ಸಾಲಮನ್ನಾ ತಾರತಮ್ಯ ಪ್ರಶ್ನಿಸಿ ಕುಮಾರಸ್ವಾಮಿ ವಿರುದ್ಧ ಕೋರ್ಟ್ ಗೆ!
ಬಳ್ಳಾರಿ, ಜುಲೈ 7: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರದ ಸಾಲಮನ್ನಾ ತಾರತಮ್ಯ ಮತ್ತು ಅಸ್ಪಷ್ಟತೆಯನ್ನು ಪ್ರಶ್ನಿಸಿ ಸುಸ್ತಿರಹಿತ ಸಾಲಗಾರ ರೈತರು ಕೋರ್ಟ್ ಮೊರೆ ಹೋಗಲು ತಯಾರಿ ನಡೆಸಿದ್ದಾರೆ. ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ರೈತರು, ಶುಕ್ರವಾರ ಸಭೆ ಸೇರಿ ದೋಸ್ತಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ವಿರುದ್ಧವೇ ನ್ಯಾಯಾಲಯಕ್ಕೆ ಹೋಗುವುದಾಗಿ ನಿರ್ಧಾರ ಕೈಗೊಂಡರು.
ಗುಂಡಿ ಚರಣರಾಜ ಮತ್ತು ಹಲಗೇರಿ ಸೋಮಶೇಖರ ಮಾತನಾಡಿ, ರಾಜ್ಯದ ಯಾವೊಬ್ಬ ರೈತರೂ ಸಾಲ ಮನ್ನಾ ಮಾಡುವಂತೆ ಸರಕಾರಕ್ಕೆ ಅಧಿಕೃತವಾಗಿಯೂ - ಅನಧಿಕೃತವಾಗಿಯೂ ಕೇಳಿಲ್ಲ. ಕೈ ಹಿಡಿದು ಬೇಡಿಕೊಂಡಿಲ್ಲ. ಯಾವ ರಾಜಕಾರಣಿ ಮನೆಗೂ ಹೋಗಿ ಕಣ್ಣೀರು ಹಾಕಿಲ್ಲ ಎಂದು ಹೇಳಿದರು.
ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ
ರಾಜಕಾರಣಿಗಳು ಅಧಿಕಾರಕ್ಕೆ ಬರುವ ಆಸೆಗಾಗಿ, ಅಧಿಕಾರದ ಆಸೆಗಾಗಿ ಅನಗತ್ಯವಾಗಿ 'ಸಾಲಮನ್ನಾ' ವಿಷಯ ಪ್ರಸ್ತಾಪಿಸಿ, ಬೇಕಾಬಿಟ್ಟಿ ರಾಜಕೀಯದ ಹೇಳಿಕೆಗಳನ್ನು ನೀಡಿ, ರೈತ ಸಮುದಾಯವನ್ನೇ ಆತಂಕಕ್ಕೆ ಈಡು ಮಾಡದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಸರಕಾರ ಕೇವಲ ಸುಸ್ತಿ ಬಾಕಿಯಿರುವ 2 ಲಕ್ಷ ರುಪಾಯಿವರೆಗಿನ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡುವುದಾಗಿ ಘೋಷಿಸಿ, ರೈತರ ಮೂಗಿಗೆ ತುಪ್ಪ ಹಚ್ಚಿದ್ದಾರೆ. ಸರಕಾರದ ಈ ದ್ವಂದ್ವ ನೀತಿಯಿಂದಾಗಿ ಪ್ರಾಮಾಣಿಕ ರೈತರಿಗೆ ಸಂಪೂರ್ಣ ಅನ್ಯಾಯ ಆಗುತ್ತಿದೆ. ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್ ಗಳು, ಖಾಸಗಿ ಬ್ಯಾಂಕ್ ಗಳ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ರೈತರ ಮನೆ ಬಾಗಿಲಿಗೆ ಪದೇ ಪದೇ ಎಡತಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಲ ಮರು ಪಾವತಿಗೆ ನಿಗದಿತ ಅವಧಿ ಮೀರಿದರೆ ಶೇ 14ರ ದರದಲ್ಲಿ ಬಡ್ಡಿ ಪಾವತಿಸಬೇಕು ಎಂಬ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಕೆಲ ರೈತರು ಒಂದು ಸಾಲ ತೀರಿಸಲಿಕ್ಕಾಗಿ ಮತ್ತೊಂದು ಸಾಲವನ್ನು ತಂದು, ಹಣ ಪಾವತಿ ಮಾಡಿದ ಅನಿವಾರ್ಯ ಸ್ಥಿತಿಯಲ್ಲಿ ಸಾಲವನ್ನು ಮರು ಪಾವತಿಸಿದ್ದಾರೆ ಎಂದಿದ್ದಾರೆ.
ಅಂಕಿ-ಅಂಶ: ಒಟ್ಟು ಎಷ್ಟು ರೈತರ ಎಷ್ಟು ಮೊತ್ತದ ಸಾಲಮನ್ನಾ ಆಗಲಿದೆ
ಪ್ರಾಮಾಣಿಕವಾಗಿ ನಾವು ಸಾಲ ಕಟ್ಟಿದ್ದೇ ಮುಳುವಾಯಿತೇ? ಸಾರಾಸಗಟಾಗಿ ಎಲ್ಲ ರೈತರ ಸಾಲವನ್ನು ಷರತ್ತು ರಹಿತವಾಗಿ ಮನ್ನಾ ಮಾಡಬೇಕು. ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯ ಸಾಲ ಮನ್ನಾ ಘೋಷಣೆ ಕೇವಲ ಮೂರು ಜಿಲ್ಲೆಗೆ ಮಾತ್ರ ಸೀಮಿತವಾಗಿದೆ ಎಂದು ಹುಲಿಕಟ್ಟಿ ಭೀಮಪ್ಪ ಹೇಳಿದರು.
ಯಳಗೇರಿ ವಿನಾಯಕ, ಗೂರಮ್ಮನವರ ಬಸವರಾಜ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.