ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿ ಜಾತ್ರೆ: ಆಟ, ಊಟ, ಬೊಂಬಾಟ!
ಬಳ್ಳಾರಿ, ಫೆಬ್ರವರಿ 27: ಇದು ಜಾತ್ರೆಗಳ, ರಥೋತ್ಸವಗಳ ದಿನಗಳು. ಭರತ ಹುಣ್ಣಿಮೆಯಿಂದ ಪ್ರಾರಂಭವಾದ ರಥೋತ್ಸವಗಳು ಭರ್ತಿಯಾಗಿ ಎರಡು- ಮೂರು ತಿಂಗಳು ನಾಡಿನಾದ್ಯಂತ ಆಚರಿಸಲಾಗುತ್ತವೆ. ಇದೇ ಸಂದರ್ಭದಲ್ಲಿ ರಾಜಕೀಯ ಉತ್ಸವಗಳೂ ಅಲ್ಲಲ್ಲಿ ನಡೆಯುತ್ತಲೇ ಇವೆ.
ರಾಹುಲ್, ಮೋದಿ ಬಂದು ಹೋಗುತ್ತಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 'ಬಿಜೆಪಿ ಮತ್ತು ಕಮಲ'ದ ಜಾತ್ರೆಯನ್ನು ನಡೆಸಲು ಪಕ್ಷ ನಿರ್ಧರಿಸಿದೆ. ಅಂದಹಾಗೆ ಈಗಿಲ್ಲ ಜಾತ್ರೆ. ಈ ಜಾತ್ರೆಗಾಗಿ ಮಾರ್ಚ್ 3ರ ವರೆಗೆ ಕಾಯಬೇಕು. ಸಿದ್ಧವಾಗಿ ಎಲ್ಲರೂ ಹೋಗೋಣ. ವಿನೂತನ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳೋಣ.
ಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರು
ಮತದಾರರನ್ನು ಸೆಳೆಯಲು ಈ ಜಾತ್ರೆ ಉತ್ಸವ ಏರ್ಪಡಲಿದೆ. ಒಂದರ್ಥದಲ್ಲಿ ಜಾತ್ರೆಯ ನೆಪದಲ್ಲಿ ಚುನಾವಣಾ ಪ್ರಚಾರವೂ ನಡೆಯಲಿದೆ. ಎಲ್ಲೆಲ್ಲಿಯೂ ಕಮಲದ ಚಿಹ್ನೆ, ವಾಜಪೇಯಿ, ಅಮಿತ್ ಶಾ, ಸ್ಥಳೀಯ ನಾಯಕರ ಆಳೆತ್ತರ ಕಟೌಟುಗಳು ರಾರಾಜಿಸುತ್ತಲೇ ಇರುತ್ತವೆ. ನರೇಂದ್ರಮೋದಿ ಮತ್ತು ಅಮಿತ್ ಶಾ ಮಾತ್ರ ಇಲ್ಲಿ ಉತ್ಸವ ಮೂರ್ತಿಗಳು.
ಇಲ್ಲಿ ಎಲ್ಲವೂ ಉಚಿತ
ಬಿಜೆಪಿ ಹಮ್ಮಿಕೊಂಡಿರುವ ವಿನೂತನ ಪ್ರಯೋಗದ ಸ್ಯಾಂಪಲ್ ಇದು. ಈ ಉತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಜಾತ್ರೆಯಲ್ಲಿ ಅರವತ್ತು ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇಲ್ಲಿ ಎಲ್ಲವೂ ಉಚಿತ ಎನ್ನುವುದು ಘೋಷಣೆ ಆಗಿದೆ. ಸ್ಥಳ ಫೈನಲ್ ಮಾಡಲು ಹಗರಿಬೊಮ್ಮನಹಳ್ಳಿಗೆ ಭೇಟಿ ನೀಡಿದ್ದ ಹನುಮಂತಪ್ಪ, ಮಾಜಿ ಶಾಸಕ ನೇಮಿರಾಜ ನಾಯ್ಕ ಇಬ್ಬರೂ ಪಕ್ಷದ ಮುಖಂಡರನ್ನು ಜಿಪಿಎಸ್ ಮೂಲಕ ಕನೆಕ್ಟ್ ಮಾಡಿಕೊಂಡು, ವಿವರಗಳನ್ನು ನೀಡಿ, ಸೌಲಭ್ಯಗಳನ್ನು ವಿವರಿಸಿ ಸ್ಥಳ ನಿಗದಿ ಮಾಡಿದ್ದಾರೆ.
30 ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಜಾತ್ರೆ
ಕೆ.ನೇಮಿರಾಜನಾಯ್ಕ ಮಾತನಾಡಿ, 30 ಜಿಲ್ಲೆಗಳ ಆಯ್ದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಜಾತ್ರೆ ಆಚರಿಸಲಾಗುತ್ತದೆ. ಜೇವರ್ಗಿಯಲ್ಲಿ ಜಾತ್ರೆ ಯಶಸ್ವಿಯಾಗಿ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಪೈಕಿ ಹಗರಿಬೊಮ್ಮನಹಳ್ಳಿಯನ್ನು ಆಯ್ಕೆ ಮಾಡಲಾಗಿದೆ. ಇದು ರಾಜ್ಯದ ಎರಡನೆಯ ಜಾತ್ರೆ ಆಗಿದೆ.
ಸೆಲ್ಫಿ, ಮನರಂಜನೆ ಕಾರ್ಯಕ್ರಮ
ಜಾತ್ರೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರ ಮೂರ್ತಿಗಳನ್ನು ಇರಿಸಿ, ಸೆಲ್ಫಿ ತೆಗೆದುಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ. ಮೂರು ದಿನಗಳು, ಹತ್ತಾರು ವೇದಿಕೆಗಳು, ನೂರಾರು ಪ್ರತಿಭೆಗಳು ಮತ್ತು ವೈವಿಧ್ಯಮಯವಾಗಿ ಕಲೆ, ಸಂಗೀತ, ಸಾಹಿತ್ಯ, ಹಾಸ್ಯ, ತುಂಟಾಟ, ನಟನೆ, ಮಿಮಿಕ್ರಿ ಹೀಗೇ ಹತ್ತಾರು ಮನರಂಜನೆ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ.
ಬಹುತೇಕ ಪುಕ್ಕಟೆ, ಕೆಲವಕ್ಕೆ ಅಗ್ಗದ ಬೆಲೆ
ಅಷ್ಟೇ ಅಲ್ಲ, ಮಕ್ಕಳಿಗಾಗಿ ರಾಟಿ ಚಕ್ರ (ಜೋಕಾಲಿ), ಕುದುರೆ ಗಾಡಿ, ಮೀನಿನ ಗಾಡಿ ಸೇರಿ ಅನೇಕ ಆಟಗಳನ್ನು ಏರ್ಪಡಿಸಲಾಗುತ್ತದೆ. ಮಹಿಳೆಯರಿಗೆ ಮೆಹೆಂದಿ ಹಾಕುವುದರ ಜೊತೆ ಜೊತೆಗೆ ರಸಮಯ ಪ್ರಸಂಗಗಳನ್ನೂ ಏರ್ಪಡಿಸಲಾಗುತ್ತಿದೆ. ಇವೆಲ್ಲವೂ ಉಚಿತ. ಆದರೆ ಆಹಾರ ಮಾತ್ರ ರಿಯಾಯಿತಿಯಲ್ಲಿ ಸಿಗುತ್ತದೆ. 5 - 10 ರುಪಾಯಿಗೆ ಮಿನಿ ಮೀಲ್ಸ್, ಗೋಬಿ ಮಂಚೂರಿ, ಪಾನಿಪೂರಿ ಹೀಗೆ ಮೆನು ಪಟ್ಟಿ ಮುಂದುವರಿಯುತ್ತದೆ.
ಕನಿಷ್ಠ 60 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ
ಇದು ಅಪ್ಪಟ ಚುನಾವಣಾ ಪ್ರಚಾರ ಅಲ್ಲವೇ? ಹಾಗೆಂದ ಮಾತ್ರಕ್ಕೆ ಇಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಿ ಮಾಡಿರುವ, ಮಾಡಲಿರುವ ಕೆಲಸ ಕಾರ್ಯಗಳ ಮಾಹಿತಿ ನೀಡಲಿದ್ದಾರೆ. "ಕನಿಷ್ಠ 60 ಸಾವಿರ ಜನರು ಮೂರು ದಿನಗಳ ಕಾಲ ಉತ್ಸವದಲ್ಲಿ ಪಾಲ್ಗೊಳ್ಳುವ ಲೆಕ್ಕವಿದೆ. ನೋಡುವ" ಎನ್ನುತ್ತಾರೆ ನೇಮಿರಾಜ್ ನಾಯ್ಕ.