ದ್ವಿತೀಯ ಪಿಯುಸಿ ಫಲಿತಾಂಶ: ಬಡತನದಲ್ಲೇ ಅರಳಿದ ಟಾಪರ್ ಚೈತ್ರಾ
ಇರುವ ಒಂದೆಕರೆ ಜಮೀನಿನಲ್ಲೇ ಶೇಂಗಾ ಬೆಳೆದು ಸಂಸಾರ ಸಾಗಿಸುತ್ತಿದ್ದ ತಂದೆ ಕೊಟ್ರೇಶ್, ಮಗಳು ಓದುವುದಕ್ಕೆ ಮಾತ್ರ ಎಂದಿಗೂ ಅಡ್ಡಿಯಾದವರಲ್ಲ. ಒಂದರ್ಥದಲ್ಲಿ ಮನೆಯ ಬಡತನವೇ ಚೈತ್ರಾಳ ಸಾಧನೆಗೆ ಸ್ಫೂರ್ತಿ.
ಬಳ್ಳಾರಿ, ಮೇ 12: ನಿನ್ನೆ (ಮೇ 11) ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರಿನಲ್ಲಿ ಸಂಭ್ರಮ ಮನೆಮಾಡಿತ್ತು. ಬಡ ಕೃಷಿಕ ಕೊಟ್ರೇಶ್ ಬಣಕಾರ ಮತ್ತು ಗೃಹಿಣಿ ಕವಿತಾ ಅವರ ಪುತ್ರಿ ಚೈತ್ರಾ ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನಗಳಿಸಿದ್ದಾಳೆಂಬ ಸುದ್ದಿ ಇಡೀ ಗ್ರಾಮವನ್ನೂ ಸಂಭ್ರಮದಲ್ಲಿ ತೇಲಿಸಿತ್ತು.
ಒಟ್ಟು 589 (600) ಅಂಕ ಗಳಿಸಿದ ಚೈತ್ರಾ ತನ್ನ ತಂದೆ-ತಾಯಿ, ಶಿಕ್ಷಕರು, ಬಂಧುಗಳಿಗೆ ಕೀರ್ತಿ ತಂದಿದ್ದಾಳೆ. ಇತಿಹಾಸ ಮತ್ತು ರಾಜ್ಯ ಶಾಸ್ತ್ರದಲ್ಲಿ 100 ಕ್ಕೆ 100 ಅಂಕ, ಕನ್ನಡ ಮತ್ತು ಶಿಕ್ಷಣ ವಿಷಯದಲ್ಲಿ 98, ಐಚ್ಛಿಕ ಕನ್ನಡದಲ್ಲಿ 97, ಸಂಸ್ಕೃತದಲ್ಲಿ 96 ಅಂಕ ಗಳಿಸಿರುವ ಚೈತ್ರಾ ಕೊಟ್ಟೂರಿನ ಇಂದು ಪಿಯುಸಿ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿನಿ.[ತಾಯಿಯೇ ನನಗೆ ಸ್ಫೂರ್ತಿ: ಪಿಯುಸಿ ಟಾಪರ್ ಸೃಜನಾ]
ಇರುವ ಒಂದೆಕರೆ ಜಮೀನಿನಲ್ಲೇ ಶೇಂಗಾ ಬೆಳೆದು ಸಂಸಾರ ಸಾಗಿಸುತ್ತಿದ್ದ ತಂದೆ ಕೊಟ್ರೇಶ್, ಮಗಳು ಓದುವುದಕ್ಕೆ ಮಾತ್ರ ಎಂದಿಗೂ ಅಡ್ಡಿಯಾದವರಲ್ಲ. ಒಂದರ್ಥದಲ್ಲಿ ಮನೆಯ ಬಡತನವೇ ಚೈತ್ರಾಳ ಸಾಧನೆಗೆ ಸ್ಫೂರ್ತಿ.[ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಸೃಜನಾ, ರಾಧಿಕಾ, ಚೈತ್ರಾ ಟಾಪರ್ಸ್]
ರ್ಯಾಂಕ್ ಬರುತ್ತೇನೆಂಬ ನಿರೀಕ್ಷೆಯೇನೋ ಇತ್ತು. ಆದರೆ ರಾಜ್ಯಕ್ಕೇ ಮೊದಲ ರ್ಯಾಂಕ್ ಬರುತ್ತೇನೆಂದುಕೊಂಡಿರಲಿಲ್ಲಎಂದು ತಮ್ಮ ಸಂತಸವನ್ನು ಹಂಚಿಕೊಂಡ ಚೈತ್ರಾಳಿಗೆ ಕೆಎಎಸ್ ಅಧಿಕಾರಿಯಾಗುವ ಆಸೆ.'[ಕರ್ನಾಟಕ ಪಿಯುಸಿ ಫಲಿತಾಂಶ: ಮೈಸೂರಿಗೆ ಸ್ವಲ್ಪ ಸಿಹಿ - ಸ್ವಲ್ಪ ಕಹಿ]
ಒಬ್ಬ ಸಾಮಾನ್ಯ ಕೃಷಿಕನ ಮಗಳಾಗಿ, ಬಡತನದಲ್ಲೇ ಬೆಳೆದು ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸುವುದಂದ್ರೆ ಸುಲಭದ ಮಾತಲ್ಲ. ಚೈತ್ರಾ ಆ ಸಾಧನೆ ಮಾಡುವ ಮೂಲಕ ತಮ್ಮಪ್ಪ-ಅಮ್ಮ, ಒಡಹುಟ್ಟಿದವರು ಮತ್ತು ಊರಿಗೆ ಕೀರ್ತಿ ತಂದಿದ್ದಾರೆ.