ ರಾಜ್ಯದ ಜನ ಕೇಳಿಸಿಕೊಳ್ಳುವ ದುಸ್ಥಿತಿ ಬಂದಿದೆಯಲ್ಲಾ ಎನ್ನುವುದೇ ನಾಚಿಕೆಗೇಡಿನ ವಿಚಾರವಾಗಿದೆ," ಎಂದು ಟೀಕಿಸಿದರು.
"ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡಬಾರದು, ಇದು ಒಳ್ಳೆಯದಲ್ಲ. ಗೃಹ ಸಚಿವರ ಹೇಳಿಕೆಯನ್ನು ಹೇಗೆ ಸಮರ್ಥನೆ ಮಾಡಿಕೊಳ್ತಾರೆ ಎನ್ನುವುದಕ್ಕೆ ಬಿಜೆಪಿ ಮುಖಂಡರೇ ಉತ್ತರ ಹೇಳಬೇಕು."
"ರಾಜ್ಯದ ಜನ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವ್ಯವಹಾರ ಮಾಡಿಕೊಂಡು ಪಕ್ಷ ಕಟ್ಟಿದರೆ ಹೀಗೇ ಆಗೋದು. ನಾಯಕತ್ವ ಬದಲಾವಣೆ, ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದರೆ ಹೀಗೆ ಆಗೋದು ಇದೆಲ್ಲಾ ಸರಿಯಲ್ಲ," ಎಂದು ಬಿಜೆಪಿ ಪಕ್ಷಕ್ಕೆ ಟಾಂಗ್ ನೀಡಿದರು.
ಇನ್ನು ಕಾಂಗ್ರೆಸ್ನವರು ರೇಪ್ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ, "ಇದಕ್ಕೆ ಪ್ರತಿಕ್ರಿಯೆ ಕೊಡುವುದೇ ಸರಿಯಲ್ಲ. ನನಗೆ ಮಾನ ಮರ್ಯಾದೆ ಇದೆ, ಆರಗ ಜ್ಞಾನೇಂದ್ರ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ," ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.












Click it and Unblock the Notifications