ಎಚ್.ಡಿ.ರೇವಣ್ಣ ವಿರುದ್ಧ ಜಗದೀಶ ಶೆಟ್ಟರ್ ಅಸಮಾಧಾನ
ಬಳ್ಳಾರಿ, ಮಾರ್ಚ್ 13 : ಮಂಡ್ಯ ಕ್ಷೇತ್ರದದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿರುವ ಸುಮಲತಾ ಅಂಬರೀಶ್ ಅವರನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 'ಪಾಪ (ಸುಮಲತಾ) ವಿಧವೆ'ಯೆಂದು ಸಂಬೋಧಿಸಿ ಅನುಕಂಪ ತೋರಿದರು.
ಬುಧವಾರ ಬಳ್ಳಾರಿ ನಗರದ ಎಸ್ಪಿ ವೃತ್ತದ ಬಳಿಯಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಳ್ಳಾರಿ ಕ್ಷೇತ್ರದ ಲೋಕಸಭಾ ಚುನಾವಣೆ ಬಿಜೆಪಿ ಉಸ್ತುವಾರಿ ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿ ನಡೆಸಿದರು. 'ಶೀಘ್ರದಲ್ಲೇ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸಲಾಗುತ್ತದೆ' ಎಂದು ಹೇಳಿದರು.
'ಪಾಪ ಸುಮಲತಾ ಅವರ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಗುರ ವಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ ಸುಮಲತಾ ಅಂಬರೀಶ್ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳೆಲ್ಲರೂ ಕಾಂಗ್ರೆಸ್ ಪಕ್ಷ ತ್ಯಜಿಸಲು ಮುಂದಾಗಿದ್ದಾರೆ' ಎಂದರು.
'ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರೆ. ಆದರೆ, ಸಚಿವ ರೇವಣ್ಣ ವಿತಂಡವಾದ ಮಾಡುತ್ತಿದ್ದಾರೆ' ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು.

ಜೆಡಿಎಸ್ಗೆ ಉಳಿಗಾಲವಿಲ್ಲ
'ಸಚಿವ ರೇವಣ್ಣ ವಿತಂಡವಾದ ಮಾಡುತ್ತಿದ್ದಾರೆ. ಈ ರೀತಿಯಾಗಿ ಮುಂದುವರಿದರೆ ಜೆಡಿಎಸ್ಗೆ ಮಂಡ್ಯದಲ್ಲಿ ಉಳಿಗಾಲವಿಲ್ಲದಂತೆ ಮಾಡುತ್ತಾರೆ' ಎಂದು ಹೇಳಿದರು.

ಬೂತ್ ಮಟ್ಟದಲ್ಲಿ ಸಂಘಟನೆ
'ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯ ಪ್ರಮುಖರ ಸಭೆ ನಡೆಸಿದ್ದೇವೆ. ಸಂಘಟನೆಯ ಹಿತದೃಷ್ಟಿಯಿಂದ ಈಗಾಗಲೇ ಅನೇಕ ನಾಯಕರು ಭೇಟಿ ನೀಡಿದ್ದಾರೆ. ಬೂತ್ ಮಟ್ಟದಲ್ಲಿ
ಪಕ್ಷ ಗಟ್ಟಿಗೊಳಿಸುತ್ತಿದ್ದೇವೆ' ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಬಳ್ಳಾರಿ ಅಭ್ಯರ್ಥಿ ತೀರ್ಮಾನ
'ಬಿಜೆಪಿ ಇಡೀ ದೇಶದಲ್ಲೇ ಹೆಚ್ಚಿನ ಕಾರ್ಯಕರ್ತರ ಪಡೆ ಹೊಂದಿದೆ. ಮಾ.15ರಂದು ಕೋರ್ ಕಮಿಟಿ ಸಭೆಯಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ತೀರ್ಮಾನ ಮಾಡಲಾಗುತ್ತದೆ. ಬಳ್ಳಾರಿಯಲ್ಲಿ ಐದಾರು ಆಕಾಂಕ್ಷಿಗಳ ಪಟ್ಟಿಯಿದೆ. ಇದನ್ನು ಹೈಕಮಾಂಡ್ಗೆ ಕಳಿಸುತ್ತೇವೆ' ಎಂದರು.

ಒತ್ತಾಯದ ಮುದುವೆ
'ಮೈತ್ರಿಕೂಟದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದಲ್ಲಿ ಒತ್ತಾಯ ಪೂರ್ವಕವಾಗಿ ಮದುವೆಯಾಗಿದೆ. ಸೀಟು ಹಂಚಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಗುದ್ದಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಅಸ್ಥಿರತೆ ಮುಂದುವರೆದಿದೆ. ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಬೀಳಲಿದೆ. ಅವರಿಬ್ಬರಲ್ಲೂ ಯಾರಾದರೂ ಒಬ್ಬರು ಹೊರಗೆ ಬರೋದು ಗ್ಯಾರಂಟಿ' ಎಂದು ಭವಿಷ್ಯ ನುಡಿದರು.












Click it and Unblock the Notifications