ಬಳ್ಳಾರಿ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ; ಆನಂದ್ ಸಿಂಗ್
ಬಳ್ಳಾರಿ, ಜನವರಿ 26: "ರಾಜ್ಯದಲ್ಲಿಯೇ ವಿಶಿಷ್ಟತೆಯನ್ನು ಹೊಂದಿರುವ ಈ ಬಳ್ಳಾರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಮೂಲಕ ಅಭಿವೃದ್ಧಿಯ ದಿಟ್ಟ ಹೆಜ್ಜೆಗಳನ್ನು ದಾಖಲಿಸುತ್ತಾ ನಮ್ಮ ಸರಕಾರ ಮುನ್ನಡೆಯುತ್ತಿದೆ" ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ಮಂಗಳವಾರ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವರು, ಗೌರವವಂದನೆ ಸ್ವೀಕರಿಸಿ ಮಾತನಾಡಿದರು.
"ರಾಜ್ಯ ಸರಕಾರವು ವಿವಿಧ ಜನಪರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ" ಎಂದು ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದರು.

"2020-21ನೇ ಸಾಲಿನಲ್ಲಿ ಕೃಷಿ ಇಲಾಖೆಯು ಜಿಲ್ಲೆಯಲ್ಲಿ ಕೃಷಿ ಯಂತ್ರಗಳು ಹಾಗೂ ಪರಿಕರಗಳ ವಿತರಣೆಯಲ್ಲಿ ಒಟ್ಟು 4352 ರೈತರಿಗೆ 958.91 ಲಕ್ಷ ರೂ. ಅನುದಾನ ಸಹಾಯಧನವನ್ನು ನೀಡಲಾಗಿದೆ. ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ ರೈತರಿಗೆ ಹನಿ ನೀರಾವರಿ ಘಟಕ ಹಾಗೂ ತುಂತುರು ನೀರಾವರಿ ಘಟಕಗಳಡಿ ಒಟ್ಟು 6820 ಫಲಾನುಭವಿಗಳಿಗೆ ಆರ್ಥಿಕ 870.66 ಲಕ್ಷಗಳ ಸಹಾಯಧನ ನೀಡಲಾಗಿದೆ" ಎಂದರು.
"ಜಿಲ್ಲಾ ಖನಿಜ ಪ್ರತಿಷ್ಠಾನ ಬಳ್ಳಾರಿ 2015-16ನೇ ಸಾಲಿನಿಂದ ಈವರೆಗೂ ಸುಮಾರು 1332 ಕೋಟಿ ರೂ.ಗಳು ಸಂಗ್ರಹವಾಗಿರುತ್ತವೆ. ಈ ಸಂಗ್ರಹವಾದ ಮೊತ್ತದಲ್ಲಿ 6 ಕ್ರಿಯಾ ಯೋಜನೆಯಗಳನ್ನು ತಯಾರಿಸಲಾಗಿದ್ದು, ಸದರಿ ಕ್ರಿಯಾ ಯೋಜನೆಯ ಒಟ್ಟು ಮೊತ್ತ 2222.15 ಕೋಟಿಗಳಾಗಿರುತ್ತದೆ" ಎಂದು ಸಚಿವರು ಮಾಹಿತಿ ನೀಡಿದರು.
"ಈ ವರ್ಷದಲ್ಲಿನ ಕೋವಿಡ್-19 ಹಿನ್ನೆಲೆಯಲ್ಲಿ ಉಂಟಾದ ಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಡಿ.ಎಂ.ಎಫ್. ಅನುದಾನವು ಪ್ರಮುಖ ಪಾತ್ರ ವಹಿಸಿದೆ. ಅನುದಾನದಲ್ಲಿ ಕೋವಿಡ್-19ಗಾಗಿ ಅವಶ್ಯವಿರುವ ವಿವಿಧ ವೈದ್ಯಕೀಯ ಉಪಕರಣಗಳು, ಔಷಧಗಳು, ಮಾಸ್ಕ್ಗಳು ಹಾಗೂ ಇತರೆ ಸಾಮಗ್ರಿಗಳನ್ನು ಖರೀದಿಸಲು ಬಳಸಲಾಗಿರುತ್ತದೆ" ಎಂದು ವಿವರಿಸಿದರು.
94 ಅಂಗನವಾಡಿ ನಿರ್ಮಾಣ: "ಜಿಲ್ಲೆಯಲ್ಲಿನ ಅಂಗನವಾಡಿಗಳನ್ನು ಅಭಿವೃದ್ಧಿಪಡಿಸುವ ಮತ್ತು ಅಂಗನವಾಡಿಗಳನ್ನು ಹೊಸದಾಗಿ ನಿರ್ಮಿಸುವುದಕ್ಕೆ 15.50 ಕೋಟಿ ರೂ.ಗಳ ಕ್ರಿಯಾಯೋಜನೆ ಅನುಮೋದಿಸಲಾಗಿದ್ದು, ಈ ಯೋಜನೆ ಅಡಿ 94 ಅಂಗನವಾಡಿಗಳು ಒಂದೇ ಮಾದರಿಯಲ್ಲಿ ನಿರ್ಮಾಣಗೊಳಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ" ಎಂದರು.

6280 ವ್ಯಾಪರಸ್ಥರಿಗೆ ಕಿರುಸಾಲ ವಿತರಣೆ: "ಪ್ರಧಾನಮಂತ್ರಿ ಆತ್ಮ ನಿರ್ಭರ್ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡುವ ಯೋಜನೆಯಲ್ಲಿ ಸುಮಾರು 11 ಸಾವಿರ ಬೀದಿ ಬದಿ ವ್ಯಾಪರಸ್ಥರಿಗೆ ಪ್ರತಿ ಫಲಾನುಭವಿಗೆ ರೂ. 10 ಸಾವಿರಗಳಂತೆ ಕಿರು ಸಾಲವನ್ನು ಒದಗಿಸಲು ಯೋಜನೆ ರೂಪಿಸಲಾಗಿದ್ದು. ಈಗಾಗಲೇ 6280 ವ್ಯಾಪರಸ್ಥರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ" ಎಂದು ತಿಳಿಸಿದರು.
"ಬಳ್ಳಾರಿ ಜಿಲ್ಲೆಯು ಅತ್ಯಂತ ವಿಶಿಷ್ಟ ಜಿಲ್ಲೆಯಾಗಿದ್ದು, ಐತಿಹಾಸಿಕ, ಪೌರಾಣಿಕ ಹಿನ್ನಲೆಯುಳ್ಳ ನಮ್ಮ ಈ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಕೃಷಿ, ಗಣಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಹಿನ್ನೆಲೆಯಲ್ಲಿಯೂ ಈ ಜಿಲ್ಲೆಗೆ ಮಹತ್ವದ ಸ್ಥಾನವಿದೆ. ಜಗತ್ತಿನಲ್ಲಿಯೇ ಶ್ರೇಷ್ಠ ದರ್ಜೆಯ ಅಪಾರ ಖನಿಜ ಸಂಪತ್ತನ್ನು ಹೊಂದಿರುವ ಪ್ರಮುಖ ಜಿಲ್ಲೆ ಈ ನಮ್ಮ ಬಳ್ಳಾರಿ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತದೆ" ಎಂದರು.












Click it and Unblock the Notifications