ಬಳ್ಳಾರಿಯಿಂದ ಬೆಂಗಳೂರು, ಹೈದರಾಬಾದ್ಗೆ ವಿಮಾನ, ವೇಳಾಪಟ್ಟಿ
ಬಳ್ಳಾರಿ, ಅಕ್ಟೋಬರ್ 26; ಉಡಾನ್ ಯೋಜನೆಯಡಿ ಬಳ್ಳಾರಿಯಿಂದ ಎರಡು ನಗರಗಳಿಗೆ ವಿಮಾನ ಸೇವೆ ಅಕ್ಟೋಬರ್ 30ರಿಂದ ಆರಂಭವಾಗಲಿದೆ. ಅಲಯನ್ಸ್ ಏರ್ ವಿಮಾನ ಸಂಚಾರವನ್ನು ಆರಂಭಿಸಲಿದೆ.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಿದ್ಯಾನಗರ (ಬಳ್ಳಾರಿ) ಯಿಂದ ಬೆಂಗಳೂರು, ಹೈದರಾಬಾದ್ ನಗರಗಳಿಗೆ ತಡೆ ರಹಿತ, ಪ್ರತಿದಿನದ ವಿಮಾನ ಹಾರಾಟ ಪ್ರಾರಂಭವಾಗುತ್ತಿದೆ.
ಬಳ್ಳಾರಿ ವಿಮಾನ ನಿಲ್ದಾಣ; ಕರ್ನಾಟಕ ಸರ್ಕಾರದ ಮಹತ್ವದ ತೀರ್ಮಾನ
2017ರಲ್ಲಿ ಟ್ರೂಜೆಟ್ ಕಂಪನಿ ಬಳ್ಳಾರಿಯಿಂದ ಬೆಂಗಳೂರು, ಹೈದರಾಬಾದ್ಗೆ ವಿಮಾನ ಸಂಚಾರ ಆರಂಭಿಸಿತ್ತು. ಆದರೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮಾರ್ಚ್ನಲ್ಲಿ ಹಾರಾಟ ನಿಲ್ಲಿಸಲಾಗಿತ್ತು.
Breaking; ಹುಬ್ಬಳ್ಳಿ-ದೆಹಲಿ ನೇರ ವಿಮಾನ ಆರಂಭ, ವೇಳಾಪಟ್ಟಿ
ಮೊದಲು ವಾರದ ಎಲ್ಲಾ ದಿನ ಟ್ರೂ ಜೆಟ್ ವಿಮಾನ ಸಂಚಾರ ನಡೆಸುತ್ತಿತ್ತು. ಬಳಿಕ ವಾರಕ್ಕೆ ಮೂರು ದಿನ, ಎರಡು ದಿನ ವಿಮಾನ ಹಾರಾಟ ನಡೆಸುತ್ತಿತ್ತು. ಬಳಿಕ ವಿಮಾನ ಸೇವೆ ಸ್ಥಗಿತಗೊಂಡಿತ್ತು.
ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರಿಡಲು ಸಂಪುಟ ಸಭೆ ಅನುಮೋದನೆ
ಈಗ ಉಡಾನ್ ಯೋಜನೆಯಡಿ ಅಲಯನ್ಸ್ ಏರ್ ವಿಮಾನ ಹಾರಾಟದ ಅನುಮತಿ ಪಡೆದಿದೆ. ಅಕ್ಟೋಬರ್ 30ರಿಂದಲೇ ವಿಮಾನ ಹಾರಾಟ ಆರಂಭವಾಗಲಿದೆ. ವಿಮಾನದ ಬುಕ್ಕಿಂಗ್ ಸಹ ಪ್ರಾರಂಭಗೊಂಡಿದೆ.
ವೇಳಾಪಟ್ಟಿ; ಅಲಯನ್ಸ್ ಏರ್ ವಾರದ ಏಳು ದಿನವೂ ಉಭಯ ನಗರಗಳ ನಡುವೆ ತಡೆ ರಹಿತ ವಿಮಾನ ಸೇವೆ ನೀಡಲಿದೆ. ವಿಮಾನ ಬೆಳಗ್ಗೆ 8.55ಕ್ಕೆ ಹೈದರಾಬಾದ್ನಿಂದ ಹೊರಟು, 10.20ಕ್ಕೆ ಬಳ್ಳಾರಿಗೆ ಆಗಮಿಸಲಿದೆ. ಬಳ್ಳಾರಿಯ ವಿದ್ಯಾನಗರದಿಂದ 10.50ಕ್ಕೆ ಹೊರಟು, 12.20ಕ್ಕೆ ಹೈದರಾಬಾದ್ ತಲುಪಲಿದೆ.
ಮತ್ತೊಂದು ವಿಮಾನ ಮಧ್ಯಾಹ್ನ 3.15ಕ್ಕೆ ಬೆಂಗಳೂರಿನಿಂದ ಹೊರಟು 4.20ಕ್ಕೆ ಬಳ್ಳಾರಿಯ ವಿದ್ಯಾನಗರ ತಲುಪಲಿದೆ. 4.45ಕ್ಕೆ ವಿದ್ಯಾನಗರದಿಂದ ಹೊರಟು 5.55ಕ್ಕೆ ಬೆಂಗಳೂರು ತಲುಪಲಿದೆ. ಇದು 72 ಸೀಟುಗಳ ವಿಮಾನ.
ಎರಡು ವಿಮಾನಗಳ ಹಾರಾಟ; ಟ್ರೂ ಜೆಟ್ ಕಂಪನಿ ಒಂದೇ ವಿಮಾನವನ್ನು ಹೈದರಾಬಾದ್, ಬೆಂಗಳೂರು ಮತ್ತು ಬಳ್ಳಾರಿ ನಡುವೆ ಹಾರಾಟ ನಡೆಸುತ್ತಿತ್ತು. ಹೈದರಾಬಾದ್ನಿಂದ ಆಗಮಿಸುವ ವಿಮಾನ ಬಳ್ಳಾರಿಗೆ ಬಂದು ಬಳಿಕ ಬೆಂಗಳೂರಿಗೆ ಹಾರಾಟ ನಡೆಸುತ್ತಿತ್ತು.
ಆದರೆ ಅಲಯನ್ಸ್ ಏರ್ ಎರಡು ಪ್ರತ್ಯೇಕ ವಿಮಾನಗಳ ವ್ಯವಸ್ಥೆ ಮಾಡಿದೆ. ಹೈದರಾಬಾದ್ ಮತ್ತು ವಿದ್ಯಾನಗರದ ನಡುವೆ ಒಂದು, ಬೆಂಗಳೂರು ಮತ್ತು ವಿದ್ಯಾನಗರದ ನಡುವೆ ಮತ್ತೊಂದು ವಿಮಾನ ಹಾರಾಟ ನಡೆಸಲಿದೆ.
ಅಲಯನ್ಸ್ ಏರ್ ಕುರಿತು; ಏರ್ ಇಂಡಿಯಾದ ಭಾಗವಾಗಿದ್ದ ಅಲಯನ್ಸ್ ಏರ್ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸ್ವತಂತ್ರ ಉದ್ಯಮವಾಗಿದೆ. ಟಾಟಾ ತೆಕ್ಕೆಗೆ ಏರ್ ಇಂಡಿಯಾ ಸೇರಿದ ಬಳಿಕ ಅಲಯನ್ಸ್ ಏರ್ ಸರ್ಕಾರದ ಸ್ವಾಮ್ಯದಲ್ಲೇ ಉಳಿದಿದೆ.
ಪ್ರಸ್ತುತ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್(ಎಐಎಎಚ್ಎಲ್) ಭಾಗವಾಗಿ ಅಲಯನ್ಸ್ ಏರ್ ಕಾರ್ಯಾಚರಿಸುತ್ತಿದೆ.
ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯ ಭಾಗವಾಗಿ ಸ್ಥಳೀಯ ಮಾರ್ಗದಲ್ಲಿ ಅಲಯನ್ಸ್ ಏರ್ ವಿಮಾನಗಳು ಸಂಚಾರ ನಡೆಸುತ್ತಿವೆ. ಎರಡು ಮತ್ತು ಮೂರನೇ ಹಂತದ ನಗರಗಳನ್ನು ಸಂಪರ್ಕಿಸುವ ಸುಮಾರು 100 ಮಾರ್ಗದಲ್ಲಿ ವಿಮಾನಗಳು ಹಾರಾಟ ಮಾಡುತ್ತಿವೆ.
69 ವರ್ಷಗಳ ಬಳಿಕ ಏರ್ ಇಂಡಿಯಾ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಬಂದು ಸೇರಿದೆ. ಸರ್ಕಾರದ ವಶದಲ್ಲಿದ್ದ ಸಂಸ್ಥೆಯನ್ನು 18 ಸಾವಿರ ಕೋಟಿ ನೀಡಿ ಖರೀದಿಸಿರುವ ಟಾಟಾ ಬಳಿ ಈಗಾಗಲೇ ಎರಡು ವಿಮಾನಯಾನ ಸಂಸ್ಥೆಗಳಿವೆ.
ಟಾಟಾ ಸಮೂಹ ಖರೀದಿ ಮಾಡಿದ ಬಳಿಕ 2022ರ ಜನವರಿ 27ರಂದು ಏರ್ ಇಂಡಿಯಾ ಮೇಲೆ ಟಾಟಾ ಪೂರ್ಣ ನಿಯಂತ್ರಣ ಪಡೆದುಕೊಂಡಿತು. ಟಾಟಾ ಏರ್ ಏಷ್ಯಾ ಮತ್ತು ವಿಸ್ತಾರಾ ಎಂಬ ವಿಮಾನಯಾನ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.
ಭಾರತದಲ್ಲಿ ಮೊದಲು ವಿಮಾನಯಾನ ಸೇವೆ ಆರಂಭಿಸಿದ್ದು ಜೆಆರ್ಡಿ ಟಾಟಾ. ಸರ್ಕಾರ ಬಳಿಕ ಸಂಸ್ಥೆಯನ್ನು ರಾಷ್ಟ್ರೀಕರಣ ಮಾಡಿ ತನ್ನ ತೆಕ್ಕೆಗೆ ಪಡೆಯಿತು. ಆದರೆ 2007ರ ಬಳಿಕ ಏರ್ ಇಂಡಿಯಾ ಸಾಲದ ಸುಳಿಗೆ ಸಿಲುಕಿತ್ತು.