ಎನ್.ವೈ. ಗೋಪಾಲಕೃಷ್ಣಗೆ ಬಿಜೆಪಿಯಿಂದ ಹೀಗೊಂದು ಫ್ಯಾಮಿಲಿ ಪ್ಯಾಕೇಜ್!
ಬಳ್ಳಾರಿ, ಏಪ್ರಿಲ್ 18 : ಎನ್.ವೈ. ಗೋಪಾಲಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವುದು ಏಕೆ? ಯಾವ ಕಾರಣಕ್ಕಾಗಿ ಗೊತ್ತೆ?
ಐದು ಬಾರಿ ಕಾಂಗ್ರೆಸ್ ಶಾಸಕರಾಗಿ, ಒಮ್ಮೆ ಉಪ ಸಭಾಪತಿ ಆಗಿ, ಜನಸೇವೆ ಸಲ್ಲಿಸಿರುವ ಎನ್.ವೈ. ಗೋಪಾಲಕೃಷ್ಣ ಅವರ ಅಣ್ಣ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಚಿತ್ರದುರ್ಗದ ಸಂಸದರಾಗಿ, ಬಳ್ಳಾರಿ ಸಂಸತ್ತಿಗೆ ಸ್ಪರ್ಧಿಸಿ, ಬಿ. ಶ್ರೀರಾಮುಲು ಅವರಿಂದ ಸೋಲು ಅನುಭವಿಸಿದ್ದರು.
ರೆಡ್ಡಿ ಸಹೋದರರು, ಬಿ. ಶ್ರೀರಾಮುಲು ಜೊತೆಗಿನ ಒಳ ಒಪ್ಪಂದದ ಕಾರಣ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಿದ್ದ ಎನ್.ವೈ. ಗೋಪಾಲಕೃಷ್ಣ, ಅಣ್ಣನ ರಾಜಕೀಯ ಪುನರುತ್ಥಾನಕ್ಕಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.

ಎನ್.ವೈ. ಕುಟುಂಬದ ಎಲ್ಲ ಸದಸ್ಯರು ಬಿಜೆಪಿ ಸೇರಿದಲ್ಲಿ, ಎನ್.ವೈ.ಹನುಮಂತಪ್ಪ ಅವರನ್ನು ದೇಶದ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಿಸಲಾಗುವುದು ಅಥವಾ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿ. ಶ್ರೀರಾಮುಲು ಗೆಲುವು ಸಾಧಿಸಿ, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು, ಉಪ ಮುಖ್ಯಮಂತ್ರಿ ಆದಲ್ಲಿ, ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.
ಪ್ರಸ್ತುತ ಎನ್.ವೈ. ಗೋಪಾಲಕೃಷ್ಣ ಅವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.












Click it and Unblock the Notifications