ಶಾಲಾ ಕಾಲೇಜು ಆರಂಭ ಕುರಿತ ಚರ್ಚೆ; ಸಚಿವ ಆನಂದ ಸಿಂಗ್ ಸಲಹೆ
ಬಳ್ಳಾರಿ, ಸೆಪ್ಟೆಂಬರ್ 29: ಶಾಲೆಗಳನ್ನು ಪ್ರಾರಂಭ ಮಾಡುವ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಸದ್ಯಕ್ಕೆ ಶಾಲೆ ಆರಂಭ ಮಾಡುವುದು ಬೇಡ ಎನ್ನುವುದು ನನ್ನ ಅನಿಸಿಕೆ ಎಂದು ಅರಣ್ಯ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಇಂದು ಡಿಎಂಎಫ್ ಸಭೆ ಬಳಿಕ ಮಾತನಾಡಿದ ಅವರು, ಶಾಲೆಗಳನ್ನು ಆರಂಭಿಸುವ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಎಲ್ ಕೆಜಿ, ಯುಕೆಜಿಯಿಂದ ಶಾಲೆ ಆರಂಭ ಮಾಡುವುದು ಸೂಕ್ತ ಅಲ್ಲ. ಚಿಕ್ಕ- ಚಿಕ್ಕ ಮಕ್ಕಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ. ರಾಜಕಾರಣಿಗಳಾದ ನಾವೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆಗುತ್ತಿಲ್ಲ, ಇನ್ನು ಮಕ್ಕಳ ಪಾಡೇನು? ಒಂದು ವೇಳೆ ಶಾಲೆ ಆರಂಭ ಮಾಡುವುದಾದರೆ ಮೊದಲು ಕಾಲೇಜುಗಳನ್ನು ಆರಂಭ ಮಾಡಿ ಎಂದು ಸಲಹೆ ನೀಡಿದ್ದಾರೆ.
ಸಚಿವ ಸುರೇಶ ಕುಮಾರ್ ಅವರು ಈ ವಿಷಯದಲ್ಲಿ ತುಂಬಾ ಜಾಗ್ರತರಾಗಿದ್ದಾರೆ. ಅವರೊಬ್ಬ ಹಿರಿಯ ಮೇಧಾವಿ ರಾಜಕಾರಣಿ, ಹೀಗಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.

ಇದೇ ಸಂದರ್ಭ, ಬೆಂಗಳೂರು ಉಗ್ರರ ಹಬ್ ಆಗಿದೆ ಎಂಬ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬೆಂಗಳೂರು ಉಗ್ರರ ಹಬ್ ಅನ್ನುವ ಅರ್ಥದಲ್ಲಿ ಅವರು ಹೇಳಿಲ್ಲ. ಈ ಹಿಂದೆ ನಡೆದ ಘಟನೆಗಳನ್ನಾಧರಿಸಿ, ಎನ್ ಐಎ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿ, ಇದರಿಂದ ಈ ಭಾಗದಲ್ಲಿ ಉಗ್ರರ ಚಟುವಟಿಕೆ ನಿಯಂತ್ರಿಸಲು ಸಾಧ್ಯವಾಗುತ್ತದೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಹೀಗಾಗಿ ಅವರ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.












Click it and Unblock the Notifications