ಬಳ್ಳಾರಿಗೆ ಜನಾರ್ದನ ರೆಡ್ಡಿ ಪುನರ್ ಪ್ರವೇಶ, ರಾಮುಲು ಖುಷ್!
ಬಳ್ಳಾರಿ, ನವೆಂಬರ್ 01: ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿಂದ ಬಂಧಿಸಲ್ಪಟ್ಟು ಜೈಲು ಸೇರಿ ತದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಐದು ವರ್ಷಗಳ ಬಳಿಕ ತವರೂರು ಬಳ್ಳಾರಿಗೆ ಕಾಲಿಡಲಿದ್ದಾರೆ.
ನವೆಂಬರ್ 02 ರಂದು ಬಳ್ಳಾರಿಯ ಸಂಸದ ಬಿ.ಶ್ರೀರಾಮುಲು ಅವರು ನೂತನವಾಗಿ ನಿರ್ಮಿಸಿರುವ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಗಾಲಿ ರೆಡ್ಡಿ ಹಾಗೂ ಅವರ ಪರಿವಾರದವರು ಪಾಲ್ಗೊಳ್ಳಲಿದ್ದಾರೆ. ನವೆಂಬರ್ 01 ಮಧ್ಯಾಹ್ನ 3 ಗಂಟೆಯ ವೇಳೆಗೆ ಬಳ್ಳಾರಿಗೆ ಆಗಮಿಸುವ ನಿರೀಕ್ಷೆಯಿದೆ.

ಜೈಲುವಾಸ ತಪ್ಪಿಸಿಕೊಂಡು 20 ತಿಂಗಳುಗಳು ಕಳೆದಿದ್ದರೂ ಬಳ್ಳಾರಿಗೆ ಭೇಟಿ ನೀಡಲು ಗಾಲಿ ರೆಡ್ಡಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ತಮ್ಮ ಪುತ್ರಿ ಬ್ರಹ್ಮಿಣಿ ವಿವಾಹ ಕಾರ್ಯಕ್ರಮದ ನಿಮಿತ್ತ ಬಳ್ಳಾರಿಗೆ ಹೋಗುತ್ತಿರುವುದಾಗಿ ರೆಡ್ಡಿ ಅವರು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದಾರೆ.
ಬಳ್ಳಾರಿ ಬರಲಿರುವ ರೆಡ್ಡಿ ಅವರು, ಗಡಿಗಿ ಚೆನ್ನಪ್ಪ ಸರ್ಕಲ್ ಬಳಿ ಇರುವ ಕರ್ನಾಟಕಾಂಧ್ರ ನಾಟಕ ಪಿತಾಮಹ ಬಳ್ಳಾರಿ ರಾಘವಾಚಾರ್ಯರ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ನಗರೂರು ನಾರಾಯಣರಾವ್ ಪಾರ್ಕ್ ನಲ್ಲಿ ಕನ್ನಡ ತಾಯಿ ಶ್ರೀ ಭುವನೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ, ಬಳ್ಳಾರಿಯ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಸಂಜೆ 7 ಗಂಟೆಗೆ ನಗರದ ಹೊರವಲಯದ ಬೆಳಗಲ್ಲು ರಸ್ತೆಯಲ್ಲಿರುವ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮಕ್ಕೆ (ಹಿರಿಯರ ಆಶ್ರಯ ಧಾಮ) ಭೇಟಿ ನೀಡಲಿದ್ದಾರೆ.












Click it and Unblock the Notifications