ಆಧ್ಯಾತ್ಮದತ್ತ ಒಲವು: ಸನ್ಯಾಸತ್ವ ಸ್ವೀಕರಿಸಿದ 19 ವರ್ಷದ ಯುವತಿ
ವಿಜಯನಗರ ಜನವರಿ 18: ಲೌಕಿಕ ಜಗತ್ತಿಗಿಂತ ಆಧ್ಯಾತ್ಮಿಕ ಜಗತ್ತೇ ಉತ್ತಮ ಎಂದುಕೊಂಡ ಹತ್ತೊಂಬತ್ತು ವರ್ಷದ ಯುವತಿಯೊಬ್ಬಳು ಹೊಸಪೇಟೆಯಲ್ಲಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾಳೆ.
ಹೊಸಪೇಟೆ ಮೂಲದ ಶ್ರೀಮಂತ ಕುಟುಂಬಕ್ಕೆ ಸೇರಿದ ಜೈನ ಸಮುದಾಯದ ಯುವತಿ ಮುಮುಕ್ಷಾ ವಿಧಿ ಕುಮಾರಿ ಬುಧವಾರ ಮಹಾವೀರ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ವತಿಯಿಂದ ದೀಕ್ಷೆ ಕಾರ್ಯಕ್ರಮ ಮಲ್ಲಿಗೆ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆದಿದೆ.
ವಿಜಯನಗರ: ಮರಳಿ ಗೂಡಿಗೆ ಸೇರಿದ ಅಪರೂಪದ ಯೂರೇಷಿಯನ್ ರಣಹದ್ದು
12ನೇ ವಯಸ್ಸಿನಲ್ಲಿ ಕಠಿಣ ವೃತ ಕೈಗೊಂಡಿದ್ದ ಯುವತಿ
ಹೊಸಪೇಟೆ ಉದ್ಯಮಿಯಾದ ದಿವಂಗತ ಕಾಂತಿಲಾಲಾ ಜಿ. ಜಿರಾವಲಾ ಮತ್ತು ರೇಖಾ ದೇವಿ ಜಿರಾವಲಾ ದಂಪತಿಗಳ ನಾಲ್ವರು ಪುತ್ರಿಯರಲ್ಲಿ ಮುಮುಕ್ಷಾ ಮೂರನೇಯವರು. ಎಸ್ಎಸ್ಎಲ್ಸಿಯಲ್ಲಿ ಶೇ.94, ಪಿಯುಸಿಯಲ್ಲಿ 99ರಷ್ಟು ಅಂಕ ಗಳಿಸಿರುವ ಈ ಯುವತಿ ತಮ್ಮ ಬಾಲ್ಯದಿಂದಲೇ ಜೈನ ಸನ್ಯಾಸ ತತ್ವದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಮುಮುಕ್ಷು ಅವರು ತಮ್ಮ 10 ಮತ್ತು 12ನೇ ವಯಸ್ಸಿನಲ್ಲಿ ಎರಡು ಬಾರಿ 48 ದಿನಗಳ ಉಪಧ್ಯಾನ ತಪ (ಕಠಿಣ ವೃತ ಅಚರಣೆ ಮಾಡುವುದು ) ಸಂಪನ್ನಗೊಳಿಸಿದ್ದಾರೆ. ಮುಮುಕ್ಷು ಅಂತಿಮವಾಗಿ ಬುಧವಾರ ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.
ಜೈನ ಸಮುದಾಯದಿಂದ ಯುವತಿಯ ಶೋಭಾಯಾತ್ರೆ
ಆದಿನಾಥ ಜೈನ ಶ್ವೇತಾಂಬರ ಮುನಿಗಳಾದ ನರರತ್ನ ಸೂರಿಶ್ವರಜೀ ಅವರ ಸಾನಿಧ್ಯದಲ್ಲಿ ಜೈನ ದೀಕ್ಷೆ ಸ್ವೀಕಾರ ಮಾಡಿದ ನಂತರ ನಗರದಲ್ಲಿ ಯುವತಿಯ ಅದ್ಧೂರಿಯಾಗಿ ಶೋಭಾಯಾತ್ರೆಯನ್ನು ಜೈನ ಸಮುದಾಯದವರು ನಡೆಸಿದ್ದಾರೆ. ಈ ಶೋಭಾಯಾತ್ರೆಯಲ್ಲಿ ಆಧ್ಯಾತ್ಮಿಕ ಜೀವನ ಅಪ್ಪಿಕೊಳ್ಳುತ್ತಿರುವ ಸಂಭ್ರಮ ಆನಂದವನ್ನು ಮುಮುಕ್ಷು ಕುಣಿಯುವ ಮೂಲಕ ಪ್ರದರ್ಶಿಸಿದರು.
ಸನ್ಯಾಸತ್ವ ಸ್ವೀಕರಿಸುವ ಸಿರಿವಂತರ ಮಕ್ಕಳು
ದೇಶದಲ್ಲಿ ಪ್ರತಿ ವರ್ಷ 300 ಯುವಕ, ಯುವತಿಯರು ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ. ಒಮ್ಮೆ ಸನ್ಯಾಸತ್ವ ಸೀಕಾರ ಮಾಡಿದವರು. ಲೌಕಿಕ ಬದುಕಿಗೆ ಮರಳಿದ ಉದಾಹರಣೆಗಳಿಲ್ಲ. ಅಷ್ಟರ ಮಟ್ಟಿಗೆ ಜೈನ ಸನ್ಯಾಸತ್ವದಲ್ಲಿ ನಂಬಿಕೆಯನ್ನಿಟ್ಟಿರುತ್ತಾರೆ. ಸನ್ಯಾಸತ್ವ ಸ್ವೀಕರಿಸಿರುವ ಬಹುತೇಕರು ಕೋಟ್ಯಾಧೀಶರು, ಅವರ ತಂದೆ, ತಾಯಿಗಳು ಸಿರಿವಂತರಾಗಿದ್ದು, ಮನೆಯಲ್ಲಿ ಯಾವುದೇ ಕೊರತೆಗಳಿರುವುದಿಲ್ಲ. ಆದರೆ, ಆಡಂಬರ ಜೀವನ, ಮಾನವ ಸಂಬಂಧಗಳಲ್ಲಿ ಯಾವುದೇ ಅರ್ಥವಿಲ್ಲ ಎಂಬ ವೈರಾಗ್ಯದಿಂದಲೇ ಸನ್ಯಾಸತ್ವ ಸ್ವೀಕರಿಸುತ್ತಾರೆ ಎಂದು ಜೈನ ಮುನಿಗಳು ಹೇಳಿದ್ದಾರೆ.
ಮುಮುಕ್ಷಾ ವಿಧಿ ಕುಮಾರಿ ಜೈನ ದೀಕ್ಷೆ ಸ್ವೀಕಾರ
ಯಾವುದೇ ವಸ್ತುಗಳ ಮೇಲೆ ಮೇಲೆ ವ್ಯಾಮೊಹ ಇಲ್ಲದೆ, ಕೇವಲ ಭಿಕ್ಷೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ಜೈನ ಯತಿಗಳು, ಜೈನ ಸಮುದಾಯ ಮಾತ್ರವಲ್ಲದೇ, ಶುದ್ಧ ಸಸ್ಯಹಾರಿ ಕುಟುಂಬದಿಂದ ಆತಿಥ್ಯ ಆಹ್ವಾನ ಬಂದರೆ ಖಂಡಿತಾ ಭಿಕ್ಷೆಯಾಗಿ ಸ್ವೀಕರುತ್ತಾರೆ ಎಂದು ಜೈನಮುನಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಮುಮುಕ್ಷಾ ವಿಧಿ ಕುಮಾರಿ ಜೈನ ದೀಕ್ಷೆ ಸ್ವೀಕಾರ ಮಾಡುವ ಮೂಲಕ ಅಲೌಕಿಕ ಪಥಕ್ಕೆ ಪ್ರವೇಶಿಸಿದ ಆರಂಭದ ಕ್ಷಣಗಳನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಾಜಿ ಶಾಸಕ ಎಚ್. ಆರ್. ಗವಿಯಪ್ಪ, ಕಾಂಗ್ರೆಸ್ ಮುಖಂಡ ಇಮಾಜ್ ನಿಯಾಜಿ, ಬಿಜೆಪಿಯ ಸಿದ್ದಾರ್ಥ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.