ರೆಡ್ಡಿ ಪುತ್ರ, ರಾಮುಲು ಸಂಬಂಧಿಗೆ ಸೋಲು: ಬಳ್ಳಾರಿಯಲ್ಲಿ ಬಿಜೆಪಿ, ಶ್ರೀರಾಮುಲು ಇಬ್ಬರೂ ಪಲ್ಟಿ
ಬಳ್ಳಾರಿ ಮಹಾನಗರಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಪಾಲಿಕೆಯನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ರೆಡ್ಡಿ ಭದ್ರಕೋಟೆ, ಶ್ರೀರಾಮುಲು ಪ್ರಭಾವವಿದ್ದರೂ, ಬಿಜೆಪಿಗೆ ಪಾಲಿಕೆಯಲ್ಲಿ ಜಯ ಸಾಧಿಸಲು ಸಾಧ್ಯವಾಗಲಿಲ್ಲ.
ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಎಂದೇ ಕರೆಯಲ್ಪಡುವ ಬಳ್ಳಾರಿ ಪಾಲಿಕೆಯಲ್ಲಿ ವಿಜಯಪತಾಕೆ ಹಾರಿಸಬೇಕು ಎನ್ನುವ ಶ್ರೀರಾಮುಲು ಪ್ರಯತ್ನ ಫಲ ಕೊಡಲಿಲ್ಲ. ಅಬ್ಬರದ ಪ್ರಚಾರ ನಡೆಸಿದರೂ ಮತದಾರ ಒಲಿಯಲಿಲ್ಲ.
ಜನಾರ್ಧನ ರೆಡ್ಡಿ ಸಕ್ರಿಯ ರಾಜಕಾರಣದಿಂದ ಮೂಲೆಗುಂಪಾದ ನಂತರ ಅವರ ಸಹೋದರರಾದ ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಕೂಡಾ ರಾಜ್ಯ ರಾಜಕಾರಣದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಬಳ್ಳಾರಿ ಜಿಲ್ಲೆ ವಿಭಜನೆಯ ವೇಳೆ ಸ್ವಲ್ಪ ಸದ್ದು ಮಾಡಿದ್ದನ್ನು ಬಿಟ್ಟರೆ, ಪಾಲಿಕೆ ಚುನಾವಣೆಯ ಪ್ರಚಾರದ ಸಂಪೂರ್ಣ ನೇತೃತ್ವವನ್ನು ಸಚಿವ ಬಿ.ಶ್ರೀರಾಮುಲು ವಹಿಸಿಕೊಂಡಿದ್ದರು. ರಾಮುಲುಗೆ ಗೋಲ್ಡನ್ ಚಾನ್ಸ್ ಮಿಸ್..

ಕಾಂಗ್ರೆಸ್ ಬಳ್ಳಾರಿ ಪಾಲಿಕೆಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ
ಬಳ್ಳಾರಿ ಪಾಲಿಕೆಯ ಒಟ್ಟು 39ಸ್ಥಾನಗಳ ಪೈಕಿ, ಕಾಂಗ್ರೆಸ್ 21, ಬಿಜೆಪಿ 13 ಮತ್ತು ಇತರರು 5ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಇತರ ಐವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಜಯ ಸಾಧಿಸಿದ್ದಾರೆ. ಆ ಮೂಲಕ, ಕಾಂಗ್ರೆಸ್ ಪಕ್ಷ ಬಳ್ಳಾರಿ ಪಾಲಿಕೆಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಚಿವ ಶ್ರೀರಾಮುಲು, ಕೋವಿಡ್ ನಡುವೆಯೂ ನಡೆಸಿದ ಬಿರುಸಿನ ಪ್ರಚಾರ ವರ್ಕೌಟ್ ಆಗಲಿಲ್ಲ.

ರೆಡ್ಡಿ ಪುತ್ರ, ರಾಮುಲು ಸಂಬಂಧಿಗೆ ಸೋಲು: ಬಿಜೆಪಿ ಪಲ್ಟಿ
ಬಿಜೆಪಿಗೆ ಯಾವಮಟ್ಟಿಗೆ ಸೋಲು ಅಪ್ಪಳಿಸಿದೆಯೆಂದರೆ ಶ್ರೀರಾಮುಲು ಸೋದರ ಸಂಬಂಧಿ, ರಾಯಚೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಸಣ್ಣ ಫಕೀರಪ್ಪ ಅವರ ಮಗಳು ಉಮಾದೇವಿ ಸೋಲುಂಡಿದ್ದಾರೆ. ಇಷ್ಟೇ ಅಲ್ಲದೇ, ಶಾಸಕ ಸೋಮಶೇಖರ ರೆಡ್ಡಿ ಪುತ್ರ ಶ್ರವಣ ಕುಮಾರ್ ಹದಿನೆಂಟನೇ ವಾರ್ಡ್ ನಲ್ಲಿ ಪರಾಭವಗೊಂಡಿದ್ದಾರೆ. ಸೋಮಶೇಖರ ರೆಡ್ಡಿ ಬಳ್ಲಾರಿ ನಗರದ ಶಾಸಕರಾಗಿದ್ದರೂ, ಪುತ್ರನನ್ನು ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದಾರೆ.

ರಾಮುಲುಗೆ ಆರಂಭದಲ್ಲಿ ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನು ನೀಡಲಾಯಿತು
ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ ಶ್ರೀರಾಮುಲು ಉಪ ಮುಖ್ಯಮಂತ್ರಿಯಾಗುತ್ತಾರೆ ಎಂದೇ ಸುದ್ದಿಯಾಗಿತ್ತು. ಆದರೆ, ಅವರಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನು ನೀಡಲಾಯಿತು. ಒಲ್ಲದ ಮನಸ್ಸಿನಿಂದಲೇ ಸಚಿವ ಸ್ಥಾನದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದ ರಾಮುಲು ಅವರಿಗೆ ಕೋವಿಡ್ ಮೊದಲನೆಯ ಅಲೆಯ ವೇಳೆ ಆರೋಗ್ಯ ಇಲಾಖೆ ಅವರಿಂದ ಕಿತ್ತುಕೊಂಡು ಸಾಮಾಜಿಕ ಕಲ್ಯಾಣ ಖಾತೆಯನ್ನು ನೀಡಲಾಯಿತು.

ಶ್ರೀರಾಮುಲುಗೆ ಬಳ್ಳಾರಿಯ ಮತದಾರ ಒಲಿಯಲಿಲ್ಲ. ಬದಲಿಗೆ, ಸೋಲು ಇವರಿಗೆ ಶಕ್ತಿ ಕುಂದಿಸಿತು
ಅಲ್ಲಿಂದ ತಾನಾಯಿತು ತನ್ನ ಕೆಲಸವಾಯಿತೆಂದು ತನ್ನ ಪಾಡಿಗೆ ತಾನಿದ್ದ ಶ್ರೀರಾಮುಲುಗೆ ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುವ ಅವಕಾಶವಿತ್ತು. ಇಲ್ಲಿ ಗೆದ್ದರೆ ಮತ್ತೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಬಯಸಿದ್ದ ಶ್ರೀರಾಮುಲುಗೆ ಬಳ್ಳಾರಿಯ ಮತದಾರ ಒಲಿಯಲಿಲ್ಲ. ಬದಲಿಗೆ, ಸೋಲು ಇವರಿಗೆ ಶಕ್ತಿ ಕುಂದಿಸಿತು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.












Click it and Unblock the Notifications