ಬಳ್ಳಾರಿ ಚುನಾವಣಾ ಕಣ : ಸಂಕ್ಷಿಪ್ತ ಸುದ್ದಿಗಳು
ಬಳ್ಳಾರಿ, ಏ. 2 : ಬಳ್ಳಾರಿಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಏ.4ರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಬಳ್ಳಾರಿಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ಎನ್.ವೈ.ಹನುಮಂತಪ್ಪ ಪರವಾಗಿ ಮತಯಾಚಿಸಲಿದ್ದಾರೆ.
ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬುಧವಾರ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ಶಿವಕುಮಾರ್ ಗಿರಿಯಪ್ಪ ಮಾಳಗಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಜಿಲ್ಲಾ ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಬಿಜೆಪಿ ಪಕ್ಷದ ಮುಖಂಡರ ಮೇಲೆ ಮೇಲೆ ಮಾತ್ರ ಬಿಸ್ವಾಸ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ನಾಯಕರು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಬಳ್ಳಾರಿಯಲ್ಲಿ ಚುನಾವಣಾ ಕಾವು ಹೀಗಿದೆ

ಸ್ವಾಮೀಜಿಗಳನ್ನು ಭೇಟಿ ಮಾಡಿದ ಶ್ರೀರಾಮುಲು
ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು, ಹರಿಹರದ ಸಮೀಪದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಪ್ರಸ್ತು ತ ರಾಜಕೀಯ, ಹೋರಾಟ, ಜನಸೇವೆಯ ಸಂಕಲ್ಪಗಳ ಕುರಿತು ಪರಸ್ಪರ ಚರ್ಚೆ ನಡೆಸಿದರು.

ದೇವದಾಸ್ ಬಿರುಸಿನ ಪ್ರಚಾರ
ಕ್ಷೇತ್ರದ ಎಸ್ ಯುಸಿಐ (ಸಿ) ಪಕ್ಷದ ಅಭ್ಯರ್ಥಿ ಎ. ದೇವದಾಸ್ ಬಳ್ಳಾರಿ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಪ್ರಚಾರ ಜಾಥಾಕ್ಕೆ ಪಕ್ಷದ ರಾಜ್ಯ ಸಮಿತಿ ಸದಸ್ಯೆ ಕೆ. ಉಮಾ ನಗರದ ಗಡಿಗೆ ಚೆನ್ನಪ್ಪ ವೃತ್ತದಲ್ಲಿ ಚಾಲನೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್, ಮಂಜುಳಾ, ನಾಗಲಕ್ಷ್ಮಿ ಡಾ. ಎನ್. ಪ್ರಮೋದ್ ಮುಂತಾದವರು ಜಾಥಾದಲ್ಲಿ ಪಾಲ್ಗೊಂಡು ದೇವದಾಸ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಆಮ್ ಆದ್ಮಿ ಅಭ್ಯರ್ಥಿ ಪ್ರಚಾರ
ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವಕುಮಾರ್ ಗಿರಿಯಪ್ಪ ಮಾಳಗಿ ಹೊಸಪೇಟೆ ನಗರದ ವಿಎನ್ಸಿ ಕಾಲೇಜು, ಎಪಿಎಂಸಿ, ಕಾಯಿಪಲ್ಲೆ ಮಾರುಕಟ್ಟೆ, ಕಮಲಾಪುರ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಮಂಗಳವಾರ ಪಾದಯಾತ್ರೆ ನಡೆಸಿ, ಪ್ರಚಾರ ನಡೆಸಿದರು.

ಶ್ರೀರಾಮುಲು ಪರ ಶೆಟ್ಟರ್ ಪ್ರಚಾರ
ಬುಧವಾರ ಮಾಜಿ ಸಿಎಂ ಮತ್ತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಬಳ್ಳಾರಿಯಲ್ಲಿ ಬಿ.ಶ್ರೀರಾಮುಲು ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ತೋರಣಗಲ್, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಬೆಳಗ್ಗೆ ಪ್ರಚಾರ ನಡೆಸಲಿರುವ ಅವರು, ಸಂಜೆ 5 ಗಂಟೆಗೆ ಹೂವಿನಹಡಗಲಿಯಲ್ಲಿ ಮತ್ತು 7-30ಕ್ಕೆ ಕೊಟ್ಟೂರು ಪಟ್ಟಣದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

ಬಿಸ್ವಾಸ್ ವರ್ಸಸ್ ಬಿಜೆಪಿ
ಬಳ್ಳಾರಿ ಜಿಲ್ಲಾಧಿಕಾರಿ ವಿರುದ್ಧ ಜಿಲ್ಲೆಯ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಬಿಸ್ವಾಸ್ ವರ್ತನೆ ಬಗ್ಗೆ ರಾಜ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಹೇಳಿದ್ದಾರೆ.












Click it and Unblock the Notifications