ಬಳ್ಳಾರಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ
ಬಳ್ಳಾರಿ, ಮಾರ್ಚ್ 05: ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಫುಂಡಾಟಿಕೆಗೆ ಕೊನೆ ಇಲ್ಲದಂತಾಗಿದೆ. ಹೊಸಪೇಟೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರ ಬೆಂಬಲಿಗರ ನಡುವೆ ನಿನ್ನೆ ತಡ ರಾತ್ರಿ ಗಲಾಟೆ ನಡೆದಿದ್ದು, ಗಲಾಟೆ ತಡೆಯಲು ಬಂದ ಪೊಲೀಸರ ಮೇಲೆಯೇ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಮಾಜಿ ಶಾಸಕ ಆನಂದ್ ಸಿಂಗ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಬೆಂಬಲಿಗರು ನಿನ್ನೆ ರಾತ್ರ 11.30ರ ಸುಮಾರಿಗೆ ಹೊಸಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪೇದೆಗಳ ಮೇಲೆ ಈ ಗುಂಪು ಹಲ್ಲೆ ನಡೆಸಿದೆ.
ಪೇದೆಯ ಸಮವಸ್ತ್ರ ಎಳೆದು, ವಾಕಿ-ಟಾಕಿ ಕಿತ್ತುಕೊಂಡು ಹಲ್ಲೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ಈ ಫುಂಡಾಟಿಕೆಗೆ ವಿರೋಧ ವ್ಯಕ್ತವಾಗಿದೆ.

ಸರ್ಕಾರಿ ನೌಕರನ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದವರನ್ನು ಇಂದೇ ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಎರಡೂ ಗುಂಪಿನ ಸದಸ್ಯರು ಆನಂದ್ ಸಿಂಗ್ ಮತ್ತು ಸಂತೋಷ್ ಲಾಡ್ ಅವರ ಬೆಂಬಲಿಗರು ಎನ್ನಲಾಗುತ್ತಿದ್ದು, ಮಾಜಿ ಶಾಸಕರು ಮತ್ತು ಸಚಿವರಿಂದ ಘಟನೆ ಬಗ್ಗೆ ಈ ವರೆಗೆ ಪ್ರತಿಕ್ರಿಯೆ ದೊರೆತಿಲ್ಲ.
ಚುನಾವಣೆ ಸಮೀಪವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಫುಂಡಾಟ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ಗೆ ಋಣಾತ್ಮಕ ಪ್ರಚಾರ ನೀಡುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಸುದ್ದಿಮಾಡಿದ ಕಾಂಗ್ರೆಸ್ ಮುಖಂಡ 'ಪೆಟ್ರೋಲ್' ನಾರಾಯಣಸ್ವಾಮಿ ಪ್ರಕರಣ, ಮೊಹಮ್ಮದ್ ನಲಪಾಡ್ ಪ್ರಕರಣ ಈಗಾಗಲೇ ಕಾಂಗ್ರೆಸ್ಗೆ ಭಾರಿ ಮುಜುಗರ ಉಂಟುಮಾಡಿದ್ದು, ಇದೀಗ ಈ ಪ್ರಕರಣ ಅದೇ ಸಾಲಿಗೆ ಸೇರಿಗೆ.












Click it and Unblock the Notifications