ಸೆ.21ರಿಂದ ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲು ಸಂಚಾರ
ಬಳ್ಳಾರಿ, ಸೆಪ್ಟೆಂಬರ್ 18 : ಹೊಸಪೇಟೆ-ಕೊಟ್ಟೂರು ನಡುವೆ ಪ್ಯಾಸೆಂಜರ್ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ಹಳಿಗಳ ಪರೀಶಿಲನೆ ನಡೆಸಿದ್ದು, ಸೆ. 21ರಿಂದ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ರೈಲ್ವೆ ಇಲಾಖೆ ಅಧಿಕಾರಿಗಳು ಹೊಸಪೇಟೆಯಿಂದ ಕೊಟ್ಟೂರು ತನಕ ಟ್ರಾಲಿಗಳ ಮೂಲಕ ಹಳಿಗಳ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದರು. 71 ಕಿ. ಮೀ. ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದೆ. ರೈಲು ಸಂಚಾರ ಆರಂಭಗೊಂಡರೆ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗುತ್ತದೆ.
ಹೊಸಪೇಟೆ-ಕೊಟ್ಟೂರು ರೈಲು ಹರಿಹರದ ತನಕ ಸಂಚಾರ ನಡೆಸಲಿದೆ. ಇದರಿಂದಾಗಿ ಶಿವಮೊಗ್ಗ, ಅರಸೀಕೆರೆ, ಹಾಸನ, ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರಯಾಣ ಬೆಳೆಸುವ ಜನರಿಗೆ ಅನುಕೂಲವಾಗಲಿದೆ. ಜನರ ಹಣ, ಸಮಯ ಉಳಿಯಲಿದೆ.

1990ರಲ್ಲಿ ಹೊಸಪೇಟೆ-ಕೊಟ್ಟೂರು-ಸ್ವಾಮಿಹಳ್ಳ ನಡುವೆ ಪ್ರಯಾಣಿಕ, ಸರಕು ಸಾಗಣೆ ರೈಲು ಸಂಚಾರ ನಡೆಸುತ್ತಿತ್ತು. ಆದರೆ, ಮೀಟರ್ ಗೇಜ್ ಆಗಿತ್ತು. 1995ರಲ್ಲಿ ಬ್ರಾಡ್ ಗೇಜ್ ಆಗಿ ಪರಿವರ್ತನೆ ಮಾಡಲಾಯಿತು. ಬಳಿಕ ಸರಕುಸಾಗಣೆ ರೈಲು ಸಂಚಾರ ನಡೆಸಿತು. ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತಗೊಂಡಿತು.
ಪ್ರಯಾಣಿಕ ರೈಲು ಸಂಚಾರವನ್ನು ಆರಂಭಿಸುವಂತೆ ಎರಡು ದಶಕಗಳಿಂದ ಜನರು ಹೋರಾಟ ಮಾಡುತ್ತಿದ್ದರು. ದಶಕಗಳ ಬೇಡಿಕೆಗೆ ಈಗ ಒಪ್ಪಿಗೆ ಸಿಕ್ಕಿದ್ದು, ರೈಲು ಸಂಚಾರ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ.












Click it and Unblock the Notifications