ಬಳ್ಳಾರಿ: ತುಂಗಭದ್ರಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ ತಂದೆ-ಮಗ
ಬಳ್ಳಾರಿ, ಜುಲೈ. 20: ಗುರುವಾರ ಸಂಜೆಯಿಂದ ತುಂಗಾಭದ್ರಾ ಜಲಾಶಯದಿಂದ ತುಂಗಾಭದ್ರಾ ನದಿಗೆ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಬಿಡುತ್ತಿರುವ ಕಾರಣ ಸಿರುಗುಪ್ಪದ ಬಳಿ ಅಕ್ರಮವಾಗಿ ಮರಳು ತುಂಬುತ್ತಿದ್ದ ತಂದೆ - ಮಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಉಳಿದ ಇಬ್ಬರು ನೀರಿನ ರಭಸ ನೋಡಿ ಓಡಿ ಬಂದು, ಜೀವ ಉಳಿಸಿಕೊಂಡ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ. ಮೃತರನ್ನು ರಫೀಕ್(32 ) ಮತ್ತು ಮಗ ಇಸಾಕ್ (06) ಎಂದು ಗುರುತಿಸಲಾಗಿದೆ.
ತುಂಗಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಪ್ರಕರಣ: ಇನ್ನೂ ಸಿಗದ ಮೃತದೇಹ!
ಇಬ್ಬರೂ ಸಿರುಗುಪ್ಪ ಪಟ್ಟಣಕ್ಕೆ ಸಮೀಪದ ಬಾಗೇವಾಡಿ ಗ್ರಾಮದ ನಿವಾಸಿಗಳು ಆಗಿದ್ದು, ಶುಕ್ರವಾರ ನಸುಕಿನಲ್ಲಿ ಹಳ್ಳದಲ್ಲಿ ಉಸುಕು (ಮರಳ)ನ್ನು ತುಂಬಿಕೊಳ್ಳುವಾಗ ಹರಿದ, ನೀರಿನ ರಭಸದಲ್ಲಿ ಸಿಲುಕಿ, ಕೊಚ್ಚಿಕೊಂಡು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಇವರ ಸಂಬಂಧಿಗಳಾದ ಮೆಹಬೂಬ್ ಭಾಷ (18 ) ಮತ್ತು ಸದ್ಧಾಂ (32 ) ಜೀವಪಾಯದಿಂದ ಪಾರಾಗಿ, ದಡ ಸೇರಿ, ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಪೊಲೀಸರು 10 ತೆಪ್ಪಗಳ ಮೂಲಕ ಮತ್ತು ಸ್ಥಳೀಯ ಈಜುಗಾರರ ಮೂಲಕ ಘಟನೆ ನಡೆದ ಸ್ಥಳದಿಂದ 10 ಕಿಮೀ ದೂರದವರೆಗೂ ಶವಗಳ ಹುಡುಕಾಟ ನಡೆಸಿದ್ದಾರೆ.
ಬೆಳಗ್ಗೆ 6 ಗಂಟೆಯಿಂದಲೇ ಸ್ಥಳದಲ್ಲಿ ಕಾರ್ಯಾಚರಣೆ ನಡೆದಿದ್ದು, ಪೊಲೀಸರು, ಮುಳುಗು ತಜ್ಞರು ಮತ್ತು ಕಂದಾಯ ಅಧಿಕಾರಿಗಳು, ಗ್ರಾಮಸ್ಥರು, ಮೃತರ ಕುಟುಂಬಸ್ಥರು ಬೀಡುಬಿಟ್ಟಿದ್ದಾರೆ.
ಪೊಲೀಸರು - ಕಂದಾಯ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ, ಘಟನೆ ನಡೆದಿರುವ ಹಿನ್ನಲೆಯಲ್ಲಿ ಅನೇಕರು ವಿಷಾದ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಿರುಗುಪ್ಪ ತಹಸೀಲ್ದಾರ್ ಎಂ. ಸುನಿತ ಅವರು ಭೇಟಿ ನೀಡಿ, ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.