ಅಕ್ಕ ಆಯೋಜಕರು ಮಡಿಕೇರಿಯ ಗ್ರಾಮ ದತ್ತು ಪಡೆಯಲಿ ಎಂದ ಕನ್ನಡ ಸಂಘಟನೆಗಳು
ಬಳ್ಳಾರಿ, ಆಗಸ್ಟ್.31: ಸಾಲಮನ್ನಾ, ಬರಗಾಲ, ಪ್ರವಾಹದ ಕಾರಣ ರಾಜ್ಯದ ಜನತೆ ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ 75 ಲಕ್ಷ ರೂಪಾಯಿಗಳನ್ನು ಅಕ್ಕ' ಸಮ್ಮೇಳನಕ್ಕಾಗಿ ಖರ್ಚು ಮಾಡುತ್ತಿರುವುದಕ್ಕೆ ಬಳ್ಳಾರಿಯ ವಿವಿಧ ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಅಕ್ಕ' ಆಯೋಜಕರು ಮಡಿಕೇರಿಯ ಒಂದು ಗ್ರಾಮ ದತ್ತು ಪಡೆದು, ಅಭಿವೃದ್ಧಿ ಮಾಡಲಿ ಎಂದು ಸಂಘಟನೆಗಳು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, ಜಿಲ್ಲಾಧಿಕಾರಿಗಳ ಮೂಲಕ ರವಾನೆ ಮಾಡಿದ್ದಾರೆ.
ಕ್ಯಾನ್ಸರ್ ಪತ್ತೆಗೆ 'ಅಕ್ಕ'ನಿಂದ ಮೊಬೈಲ್ ಮ್ಯಾಮೋಗ್ರಫಿ ಬಸ್ ಕೊಡುಗೆ
ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮತ್ತು ಹೊರದೇಶಗಳಲ್ಲಿ ನಡೆಯುವ ಕನ್ನಡ ಪರವಾದ ಸಮ್ಮೇಳನಗಳೂ ಸೇರಿ ಅಕ್ಕ ಸಮ್ಮೇಳನಕ್ಕೆ ಅನುದಾನ ನೀಡುತ್ತಿರುವುದು ರಾಜ್ಯದ ಜನತೆಗೆ ತೆರಿಗೆಭಾರ' ಹೆಚ್ಚಲು ಕಾರಣವಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ರಾಜ್ಯದ ಉತ್ತರ ಭಾಗದಲ್ಲಿ ಅನಾವೃಷ್ಟಿ ಉಂಟಾಗಿದೆ. ದಕ್ಷಿಣ ಭಾಗದಲ್ಲಿ ಅತಿವೃಷ್ಟಿ ಸಂಭವಿಸಿದೆ. ರೈತರ ನೆರವಿಗೆ ಬಂದಿರುವ ಸರ್ಕಾರ ಜನಸಾಮಾನ್ಯರ ಮೇಲೆ ಹೆಚ್ಚಿನ ಆರ್ಥಿಕ ಹೊರೆಗಳನ್ನು ಪರೋಕ್ಷವಾಗಿ ಹೇರುತ್ತಿದೆ. ರೈತರು, ಜನರು ಆರ್ಥಿಕ ಹೊರೆಯಿಂದ ಸಂಕಷ್ಟಕ್ಕೆ ಗುರಿ ಆಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಸರ್ಕಾರ ಮಿತವ್ಯಯ, ಖರ್ಚು ಕಡಿತ, ಕಾಸ್ಟ್ ಕಟಿಂಗ್' ಅನುಸರಿಸದೇ ದುಂದು ವೆಚ್ಚಕ್ಕೆ ಕಾರಣವಾಗುವ ಅನಗತ್ಯವಾದ ಖರ್ಚುಗಳನ್ನು ಮಾಡುತ್ತಿರುವುದು ಜನವಿರೋಧಿ, ಕನ್ನಡವಿರೋಧಿ ಮತ್ತು ಆರ್ಥಿಕ ಪ್ರಗತಿಯ ವಿರೋಧಿ ಕ್ರಮವಾಗಿದೆ ಎಂದು ಸಂಘಟನೆಗಳು ಟೀಕಿಸಿವೆ.
ವಿಡಿಯೋ ಕಾನ್ಫೆರೆನ್ಸ್ ಮೂಲಕ ಅಮೆರಿಕ ಕನ್ನಡಿಗರ ಉದ್ದೇಶಿಸಿ ಎಚ್ಡಿಕೆ ಭಾಷಣ
ಅಮೇರಿಕದಲ್ಲಿ ನಡೆಯುತ್ತಿರುವ ಅಕ್ಕ' ಸಮ್ಮೇಳನಕ್ಕೆ ರಾಜ್ಯ ಸರ್ಕಾರ 75 ಲಕ್ಷ ರೂಪಾಯಿಗಳನ್ನು ನೀಡುತ್ತಿರುವುದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ' ಎನ್ನುವ ವ್ಯಂಗ್ಯದಂತಿದೆ. ಅಕ್ಕ ಸಮ್ಮೇಳನ ನಡಸುತ್ತಿರುವ ಆಯೊಜಕರಿಗೆ ಹಣದ ಮುಗ್ಗಟ್ಟಿಲ್ಲ, ಆರ್ಥಿಕ ನೆರವಿನ ಮನವಿಯೂ ಸರ್ಕಾರಕ್ಕೆ ಸಲ್ಲಿಕೆ ಆಗಿಲ್ಲ.
ಅಕ್ಕ' ಸಂಘಟನೆ ನಮ್ಮ ಪ್ರತಿಷ್ಠಿತ ಮಡಿಕೇರಿಯ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡು, ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಲಿ. ಕನ್ನಡ ಸಾಹಿತ್ಯ ಪರಿಷತ್ತು, ಸಮ್ಮೇಳನಗಳನ್ನು ನಡೆಸಲು ಕರ್ನಾಟಕ ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ನೀಡಿದರೂ, ಸಮ್ಮೇಳನದ ಹೆಸರಲ್ಲಿ ಕನ್ನಡಿಗರ ಶ್ರಮದ ದುಡಿಮೆಯ ಹಣ ವ್ಯರ್ಥವಾಗಿ ಪೋಲಾಗುತ್ತಿದೆ.
ಅಮೆರಿಕದ 'ಅಕ್ಕ' ನವರ ಅಕ್ಕರೆಗೆ ಮನಸೋತ ಅಂಬರೀಷ
ಪರಿಷತ್ತಿನ ಅಧ್ಯಕ್ಷರ ಸ್ವಾರ್ಥ, ವಿದೇಶ ಪ್ರವಾಸ, ಮೋಜು - ಮಸ್ತಿಗಾಗಿ ಬಹ್ರೇನ್ ನಲ್ಲಿ ಸಮ್ಮೇಳನ ಆಯೋಜನೆಗೊಳ್ಳುತ್ತಿದೆ ಎಂದು ಸಂಘಟನೆಗಳು ಅಸಮಾಧಾನ ತೋರಿವೆ.
ಮುಖ್ಯಮಂತ್ರಿಗಳು ಇಂತಹ ದುಂದು ವೆಚ್ಚಗಳಿಗೆ ತಕ್ಷಣವೇ ಕಡಿವಾಣ ಹಾಕಿ ರೈತರ ಸಾಲಕ್ಕಾಗಿಯೋ ಅಥವಾ ನೆರೆಪೀಡಿತ ಅಥವಾ ಬರ ಪೀಡಿತರ ಅಭಿವೃದ್ಧಿಗಾಗಿ ಹಣವನ್ನು ಬಳಸುವುದು ಸೂಕ್ತ. ಅಕ್ಕ' ಸಮ್ಮೇಳನಕ್ಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ವರ್ಷ ಹಣವನ್ನು ಬಿಡುಗಡೆ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಈ.ಜಿ.ರೆಡ್ಡಿ, ವಕೀಲ ಬಾದಾಮಿ ಶಿವಲಿಂಗ ನಾಯಕ, ಕೆಂಚಪ್ಪ ಕರೂರು, ಸಂಗನಕಲ್ಲು ಹನುಮಂತರೆಡ್ಡಿ, ಕತೆಗಾರ - ಲೇಖಕ ವೆಂಕಟೇಶ್ ಉಪ್ಪಾರ್, ಕರ್ನಾಟಕ ರಕ್ಷಣಾ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಎಂ. ಗೋಪಾಲ್ ಕೃಷ್ಣ
ಉತ್ತರ ಕರ್ನಾಟಕ ವಿಭಾಗಧ್ಯಕ್ಷ ಕಳಕಪ್ಪಗೌಡ, ವಿಷ್ಣುಸೇನಾ ಸಮಿತಿಯ ಟಿ.ಎಂ. ಪಂಪಾಪತಿ, ಗ್ರಾಮ ಪಂಚಾಯಿತಿ ಸದಸ್ಯ ಕಾವಲಿ ಮಾರೆಣ್ಣ, ಬಳ್ಳಾರಿ ಜಿಲ್ಲಾ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಈಶ್ವರಪ್ಪ ಕಕ್ಕಬೇವಿನಹಳ್ಳಿ, ಎನ್.ನರಸಿಂಹರೆಡ್ಡಿ, ಬೈಲೂರು ವೆಂಕಟೇಶ್, ಶ್ರೀನಿವಾಸ್, ಜಗನ್ನಾಥ್ ಅಂದ್ರಾಳ್
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಜಿ. ಈಶ್ವರಪ್ಪ ಹಾಗೂ ವಿ.ಬಿ. ಮಲ್ಲಯ್ಯ, ನೆಟ್ಟಿಕಂಟಯ್ಯ ಸೇರಿದಂತೆ ಇನ್ನೂ ಹಲವಾರು ಪ್ರಗತಿಪರರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಸಹಿ ಮಾಡಿದ್ದಾರೆ. ಪ್ರತಿಯನ್ನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೂ ಸಲ್ಲಿಸಿದ್ದಾರೆ.