ಶ್ರೀರಾಮುಲುಗೆ ವೇದಾವತಿ ದಡದಲ್ಲಿ ಜ್ಞಾನೋದಯ; ಕಾಂಗ್ರೆಸ್ ವ್ಯಂಗ್ಯ
ಬಳ್ಳಾರಿ, ನವೆಂಬರ್3: ಮೂರು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾದ ಬಿ. ಶ್ರೀರಾಮುಲು ಅವರಿಗೆ ವೇದಾವತಿ ದಡದಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಜ್ಞಾನೋದಯವಾಯಿತೇ? ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಪ್ರಶ್ನಿಸಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಶ್ರೀರಾಮುಲು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಕಾರ್ಯಪ್ರವೃತ್ತರಾಗಿ ದುರಸ್ತಿಗೊಂಡ ಬಿಡಿ ಹಳ್ಳಿ ಸಮೀಪ ವೇದಾವತಿ ನದಿಗೆ ಅಡ್ಡಲಾಗಿರುವ ಹೊಸ ಸೇತುವೆಗೆ ಹಣ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಬಹುದಿತ್ತಲ್ಲ. ಕಳೆದ ನಾಲ್ಕು ವರ್ಷಗಳ ಕಾಲ ನೆನಪಾಗದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೇಲೆ ಪ್ರೀತಿ ಒಮ್ಮೆಲೇ ಉಕ್ಕಿದ್ದಕ್ಕೆ ಕಾರಣ ಏನು? ಎಂದು ಶ್ರೀರಾಮುಲು ಉತ್ತರ ನೀಡಲಿ" ಎಂದು ಆಗ್ರಹಿಸಿದರು.
"ಇನ್ನು ಸಚಿವ ಶ್ರೀರಾಮುಲು ಅವರು ವಿಧಾನಸೌಧದಲ್ಲಿ ಕೂತು ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದು ಅನುದಾನ ತಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವುದನ್ನು ಬಿಟ್ಟು ಕಾಮಗಾರಿ ಸ್ಥಳದಲ್ಲಿ ಮಲಗುವುದು ಸರ್ಕಾರದ ಭಾಗವಾಗಿರುವ ಸಚಿವರಿಗೆ ಶೋಭೆಯಲ್ಲ" ಎಂದು ವ್ಯಂಗ್ಯವಾಡಿದ್ದಾರೆ.

ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಎಲ್ಎಲ್ಸಿ ಕಾಲುವೆಯ ದುರಸ್ತಿ ಕಾಮಗಾರಿ ಚುರುಕುಗೊಳಿಸುವ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ವೇದಾವತಿ ನದಿ ದಂಡೆಯ ಮೇಲೆ ವಾಸ್ತವ್ಯ ಹೂಡಿದ್ದರು. ರೈತರ ಜಮೀನುಗಳಿಗೆ ನೀರು ಹರಿಸಬೇಕಾದರೆ ಕಾಲುವೆಯ ದುರಸ್ತಿ ಕಾಮಗಾರಿ ಸಮರೋಪಾದಿಯಲ್ಲಿ ನಡೆಯಬೇಕು ಎಂದು ಬಿ. ಶ್ರೀರಾಮುಲು ಕಾಮಗಾರಿ ಸ್ಥಳದಲ್ಲೇ ಮೊಕ್ಕಂ ಹೂಡಿದ್ದರು.
(ನವೆಂಬರ್ 1) ರಿಂದ ವೇದಾವತಿ ನದಿ ದಡದಲ್ಲಿಯೇ ಇರುವ ಸಚಿವ ಶ್ರೀರಾಮುಲು, ಕಾಲುವೆ ನೀರು ಇಲ್ಲದೇ, ಒಣಗಿ ಹೋಗುತ್ತಿರುವ ಗದ್ದೆಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವತೆಯನ್ನು ತಿಳಿದುಕೊಂಡಿದ್ದರು. ಬಳಿಕ ರೈತರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಸಹ ಆಲಿಸಿದ್ದರು.
ಸಚಿವ ಶ್ರೀರಾಮುಲು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಸ್ಥಳದಲ್ಲೇ ಮೊಕ್ಕಂ ಹೂಡಿದ್ದರಿಂದ ಕಳೆದ ಒಂದು ವಾರದಿಂದ ಆರಂಭಗೊಂಡಿದ್ದ ಬೈರದೇವನಹಳ್ಳಿ ಎಲ್ಎಲ್ಸಿ ಕಾಲುವೆಯ ದುರಸ್ತಿ ಕಾಮಗಾರಿ ತಾತ್ಕಾಲಿಕವಾಗಿ ಪೂರ್ಣಗೊಂಡಿದೆ. ಬುಧವಾರ ರಾತ್ರಿ 9ಗಂಟೆ ಸುಮಾರಿಗೆ ತಾತ್ಕಾಲಿಕ ಪಿಲ್ಲರ್ ನಿರ್ಮಾಣ ಪೂರ್ಣಗೊಂಡಿತು.












Click it and Unblock the Notifications