ಮತದಾನಕ್ಕೆ ಲಂಡನ್ನಿಂದ ಬಂದ ಮಗ: ಸಂಭ್ರಮ ಹಂಚಿಕೊಂಡ ಗಾಲಿ ರೆಡ್ಡಿ
ಬಳ್ಳಾರಿ, ಏಪ್ರಿಲ್ 23: ಲೋಕಸಭೆ ಚುನಾವಣೆಯ ಮೂರನೇ ಹಂತ, ಕರ್ನಾಟಕದಲ್ಲಿ ಅಂತಿಮ ಹಂತದ ಮತದಾನ ಪ್ರಕ್ರಿಯೆ ಮಂಗಳವಾರದಂದು ಮುಕ್ತಾಯ ಕಂಡಿದೆ. ಮತದಾನ ಮಾಡುವುದು ಅದರಲ್ಲೂ ಮೊದಲ ಬಾರಿಗೆ ಮತದಾನ ಮಾಡುವವರಿಗೆ ಸಂಭ್ರಮವೋ ಸಂಭ್ರಮ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಕುಟುಂಬದಲ್ಲೂ ಈ ರೀತಿ ಸಂಭ್ರಮ ಕಂಡು ಬಂದಿತ್ತು.
ಗಾಲಿ ಜನಾರ್ದನ ರೆಡ್ಡಿ ಮಗ ಕಿರೀಟಿ ಅವರು ಇಂದು ಮತದಾನ ಮಾಡಿದ್ದಾರೆ. ಅಮ್ಮ ಲಕ್ಷ್ಮೀ ಅರುಣಾ, ಅಕ್ಕ ಬ್ರಹ್ಮಣಿ ಜೊತೆ ಮೊದಲಬಾರಿಗೆ ಮತಚಲಾಯಿಸಿ, ಇದೇ ಮೊದಲ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ ಬಗ್ಗೆ ಮಾತನಾಡಿದ ಅವರು,
ಮತದಾನ ಪ್ರತಿಯೊಬ್ಬರ ಕರ್ತವ್ಯ. ನನ್ನ ಹಕ್ಕು ಚಲಾಯಿಸುವುದಕ್ಕಾಗಿ ಲಂಡನ್ನಿಂದ ನಾಲ್ಕು ದಿನಗಳ ಮುಂಚೆಯೇ ನಾನು ನಗರಕ್ಕೆ ಆಗಮಿಸಿದೆ, ರಾಜಕೀಯ ಕ್ಷೇತ್ರಕ್ಕೆ ಬರುವ ಯಾವುದೇ ಆಲೋಚನೆ ಇಲ್ಲ. ಸಿನಿಮಾ ನಟನಾಗುವ ಇಚ್ಛೆ ಹೊಂದಿದ್ದೇನೆ. ಸಮಾಜ ಸೇವೆ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಹೊಸ ವರ್ಷದ ಆರಂಭದಲ್ಲಿ ತಮ್ಮ ಬಯಕೆ ತೋಡಿಕೊಂಡಿದ್ದ ಜನಾರ್ದನ ರೆಡ್ಡಿ, ಸಾರ್ವಜನಿಕ ಜೀವನದಲ್ಲಿ ಮುಂಚೂಣಿಗೆ ಬಂದು ಮತ್ತೆ ನಿಮ್ಮೆಲ್ಲರ ಸೇವೆ ಮಾಡಲು ನಾನು ಮಾನಸಿಕವಾಗಿ ಸಿದ್ಧನಿದ್ದು, 2019ರಲ್ಲಿ ನನ್ನ ಬದುಕಿನ ಪುಟದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯಬೇಕು ಎಂದು ಬಯಸಿದ್ದೇನೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದರ ಜೊತೆಗೆ ಜನಾರ್ದನ ರೆಡ್ಡಿ ಅವರು ಕೂಡಾ ತಮ್ಮ ಸಂತಸವನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ.

ಮಗನ ಆಗಮನದ ಸಂತಸದ ಗಾಲಿ ರೆಡ್ಡಿ
ಆತ್ಮೀಯರೇ ಸಾರ್ವರ್ತ್ರಿಕ ಲೋಕಸಭಾ ಚುನಾವಣೆಯ ಎರಡನೆಯ ಹಂತದ ಮತದಾನ ಪ್ರಕ್ರಿಯೆಯಲ್ಲಿ ಜನತೆ ಉತ್ಸಾಹದಿಂದ ಪಾಲ್ಗೊಂಡಿದ್ದು ಸಂತಸವಾಯಿತು. ವಿಷೇಶವಾಗಿ ಬಳ್ಳಾರಿಯಲ್ಲಿ ಮತದಾನ ಮಾಡಲೆಂದೇ ದೂರದ ಲಂಡನ್ನಿಂದ ನನ್ನ ಮಗ ಕಿರೀಟಿ ಹಾಗು ಮಗಳು ಬ್ರಹ್ಮಣಿ ಅಗಮಿಸಿ ಇಂದು ಬಳ್ಳಾರಿಯಲ್ಲಿ ನನ್ನ ಪತ್ನಿ ಶ್ರೀಮತಿ ಲಕ್ಷ್ಮಿ ಅರುಣಾ ಮತ್ತು ಕುಟುಂಬ ಸದಸ್ಯರೊಂದಿಗೆ ಮತದಾನ ಮಾಡಿದರು. ವಿಷೇಶವಾಗಿ ನನ್ನ ಮಗ ಕಿರೀಟಿ ಮೊದಲ ಬಾರಿಗೆ ಮತದಾನ ಹಕ್ಕನ್ನು ಚಲಾಯಿಸಿರುವುದು ನನಗೆ ಅತೀವ ಸಂತೋಷವನ್ನು ಉಂಟುಮಾಡಿದೆ.
- ಗಾಲಿ ಜನಾರ್ಧನ್ ರೆಡ್ಡಿ

ಬಳ್ಳಾರಿ ಲೋಕಸಭಾ ಕ್ಷೇತ್ರ
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವೈ.ದೇವೇಂದ್ರಪ್ಪ ಅವರು ಕಾಂಗ್ರೆಸ್ಸಿನಿಂದ ಹಾಲಿ ಸಂಸದ ವಿ.ಎಸ್.ಉಗ್ರಪ್ಪ ವಿರುದ್ಧ ಸ್ಪರ್ಧಿಸಿದ್ದಾರೆ. ಇನ್ನು ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದ ಜೊತೆ ತೆರಳಿ ಮತದಾನ ಮಾಡಲಾಗಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ್ ಇನ್ನು ಅನುಮತಿ ನೀಡಿಲ್ಲ.

ಗದಗದಲ್ಲೂ ಮತದಾನದ ಅವಕಾಶ ಸಿಗಲಿಲ್ಲ
ಆದರೆ, ಮತದಾನ ಮಾಡಲೇಬೇಕು ನಿರ್ಧರಿಸಿದ್ದ ಗಾಲಿ ಜನಾರ್ದನ ರೆಡ್ಡಿ ಅವರು ಗದಗ-ಹಾವೇರಿ ಕ್ಷೇತ್ರದಲ್ಲಿ ನೆಲೆಸಿರುವುದಾಗಿ ವಿಳಾಸ ನೀಡಿ, ಗದಗ ಜಿಲ್ಲೆಯಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅರ್ಜಿ ಸಲ್ಲಿಸಿದ್ದರು. ನಮೂನೆ 6ರ ಅಡಿ ಸಲ್ಲಿಸಿದ್ದ ಅರ್ಜಿಯನ್ನು ಗದಗದ ತಹಶೀಲ್ದಾರ್ ಅವರು ತಿರಸ್ಕಾರ ಮಾಡಿದ್ದರು. ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 23ರಂದು ನಡೆದಿದ್ದು, ಬಿಜೆಪಿಯಿಂದ ಶಿವಕುಮಾರ್ ಉದಾಸಿ, ಕಾಂಗ್ರೆಸ್-ಜೆಡಿಎಸ್ನಿಂದ ಡಿ.ಆರ್.ಪಾಟೀಲ್ ಅವರು ಕಣದಲ್ಲಿದ್ದಾರೆ.

ಸಕ್ರಿಯ ರಾಜಕೀಯಕ್ಕೆ ಬರುವ ಇಚ್ಛೆ ಇದೆ
ಮುಂದೆ ರಾಜಕೀಯಕ್ಕೆ ಮತ್ತೆ ಬಂದೇ ಬರುತ್ತೇನೆ. ರಾಜಕೀಯಕ್ಕೆ ಬರಲು ನನಗೆ ಒಂದು ವರ್ಷವಷ್ಟೇ ಸಾಕು. ಆ ಕಾಲ ನನಗೆ ಬಂದೇ ಬರುತ್ತದೆ.ಇಡೀ ದೇಶವೇ ತಿರುಗಿ ನೋಡುವಂತೆ ಕರ್ನಾಟಕದ ಒಬ್ಬ ಒಳ್ಳೆಯ ರಾಜಕಾರಣಿಯಾಗಿ ಬೆಳೆಯುತ್ತೇನೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಸಮಾಜವನ್ನು ಸಂಘಟನೆ ಮಾಡುತ್ತೇನೆ ಎಂದು ಬೆನಕಟ್ಟಿಯ ವೇಮನ ಜಯಂತಿ ಮತ್ತು ಜಾತ್ರೆ ಪ್ರಯುಕ್ತ 9 ಕಿ.ಮೀ. ಪಾದಯಾತ್ರೆ ಮಾಡಿ ಗಾಲಿ ರೆಡ್ಡಿ ಘೋಷಿಸಿದ್ದನ್ನು ಮರೆಯುವಂತಿಲ್ಲ.












Click it and Unblock the Notifications