ಕೆ.ಎನ್.ಕೆ ಸ್ವಾಮಿ & ಕಂಪನಿಗೆ ರಾಜ್ಯ ಮಟ್ಟದ ಪ್ರಶಸ್ತಿ
ಬೆಂಗಳೂರು-ಬಳ್ಳಾರಿ, ಮಾರ್ಚ್ 6: ನಲವತ್ತ ಮೂರನೇ ರಾಜ್ಯ ಮಟ್ಟದ ಸುರಕ್ಷತಾ ಪ್ರಶಸ್ತಿಯನ್ನು ಬೆಂಗಳೂರಿನ ಕೆ.ಎನ್.ಕೆ ಸ್ವಾಮಿ & ಕಂಪನಿ ಪಡೆದಿದೆ. ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ್ ಪ್ರಶಸ್ತಿ ಪ್ರದಾನ ಮಾಡಿದರು. ಕಟ್ಟಡ ನಿರ್ಮಾಣ ಪ್ರಾಜೆಕ್ಟ್ ಸೈಟ್ ನಲ್ಲಿ ತೆಗೆದುಕೊಂಡ ಸುರಕ್ಷತಾ ಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು.
ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ವಿವಿಧ ವಿಭಾಗಗಳಲ್ಲಿ ನೀಡುವ ಪ್ರಶಸ್ತಿಯನ್ನು ಬಯೋಕಾನ್, ಟೊಯೋಟಾ ಕಿರ್ಲೋಸ್ಕರ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಕಂಪೆನಿಗಳು ಪಡೆದಿವೆ. ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಸುರಕ್ಷತೆಯ ವಿಚಾರದಲ್ಲಿ ರಾಜ್ಯಮಟ್ಟದ ಸ್ಪರ್ಧೆಯನ್ನು ನಡೆಸಿತ್ತು. ಯೋಜನೆಯ ಕಾಮಗಾರಿಗಳು 2013ರಲ್ಲಿ ನಡೆದಿರಬೇಕು ಹಾಗೂ 25 ಕೋಟಿ ರೂ. ಮೊತ್ತಕ್ಕಿಂತ ಹೆಚ್ಚಿನದ್ದಾಗಿರಬೇಕು ಎಂಬ ಷರತ್ತು ಹಾಕಲಾಗಿತ್ತು.
ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೆ.ಎನ್.ಕೆ ಸ್ವಾಮಿ & ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಶಿಷ್ ಕೃಷ್ಣಸ್ವಾಮಿ, ಪ್ರಶಸ್ತಿ ಲಭಿಸಿರುವುದು ಕೆಎನ್ ಕೆ ಗ್ರೂಪ್ ಗೆ ಸಂದ ಗೌರವ. ಎಲ್ಲಾ ಸೈಟ್ ಗಳಲ್ಲೂ ವಿಶ್ವದರ್ಜೆಯ ಸುರಕ್ಷತಾ ಕ್ರಮಕ್ಕೆ ನಾವು ಒತ್ತು ನೀಡುತ್ತೇವೆ. ಎರಡು ವರ್ಷಗಳ ಹಿಂದೆ ನಾವು ಎರಡನೇ ಸ್ಥಾನದಲ್ಲಿದ್ದೆವು. ಆದರೆ ಈ ಬಾರಿ ನಾವು ಕಟ್ಟಡ ನಿರ್ಮಾಣ ಸ್ಥಳದ ಸುರಕ್ಷತೆ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದೇವೆ ಎಂದರು.
ಇದೇ ವೇಳೆ ಮಾತನಾಡಿದ ಕೆಎನ್ ಕೆ ಸಮೂಹ ಮುಖ್ಯಸ್ಥ ಕೆಎನ್ ಕೆ ಸ್ವಾಮಿ, ಕೃಷಿ ಬಳಿಕ ಕಟ್ಟಡ ನಿರ್ಮಾಣ ದೇಶದ ಎರಡನೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಯ ಮೂಲ. ಕಾರ್ಮಿಕರಿಗೆ ರಕ್ಷಣೆ ನೀಡುವುದು ನಮ್ಮಂತಹ ಕಂಪೆನಿಗಳ ಜವಾಬ್ದಾರಿ. ಇದನ್ನು ನಾವು ಮಾಡುತ್ತಿದ್ದೇವೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ ಎಂದರು.
ಸಮಾರಂಭದಲ್ಲಿದ್ದ ಗಣ್ಯರು: ಸಮಾರಂಭದಲ್ಲಿ ಬಳ್ಳಾರಿ ಶಾಸಕ ಅನಿಲ್ ಎಚ್.ಲಾಡ್, ಬಳ್ಳಾರಿ ಸಂಸದೆ ಜೆ.ಶಾಂತಾ, ಬಳ್ಳಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಕಾರ್ಮಿಕ ಇಲಾಖೆ ಕಾರ್ಯದರ್ಶಿ, ಬಳ್ಳಾರಿ ಜಿಲ್ಲಾಧಿಕಾರಿ ಆದಿತ್ಯ ಬಿಸ್ವಾಸ್ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಸುರಕ್ಷತಾ ದಿನ: ಮಾರ್ಚ್ 4ರಂದು ರಾಷ್ಟ್ರೀಯ ಸುರಕ್ಷತಾ ದಿನ/ ಸುರಕ್ಷತಾ ಸಪ್ತಾಹ ಆರಂಭವಾಗುತ್ತದೆ. ಸುರಕ್ಷತೆಯ ಮುನ್ನೆಚ್ಚರಿಕೆಯಾಗಿ ಕೈಗಾರಿಕಾ ಪ್ರದೇಶಗಳಲ್ಲಿ ನಡೆಯುತ್ತಿರುವ ಅವಘಡಗಳಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ಸುರಕ್ಷತಾ ಅಭಿಯಾನದ ಮೂಲಕ ಕಂಪೆನಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. (ಒನ್ಇಂಡಿಯಾ ಕನ್ನಡ)