ಬಳ್ಳಾರಿ: ನೀರಿನ ಸಮಸ್ಯೆ, ನದಿಯಲ್ಲೇ ಬೋರ್ವೆಲ್ ಕೊರೆದ ಜನ
ಬಳ್ಳಾರಿ, ಮಾರ್ಚ್ 25: ಬೇಸಿಗೆಯ ಬಿಸಿ ನೆತ್ತಿ ಸುಡುತ್ತಿದೆ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ. ಅಂತರ್ಜಲ ಮಟ್ಟ ಕುಸಿತವಾಗಿದ್ದು, ಬೋರ್ವೆಲ್ಗಳು ಬತ್ತಿ ಹೋಗಿವೆ. ಗಣಿನಾಡು ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಕಂಡುಬಂದಿದೆ. ಆದ್ದರಿಂದ ಜನರು ನದಿಗಳಲ್ಲಿಯೇ ಬೋರ್ವೆಲ್ ಕೊರೆಯುತ್ತಿದ್ದಾರೆ.
ಬಳ್ಳಾರಿಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿ ವಿವಿಧ ಗ್ರಾಮಗಳ ಜನರು ಕುಡಿಯುವ ನೀರಿ, ಜಮೀನಿಗೆ ನೀರು ಹಾಯಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ವೇದಾವತಿ ನದಿಯೊಳಗೆ ಬೋರ್ವೆಲ್ ಕೊರೆಯುತ್ತಿದ್ದಾರೆ.

ರೂಪನಗುಡಿ, ಕಮ್ಮರಚೇಡ್ ಮುಂತಾದ ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಒಂದು ಗ್ರಾಮದಲ್ಲಿ ಸುಮಾರು 7 ಸಾವಿರ ಮತ್ತೊಂದು ಗ್ರಾಮದಲ್ಲಿ ಸುಮಾರು 4 ಸಾವಿರ ಜನರಿದ್ದಾರೆ. ಜನರು, ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ.
ಆದ್ದರಿಂದ ವೇದಾವತಿ ನದಿಯಲ್ಲಿ ಬೋರ್ವೆಲ್ ಕೊರೆದು ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ನದಿಯಲ್ಲಿ ಕೊರೆದ ಬೋರ್ವೆಲ್ನಲ್ಲಿ 3 ಇಂಚು ನೀರಿದೆ. ಇದು ಯಾವಾಗ ಬತ್ತಿ ಹೋಗುತ್ತದೆಯೋ? ತಿಳಿದಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ಸಿರಗುಪ್ಪ ತಾಲೂಕಿನ ವಿವಿಧ ಗ್ರಾಮದಲ್ಲಿಯೂ ನೀರಿನ ಕೊರತೆ ಕಂಡುಬಂದಿದೆ. ವೇದಾವತಿನದಿಯಿಂದ ನೀರೆತ್ತಲು ಸಾಲು ಸಾಲು ಪೈಪ್ ಹಾಕಲಾಗಿದೆ. ನದಿಯ ನೀರು ನಂಬಿ ರೈತರು ಭತ್ತ, ಮೆಕ್ಕೆಜೋಳ ಬೆಳೆದಿದ್ದಾರೆ. ನದಿಯ ನೀರು ಖಾಲಿಯಾದರೆ ಮುಂದೇನು? ಎಂಬುದು ರೈತರ ಚಿಂತೆಗೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನೀರಿನ ಕೊರತೆ ಆಗಿದೆ. ಜಿಲ್ಲಾಡಳಿತ ಜನರ ಸಮಸ್ಯೆ ಅರಿತು. ತುಂಗಭದ್ರಾ ಕಾಲುವೆಗೆ ನೀರು ಹರಿಸಬೇಕು. ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ನೀರಿನ ಕೊರತೆ ಗ್ರಾಮಗಳು: ಬೇಸಿಗೆ ಆರಂಭದಲ್ಲಿಯೇ ಬಳ್ಳಾರಿ ಜಿಲ್ಲಾಡಳಿತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳ ಪಟ್ಟಿಯನ್ನು ಮಾಡಿತ್ತು. ಜಿಲ್ಲೆಯಲ್ಲಿ 71 ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗಬಹುದು ಎಂದು ಅಂದಾಜಿಸಿತ್ತು. ನೀರಿನ ಸಮಸ್ಯೆ ಪರಿಹಾರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿತ್ತು.
ಬಳ್ಳಾರಿಯ 14, ಸಂಡೂರು 20, ಸಿರಗುಪ್ಪ 11, ಕುರುಗೋಡು 12, ಕಂಪ್ಲಿ 14 ಹಳ್ಳಿಗಳಲ್ಲಿ ನೀರಿನ ಕೊರತೆ ಕಾಡಬಹುದು ಎಂದು ಅಂದಾಜಿಸಲಾಗಿತ್ತು. ಕಳೆದ ವರ್ಷ 120ಕ್ಕೂ ಅಧಿಕ ಗ್ರಾಮದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಂಡುಬಂದಿತ್ತು. ವಿವಿಧ ಯೋಜನೆಗಳಡಿ ಈಗ ಹಲವು ಗ್ರಾಮಗಳಿಗೆ ನೀರಿನ ಸಂಪರ್ಕ ಸಿಕ್ಕಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನಡೆಸಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು, ನೀರು ಲಭ್ಯವಿರುವ ಖಾಸಗಿ ಬೋರ್ವೆಲ್ ವಶಕ್ಕೆ ಪಡೆಯುವುದು ಸೇರಿದಂತೆ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತುಂಗಭದ್ರಾ ಡ್ಯಾಂ ಎಲ್ಎಲ್ಸಿ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಭರ್ತಿ ಮಾಡಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ತಾಲೂಕುಗಳ ನೀರಿನ ಸ್ಥಿತಿಗತಿ ಕುರಿತು ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳ ಕಛೇರಿಗೆ ವರದಿ ಸಲ್ಲಿಕೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.












Click it and Unblock the Notifications