ಹೈಕೋರ್ಟ್ ಮೆಟ್ಟಿಲೇರಿದ ಮೈಲಾರಲಿಂಗೇಶ್ವರ ಕಾರ್ಣಿಕ ವಿವಾದ
ಧಾರವಾಡ, ಫೆಬ್ರವರಿ 07 : ಮೈಲಾರಲಿಂಗೇಶ್ವರ ದೇವಾಲಯದ ಕಾರ್ಣಿಕ ನುಡಿಯುವ ಹಕ್ಕಿನ ಕುರಿತು ಸಲ್ಲಿಕೆಯಾಗಿರುವ ರಿಟ್ ಅರ್ಜಿಯ ವಿಚಾರಣೆ ಮುಂದೂಡಲಾಗಿದೆ. ಆದ್ದರಿಂದ, ಫೆಬ್ರವರಿ 11ರಂದು ನಡೆಯುವ ಕಾರ್ಣಿಕದಲ್ಲಿ ಗೊರವಯ್ಯನಾಗಿ ರಾಮಣ್ಣ ಮೈಲಾರ ಕಾರ್ಣಿಕ ನುಡಿಯಲಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನಲ್ಲಿ ಮೈಲಾರಲಿಂಗೇಶ್ವರ ದೇವಾಲಯವಿದೆ. ಇಲ್ಲಿ ಕಾರ್ಣಿಕ ನುಡಿಯುವ ಹಕ್ಕಿನ ಕುರಿತು ಕರ್ನಾಟಕ ಹೈಕೋರ್ಟ್ಧಾರವಾಡ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಕಾರ್ಣಿಕ ನುಡಿಯುವ ವಿಚಾರದಲ್ಲಿ ರಾಮಣ್ಣ ಮತ್ತು ಗುರು ವೆಂಕಟಯ್ಯ ನಡುವೆ ವಿವಾದವಿದೆ.
ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನ್ಯಾಯಮೂರ್ತಿ ಎಸ್. ಜಿ. ಪಂಡಿತ ಅವರಿದ್ದ ಏಕ ಸದಸ್ಯ ಪೀಠ ನಡೆಸಿತು. ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರೆಸಿತು ಮತ್ತು ಮಾರ್ಚ್ 2ಕ್ಕೆ ವಿಚಾರಣೆಯನ್ನು ಮುಂದೂಡಿತು.
ಕಾರ್ಣಿಕ ನುಡಿಯುವ ವಿಚಾರದಲ್ಲಿ ನ್ಯಾಯಾಲಯ ಯಾವುದೇ ಆದೇಶ ನೀಡಿದ ಹಿನ್ನಲೆಯಲ್ಲಿ ಫೆಬ್ರವರಿ 11ರಂದು ನಡೆಯುವ ಕಾರ್ಣಿಕದಲ್ಲಿ ಗೊರವಯ್ಯನಾಗಿ ರಾಮಣ್ಣ ಕಾರ್ಣಿಕ ನುಡಿಯಲಿದ್ದಾರೆ.

ಏನಿದು ಕಾರ್ಣಿಕ ವಿವಾದ
ಕಾರ್ಣಿಕ ನುಡಿಯುವ ವಿಚಾರದಲ್ಲಿ ರಾಮಣ್ಣ ಮತ್ತು ಗುರು ವೆಂಕಟಯ್ಯ ನಡುವೆ ವಿವಾದವಿದೆ. ದೇವಾಲಯದ ಗೊರವಯ್ಯನಾಗಿ ರಾಮಣ್ಣ ಮೈಲಾರ ಅವರನ್ನು ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಗುರು ವೆಂಕಟಯ್ಯ ಒಡೆಯರ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ಗುರು ವೆಂಕಟಯ್ಯಗೆ ಕಾರ್ಣಿಕ ನುಡಿಯುವ ಅವಕಾಶ ನೀಡಲಾಗಿತ್ತು.

ರಿಟ್ ಅರ್ಜಿ ಸಲ್ಲಿಸಿದ ರಾಮಣ್ಣ
ಗುರು ವೆಂಕಟಯ್ಯಗೆ ಕಾರ್ಣಿಕ ನುಡಿಯುವ ಅವಕಾಶ ನೀಡಿರುವುದನ್ನು ಕರ್ನಾಟಕ ಹೈಕೋರ್ಟ್ನಲ್ಲಿ ರಾಮಣ್ಣ ಪ್ರಶ್ನೆ ಮಾಡಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಇದನ್ನು ಗುರು ವೆಂಕಟಯ್ಯ ಪ್ರಶ್ನೆ ಮಾಡಿ ವಿಭಾಗೀಯ ಪೀಠಕ್ಕೆ ಮತ್ತೊಂದು ಅರ್ಜಿ ಹಾಕಿದ್ದರು.

ಅರ್ಜಿಯಲ್ಲಿ ವಾದವೇನು?
ಕಾರ್ಣಿಕ ನುಡಿಯಲು ಗೊರವಯ್ಯನಾಗಿ ನೇಮಕಗೊಂಡಿರುವ ರಾಮಯ್ಯ ಎನ್ನುವವರಿಗೆ ಹಕ್ಕು ಮುಂದುವರೆಸಬೇಕು. ನೇಮಕ ಕುರಿತ ವಿವಾದವನ್ನು ಏಕ ಸದಸ್ಯ ಪೀಠದಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ವಿಭಾಗೀಯ ಪೀಠ ಸೂಚನೆ ನೀಡಿತ್ತು.

ಏಕ ಸದಸ್ಯ ಪೀಠ
ನ್ಯಾಯಮೂರ್ತಿ ಎಸ್. ಜಿ. ಪಂಡಿತ ಅವರಿದ್ದ ಏಕ ಸದಸ್ಯ ಪೀಠ ಫೆ.7ರಂದು ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರೆಸಿ ಆದೇಶ ನೀಡಿದೆ. ಮಾರ್ಚ್ 2ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಆದ್ದರಿಂದ, ಫೆಬ್ರವರಿ 11ರಂದು ನಡೆಯುವ ಕಾರ್ಣಿಕದಲ್ಲಿ ಗೊರವಯ್ಯನಾಗಿ ರಾಮಣ್ಣ ಮೈಲಾರ ಕಾರ್ಣಿಕ ನುಡಿಯಲಿದ್ದಾರೆ.












Click it and Unblock the Notifications