Boat Accident: ಜಬಲ್ಪುರ ಬಾರ್ಗಿ ನದಿಯಲ್ಲಿ ದೋಣಿ ದುರಂತ: 4 ಸಾವು, ಹಲವರು ನಾಪತ್ತೆ
ಜಬಲ್ಪುರ: 35 ರಿಂದ 40 ಜನರಿದ್ದ ಕ್ರೂಸ್ ಹಡಗು (ದೋಣಿ) ನದಿಯಲ್ಲಿ ಮುಗುಚಿ ಬಿದ್ದಿದೆ. ಪರಿಣಾಮ ಕನಿಷ್ಠ ನಾಲ್ಕು ಮಂದಿ ಸಾವಿಗಿಡಾಗಿದ್ದಾರೆ. ಅನೇಕ ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆ
ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಬಾರ್ಗಿ ನದಿಯಲ್ಲಿ ಜರುಗಿದೆ. ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ವರದಿ ಆಗಿದೆ.
ನದಿಯಲ್ಲಿ ಎಂದಿನಂತೆ ಹಡಗು ಸಾಗಿ ಬರುತ್ತಿತ್ತು. ಈ ವೇಳೆ ಹಠಾತ್ ಬಿರುಗಾಳಿ ಎದ್ದ ಕಾರಣ ನಿಯಂತ್ರಣಗೊಳ್ಳದ ಹಡಗು ಮುಗುಚಿತ ಬಿದ್ದು ಅಪಘಾತ ಸಂಭವಿಸಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಬಾರ್ಗಿ ಪಟ್ಟಣ) ಅಂಜುಲ್ ಮಿಶ್ರಾ ಅವರು ಕಾರಣ ವಿವರಿಸಿದರು.

ರಕ್ಷಣಾ ಕಾರ್ಯಾಚರಣೆ ಈಗಾಗಲೇ ಚಾಲ್ತಿಯಲ್ಲಿದ್ದು, ಹಡಗಿನಲ್ಲಿದ್ದ ಸುಮಾರು 18 ಜನರನ್ನು ರಕ್ಷಿಸಿದ್ದೇವೆ. ಆದರೆ ಈವರೆಗೂ ಸುಮಾರು 15 ರಿಂದ 18 ಜನರು ಕಾಣೆಯಾಗಿದ್ದು, ಅವರಿಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆದಿದೆ. ಪ್ರಯಾಣಿಕರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಪೊಲೀಸ್ ಮಾಹಿತಿ ನೀಡಿದರು.
ಗುರುವಾರ ಸಂಜೆ ಜಬಲ್ಪುರದ ಬಾರ್ಗಿ ಅಣೆಕಟ್ಟು ಜಲಾಶಯದಲ್ಲಿ ಬಿರುಗಾಳಿ ಉಂಟಾಗಿದ್ದರಿಂದ ಪ್ರವಾಸಿ ಬಿಮಿನಿ-ಟಾಪ್ ದೋಣಿ ಮುಳುಗಿದೆ. ಸಾವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನರ್ಮದಾ ನದಿಯ ಹಿನ್ನೀರಿನಲ್ಲಿರುವ ಜನಪ್ರಿಯ ತಾಣವಾದ ಖಮರಿಯಾ ದ್ವೀಪದ ಬಳಿ ಈ ಘಟನೆ ಸಂಭವಿಸಿದೆ.
ಬಿರುಗಾಳಿ ತೀವ್ರಗೊಳ್ಳುತ್ತಿದ್ದಂತೆ, ಏರುತ್ತಿರುವ ಅಲೆಗಳ ವಿರುದ್ಧ ದೋಣಿ ಸ್ಥಿರತೆಯನ್ನು ಕಳೆದುಕೊಂಡಿತು. ನೋಡ ನೋಡುತ್ತಿದ್ದಂತೆ ಪಲ್ಟಿ ಆಯಿತು. ಘಟನೆಯ ಮಾಹಿತಿ ತಿಳಿದು ಸ್ವಲ್ಪ ಸಮಯದ ನಂತರ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ಬಾರ್ಗಿ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣೆ ಪಡೆ (SDRF) ಯ ವಿಶೇಷ ತಂಡವು ಶೋಧ ಕಾರ್ಯಾಚರಣೆ ಮುಂದುವರಿಸಿದೆ.
ಬಾರ್ಗಿ ಅಣೆಕಟ್ಟು ಮಧ್ಯಪ್ರದೇಶದಲ್ಲಿ ಜಲ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗಿದೆ. ಇಲ್ಲಿಗೆ ನಿತ್ಯ ಸಂಜೆ ವಿಹಾರಕ್ಕೆ ಅನೇಕ ಮಂದಿ ಭೇಟಿ ನೀಡುತ್ತಾರೆ. ಆದರೆ ಇಂದು ಹವಾಮಾನ ವೈಪರೀತ್ಯದ ತೀವ್ರತೆಯೇ ಇಂತಹ ದುರ್ಘಟನೆ ಸಂಭವಿಸಿದೆ.












Click it and Unblock the Notifications