ಜನಾರ್ದನ ರೆಡ್ಡಿಗೆ ಬಾಡಿಗೆ ಮನೆ ಕೊಟ್ಟು ಸುದ್ದಿಯಾದ ಡಾಕ್ಟ್ರ ಸುದ್ದಿ
ಬಳ್ಳಾರಿ, ಮೇ 04:"ನಾನು, ಡಾಕ್ಟರ್ ಎನ್. ಪಿ. ವೆಂಕಟೇಶ್. ಎಂಬಿಬಿಎಸ್ ಡಾಕ್ಟರ್ ಅಲ್ಲ, ಜಸ್ಟ್ ಡಾಕ್ಟರೇಟ್ ಅಷ್ಟೇ. ಅದೂ ಕಾಶಿಯ ಧರ್ಮಪೀಠ ನನ್ನ ಸೇವೆ ಮೆಚ್ಚಿ ಡಾಕ್ಟರೇಟ್ ನೀಡಿದೆ. ಅದಕ್ಕೇ ಜನರು ಡಾಕ್ಟ್ರು ಅಂತಿದ್ದಾರೆ.
ಐದು ಜನ ಸಿಎಂಗಳು, ಕರ್ನಾಟಕ - ಆಂಧ್ರದ ಎಲ್ಲಾ ಪಕ್ಷಗಳ ಮುಖಂಡರು ನಮ್ಮ ಮನೆಗೆ ಬಂದು, ವಿಶ್ರಾಂತಿ ಪಡೆದು, ಮುಂದಿನ ಪ್ರಯಾಣ ಬೆಳೆಸಿದ್ದಾರೆ. ಎಲ್ಲಾ ದೊಡ್ಡ ದೊಡ್ಡೋರ ಸಹವಾಸವಿದೆ. ಏನೂ ಉಪಯೋಗ ಪಡೆದಿಲ್ಲ. ದೊಡ್ಡೋರ ಸಹವಾಸ ಅಂದ್ರೆ ನನಗೆ ಗ್ರೇಟ್, ದೊಡ್ಡ ಫೀಲಿಂಗ್" ಅನ್ನುತ್ತಲೇ ಎದೆಯುಬ್ಬಿಸುವ ಡಾಕ್ಟ್ರು ವೆಂಕಟೇಶ್ ವಿಶೇಷ ವ್ಯಕ್ತಿ.
ಪದ್ಮಾವತಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ರೆಡ್ಡಿ ವಿರುದ್ಧ ಆರೋಪ
ಸಾವಿರಾರು ಕೋಟಿ ರೂಪಾಯಿಗಳನ್ನು ಹೊಂದಿ, ಐಷಾರಾಮಿ ಜೀವನ ನಡೆಸುತ್ತಿರುವ ಗಣಿ ಉದ್ಯಮಿ ಜಿ. ಜನಾರ್ದನರೆಡ್ಡಿಗೆ ಕೇವಲ 101 ರೂಪಾಯಿ ಬಾಡಿಗೆಗೆ ಮನೆ ನೀಡುವ ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ. ಇದುವರೆಗೆ ಎಲೆಮರೆಕಾಯಿ ಆಗಿದ್ದ ಈ ಡಾಕ್ಟ್ರು, ಏಕಾಏಕಿ ಮಾಧ್ಯಮಗಳಲ್ಲಿ ಸುದ್ದಿಯಾಗಿ ಹಳ್ಳಿಹಳ್ಳಿ ದಾಟಿ, ರಾಜಧಾನಿ ದೆಹಲಿಯನ್ನೂ ತಲುಪಿಬಿಟ್ಟಿದ್ದಾರೆ.
ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ: ಮುರಳೀಧರ ರಾವ್ ಸ್ಪಷ್ಟನೆ
ಅರ್ಥಾತ್ ಇವರದ್ದೂ ಈಗ ದೊಡ್ಡಸುದ್ದಿ. ಕ್ಷಮಿಸಿ, ಅದೂ ದೊಡ್ಡ ಗಣಿಧಣಿಗೆ ಕೇವಲ 101 ರೂಪಾಯಿ ಬಾಡಿಗೆಗೆ ದೊಡ್ಡ ಮನೆ ನೀಡಿದ್ದಕ್ಕಾಗಿ ಇವರದ್ದೂ ದೊಡ್ಡ ಸುದ್ದಿ. ಒನ್ ಇಂಡಿಯಾ ಕನ್ನಡದ ಜೊತೆ ಆತ್ಮೀಯವಾಗಿ ಮಾತನಾಡಿರುವ ಇವರು ಏನು ಹೇಳ್ತಾರೆ ಕೇಳಿ...
ಬಿ. ಶ್ರೀರಾಮುಲು ನಂತರ ಇವರೇ ಸಖತ್ ಬ್ಯುಸಿ
ಚಿತ್ರದುರ್ಗ-ಬಳ್ಳಾರಿ ಮಧ್ಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಒಂದು ಕುಗ್ರಾಮ ಕೆಳಗಳಹಟ್ಟಿ. ನುಂಕೇಮಲ್ಲೇಶ್ವರ ದೇವಸ್ಥಾನ ತಲುಪಲಿಕ್ಕೆ ಈ ಹಳ್ಳಿಯನ್ನು ಹಾದು ಹೋಗಲೇಬೇಕು. ಈ ಹಳ್ಳಿಯ ಮೊದಲ ಕಟ್ಟಡವೇ ಡಾ. ಪಿ. ಶಾರದಾ ನಿಲಯ. ನಮ್ಮ ಡಾಕ್ಟ್ರು ಪಿ. ವೆಂಕಟೇಶ್ ಹೆಂಡ್ತಿಗೇ ಅಂತ ಪ್ರೀತಿಯಿಂದ, ಕಾಳಜಿಯಿಂದ, ಜವಾಬ್ದಾರಿಯಿಂದ ಕಟ್ಟಿಸಿಕೊಟ್ಟಿರುವ ತಾಜಮಹಲ್! ಇದು.
16 ಎಕರೆ ಜಾಗದಲ್ಲಿ ಇರುವ ಮನೆ, ಒಂದು ಅರ್ಧ ಎಕರೆಯಷ್ಟು ಜಾಗ ಹೊಂದಿದೆ. ಕೆಳಗಳಹಟ್ಟಿಗೆ ಪ್ರವೇಶ ಮಾಡಲಿಕ್ಕೆ ನುಂಕೇಮಲ್ಲೇಶ್ವರ ದೇವಸ್ಥಾನದ ಕಮಾನು ದಾಟಿ ಹೋಗುತ್ತಿದ್ದಂತೆಯೇ ಬಲಭಾಗದಲ್ಲಿ ಇರುವ ಮನೆಯಲ್ಲಿ ಆಳೆತ್ತರದ ಬಿಜೆಪಿ ಬಾವುಟಗಳು, ಲೀಡರುಗಳ ಕಟೌಟುಗಳು, ಅಲ್ಲಲ್ಲಿ ಕೂತಿರುವ ಜನರ ಗುಂಪು, ಕುರ್ಚಿಗಳು ಸ್ವಾಗತಿಸುತ್ತವೆ.
ಮನೆಯ ಕಾಪೌಂಡ್ ನಲ್ಲಿಯೇ ಎದುರಾಗುವ ಬಿಜೆಪಿ ಪುಡಾರಿ ಲೀಡರ್ ಗಳು, ನೀವ್ಯಾರು? ಏತಕ್ಕಾಗಿ ಬಂದೀರಿ? ಎನ್ನುತ್ತಲೇ ಮಾತನಾಡಿಸುತ್ತಾರೆ. ಪ್ರಸ್ತುತ ಮೊಳಕಾಲ್ಮೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿ. ಶ್ರೀರಾಮುಲು, ಜಿ. ಜನಾರ್ದನರೆಡ್ಡಿ ನಂತರ ಇವರೇ ಅತ್ಯಂತ ಬ್ಯುಸಿ. ಇವರನ್ನು ಹಿಡಿದು ಕೂಡಿಸಿ, ಮಾತನಾಡಿಸಿದೆವು.
ರೆಡ್ಡಿ ಸಾಮ್ರಾಜ್ಯದ ಶಕ್ತಿ ಕೇಂದ್ರ 'ಕುಟೀರ'ದ ವೈಭವ, ಈಗಿನ ನೀರವ
ಯಾರಿಗೆಲ್ಲಾ ಮನೆ ನೀಡಿದ್ದೀರಿ?
ಧರ್ಮಸಿಂಗ್, ಎಸ್. ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಆಂಧ್ರದ ಅನೇಕ ರಾಜಕಾರಣಿಗಳಿಗೆ. ಬಹುತೇಕರು ಒಂದೆರೆಡು ತಾಸು ವಿಶ್ರಾಂತಿ ಪಡೆದು ಹೋಗುತ್ತಾರೆ. ಆದರೆ, ಜಿ. ಜನಾರ್ದನರೆಡ್ಡಿಯೇ ಇಲ್ಲಿ ಬಹುದಿನಗಳ ಕಾಲ ತಂಗಿರುವುದು.
ಬಾಡಿಗೆ ಎಷ್ಟು?
ಕೇವಲ 101 ರೂಪಾಯಿ ಬಾಡಿಗೆ. ಬಾಡಿಗೆದಾರ ಮನೆ ಖಾಲಿ ಮಾಡುವಾಗ ತಪ್ಪದೇ ಕೊಡಬೇಕು. ಆ 101 ರೂಪಾಯಿಯನ್ನು ನಾನು ಶ್ರದ್ಧೆ, ಭಕ್ತಿಯಿಂದ ಕೊಲ್ಲಾಪುರ ಲಕ್ಷ್ಮಿ ದೇವಸ್ಥಾನಕ್ಕೆ ಸಲ್ಲಿಸಿ, ಬಾಡಿಗೆದಾರರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇನೆ.
ರೆಡ್ಡಿಯವರಿಗೆ 101 ರೂ.ಗೆ ಬಾಡಿಗೆ ?
ರೆಡ್ಡಿ ಮೊದಲು ಮನೆಗೆ ಬಂದಾಗ, ಅವರ ಪಿಎಗಳು ಮನೆ ಖರೀದಿ ಮಾತನಾಡಿದರು. ಬೇಸರವಾಯಿತು. ಹೆಂಡತಿ ಶಾರದಳನ್ನು ಕೇಳಿದೆ, ಬೇಕಾದಷ್ಟು ದಿನ ಇದ್ದು ಹೋಗಲಿ, ಮಾರುವುದು ಬೇಡ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ್ರೆ ನಮ್ಮ ಮಕ್ಕಳಿಗಾದ್ರೂ ಸಹಾಯ ಆಗುತ್ತೆ ಅಂದ್ರು.
ನಾನು ಮಾರುವುದಿಲ್ಲ, ಇದ್ದು ಹೋಗಿ ಅಂದೆ. ಅವರು ಬಂದಾಗಿನಿಂದ ನಾನು ಮನೆಯ ಹೊರಗಡೆ ಔಟ್ ಹೌಸ್ ಸೇರಿದೆ. ನನ್ನ ಸಾಮಾನು - ಸರಂಜಾಮು ಏನೂ ಇಲ್ಲಿಲ್ಲ. ಬಾಡಿಗೆ ಮಾತನಾಡಿದಾಗ ನಾನು 101 ರೂಪಾಯಿ ಫಿಕ್ಸ್ ಮಾಡಿದೆ. ಅವರೆಲ್ಲರೂ ಮುಗುಳ್ನಕ್ಕರು. ನಾನು ಸಿಕ್ಕಾಪಟ್ಟೆ ನಕ್ಕುಬಿಟ್ಟೆ.
ರೆಡ್ಡಿಗೆ ಮನೆ ಕೊಟ್ಟ ಅನುಭವ?
ರೆಡ್ಡಿಗೆ ಮನೆ ಕೊಡಲು ಮೊದಮೊದಲು ಸಿಕ್ಕಾಪಟ್ಟೆ ಭಯ ಆಯಿತು. ಫ್ರೆಂಡ್ಸ್ ಸಿಬಿಐ, ಕೋರ್ಟ್, ಪೊಲೀಸ್ ಅಂತೆಲ್ಲಾ ಭಯ ಬೀಳಿಸಿದರು. ಹೆಂಡತಿ ಬೆಂಬಲ ಇತ್ತು. ಮನೆ ಕೊಟ್ಟೇಬಿಟ್ಟೆ. ಆದ್ರೆ, ರೆಡ್ಡಿಗೆ ಇರೋ ಪಾಪ್ಯುಲಾರಿಟಿ ಸಿಕ್ಕಾಪಟ್ಟೆ ದೊಡ್ದು. ಜನ ರಾಮುಲು, ರೆಡ್ಡಿನ ನೋಡಾಕೇ ಗುಂಪು ಗುಂಪಾಗಿ ಸಾಲುಗಟ್ಟಿ ಬರ್ತಿದ್ದಾರೆ.
ಏನೋ ಕಷ್ಟದಲ್ಲಿ ಇರೋ ರೆಡ್ಡಿಗಳಿಗೆ ಸಹಾಯ ಮಾಡಿದ ಸಂತೋಷ ಇದೆ. ಆರು ವರ್ಷಗಳ ಮನೆಗೆ ದೊಡ್ಡ ಹೆಸರು ಬಂತು.
ಮನೆಯ ಗ್ರೌಂಡ್ ಫ್ಲೋರ್ ನಲ್ಲಿ 3 ಬೆಡ್ರೂಂಗಳು, 1 ಕಿಚನ್, 1 ವರಂಡಾ, 1 ಹಾಲ್ ಇದೆ. ಔಟ್ ಹೌಸ್ ಇದೆ. 2 ಮಾಸ್ಟರ್ ಬೆಡ್ರೂಂಗಳು ಫಸ್ಟ್ ಫ್ಲೋರ್ ನಲ್ಲಿವೆ. ಕಾರಿಡಾರ್ ಇದೆ. ಐಷಾರಾಮಿ ಸೌಲಭ್ಯಗಳಿವೆ. 10 ಜನರ ಅಡುಗೆ ಟೀಂ ಇದೆ. ಟಿಫನ್, ಮಧ್ಯಾಹ್ನದ ಊಟ ರೆಡಿ ಆಗುತ್ತಲೇ ಇರುತ್ತದೆ.
ಏನನ್ನು ನಿರೀಕ್ಷೆ ಮಾಡುತ್ತಿದ್ದೀರಿ?
ನೀರಿಲ್ಲದ ನಮ್ಮ ಜಿಲ್ಲೆಗೆ ನೀರಾವರಿ ಸಿಗಬೇಕು. ಕುಡಿಯುವ ನೀರು ತುಂಗಭದ್ರಾದಿಂದ ಪಡೆಯಬೇಕು ಅನ್ನೋ ಕನಸಿದೆ. ಇನ್ನು ದೊಡ್ಡ ಶ್ರೀಮಂತ ರೆಡ್ಡಿ ಫ್ಯಾಕ್ಟರಿಗಳನ್ನು ಹಾಕಿದ್ರೆ ನಮ್ ಹುಡುಗ್ರುಗೆ ಕೆಲಸ ಸಿಗುತ್ತೆ. ಇನ್ನೂ ಏನೇನೋ ಇದೆ ಬಿಡ್ರಿ ಅನ್ನುತ್ತಲೇ ತಲೆ ಕೆರೆದುಕೊಂಡು, ಕಣ್ಣು ಒರೆಸಿಕೊಳ್ಳುತ್ತಾರೆ.