ಉಪನ್ಯಾಸಕರಿಗೆ ಚೆಕ್ಪೋಸ್ಟ್ ಕೆಲಸಕೊಟ್ಟ ಚುನಾವಣಾ ಆಯೋಗ
ಬಳ್ಳಾರಿ, ಅಕ್ಟೋಬರ್ 10: ಲೋಕಸಭಾ ಉಪಚುನಾವಣೆ ಸಂಬಂಧ ಚುನಾವಣಾ ಆಯೋಗ ಶಿಕ್ಷಕರಿಗೆ ಚೆಕ್ಪೋಸ್ಟ್ ಕೆಲಸ ನೀಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 17 ಉಪನ್ಯಾಸಕರನ್ನು ಚೆಕ್ಪೋಸ್ಟ್ ನಲ್ಲಿ ತಪಾಸಣಾ ಕಾರ್ಯ ಕೊಟ್ಟಿದ್ದು ಈ ಕಡೆ ಸಿಲಬಸ್ ಬಾಕಿ ಉಳಿದಿದ್ದು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಇದರಿಂದ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಈ ಕುರಿತು ಈಗಾಗಲೇ ಆದೇಶ ಉಪನ್ಯಾಸಕರ ಕೈಸೇರಿದೆ. ಈ ಪ್ರಕಾರ ಉಪನ್ಯಾಕಸರೆಲ್ಲರೂ ಬುಧವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕಿದ್ದು ಚುನಾವಣೆ ಮುಗಿಯುವವರೆಗೂ ಕರ್ತವ್ಯ ನಿರ್ವಹಿಸಬೇಕಿದೆ.

ವಿದ್ಯಾರ್ಥಿಗಳಿಗೆ ಸಂಕಷ್ಟ
ಕಾಲೇಜಿನ ವಿವಿಧ ವಿಭಾಗಗಳ ಸಿಲಬಸ್ ಕೇವಲ ಶೇ.35ರಷ್ಟು ಮಾತ್ರ ಪೂರ್ಣಗೊಂಡಿದ್ದು, ಸುಮಾರು ಒಂದು ತಿಂಗಳ ಕಾಲ ಉಪನ್ಯಾಸಕರು ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡರೆ ಶೈಕ್ಷಣಿಕ ಹಿನ್ನಡೆಯಾಗುವುದು ಖಚಿತ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ. ಇನ್ನು ಡಿಸೆಂಬರ್ ನಲ್ಲಿ ನಡೆಯುವ ಕಿರು ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಬೇಕಾಗಿದೆ. ವಿದ್ಯಾರ್ಥಿಗಳ ಆಂತರಿಕ ಪರೀಕ್ಷಾ ಮೌಲ್ಯಮಾಪನ ಮಾಡಿ ಆನ್ ಲೈನ್ ನಲ್ಲಿ ಅಂಕಪಟ್ಟಿಯನ್ನು ಸೇರ್ಪಡಿಸುವ ಕೆಲಸವೂ ಇನ್ನು ಬಾಕಿ ಇದೆ.

ಉಪನ್ಯಾಸಕರಿಗೆ ಪಾಠ ಮಾಡಲು ಅನುವು ಮಾಡಿಕೊಡಿ
ಜಿಲ್ಲಾಡಳಿತದ ಈ ನಿರ್ಧಾರವನ್ನು ವಿರೋಧಿಸಿರುವ ವಿದ್ಯಾರ್ಥಿ ಸಂಘಟನೆಗಳು ಕೂಡಲೇ ತನ್ನ ನೀತಿಯನ್ನು ಬದಲಾಯಿಸಿಕೊಳ್ಳಬೇಕು. ಉಪನ್ಯಾಸಕರನ್ನು ಚುನಾವಣಾ ಕೆಲಸಕ್ಕೆ ಬಳಸದೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಿಡಬೇಕು ಎಂದು ಒತ್ತಾಯಿಸಿದೆ.

ವಿಧಾನಸಭಾ ಚುನಾವಣೆಯಲ್ಲೂ ಹೀಗೆ ಆಗಿತ್ತು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದ ಪದವಿ ಕಾಲೇಜು ಉಪನ್ಯಾಸಕರನ್ನು ಚುನಾವಣೆ ಕಾರ್ಯದ ನಿಮಿತ್ತ ಚೆಕ್ಪೋಸ್ಟ್ ಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸುವ ಕೆಲಸಕ್ಕೆ ನಿಯೋಜಿಸಲಾಗಿತ್ತು. ದಿನಕ್ಕೆ 8 ಗಂಟೆಯಂತೆ ಸಿನದ ಮೂರು ಅವಧಿಯಲ್ಲಿ ಉಪನ್ಯಾಸಕರು ಕೆಲಸ ಮಾಡಬೇಕಿತ್ತು. ಬೆಳಗ್ಗೆ 6ರಿಂದ ಮಧ್ಯಾಹ್ನ2 ಗಂಟೆ ಮತ್ತು ಮಧ್ಯಾಹ್ನ 2ರಿಂದ ರಾತ್ರಿ 10 ರಾತ್ರಿ 10ರಿಂದ ಬೆಳಗ್ಗೆ 6ವರೆಗೆ ಕೆಲಸ ನಿರ್ವಹಿಸಬೇಕಿತ್ತು.

ಬಳ್ಳಾರಿ ಉಪ ಚುನಾವಣೆ ಜವಾಬ್ದಾರಿ ಡಿಕೆ ಶಿವಕುಮಾರ್ ಹೊರಲಿದ್ದಾರೆ
ಒಂದೆಡೆ ಜಾರಕಿಹೊಳಿ ಸಹೋದರರು ಡಿಕೆ ಶಿವಕುಮಾರ್ ಅವರ ವಿರುದ್ಧ ಕಿಡಿ ಕಾರುತ್ತಿದ್ದಾರೆ, ಇನ್ನೊಂದೆಡೆ ಶಿವಕುಮಾರ್ ಗೆ ಬಳ್ಳಾರಿಯ ಲೋಕಸಭಾ ಉಪ ಚುನಾವಣೆ ಜವಾಬ್ದಾರಿ ನೀಡುವ ಸಾಧ್ಯತೆಗಳಿದೆ. ಹೀಗಿರುವಾಗ ಬಳ್ಳಾರಿಯಲ್ಲಿ ಎಷ್ಟು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications