ಬಳ್ಳಾರಿಯಲ್ಲಿ ಡಿಕೆಶಿ ಆಟ ನಡೆಯೊಲ್ಲ, ನಾವೇ ಗೆಲ್ಲೋದು: ಜನಾರ್ದನ ರೆಡ್ಡಿ
Recommended Video

ಬಾಗಲಕೋಟೆ, ಅಕ್ಟೋಬರ್ 14: ಸಕ್ರಿಯ ರಾಜಕೀಯದಿಂದ ದೂರ ಇರಬೇಕಾದರೂ, ಅದರ ಆವರಣದೊಳಗೆ ಆಗಾಗ ಕಾಣಿಸಿಕೊಳ್ಳುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಳ್ಳಾರಿ ಎಂದಿಗೂ ಬಿಜೆಪಿಯ ಭದ್ರಕೋಟೆ. ಇಲ್ಲಿ ನಾವೇ ಗೆಲ್ಲುವುದು ಎಂದು ಹೇಳಿದ್ದಾರೆ.
ನಾವು ಬಳ್ಳಾರಿಯಲ್ಲಿ ಪ್ರಭಾವ ಕಳೆದುಕೊಂಡಿಲ್ಲ. ಶ್ರೀರಾಮುಲು, ನಮ್ಮ ಸಹೋದರರು ಇಲ್ಲಿ ಗೆದ್ದಿದ್ದಾರೆ. ಇಲ್ಲಿ ಡಿ.ಕೆ. ಶಿವಕುಮಾರ್ ಅವರದು ಏನೂ ನಡೆಯುವುದಿಲ್ಲ ಎಂದು ರೆಡ್ಡಿ ಹೇಳಿದ್ದಾರೆ.
ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಯಾಕೆ ಯೋಚನೆ ಮಾಡ್ತೀರಿ. ಅವರದು ಕನಕಪುರ, ರಾಮನಗರದಲ್ಲಿ ನಡೆಯಬಹುದಷ್ಟೇ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಏನೂ ನಡೆಯೊಲ್ಲ. ಇಲ್ಲಿನ ಜನರು ನಮ್ಮನ್ನು ಭಾವನಾತ್ಮಕವಾಗಿ ಒಪ್ಪಿಕೊಂಡಿದ್ದಾರೆ. ಇಲ್ಲಿ ನಾವೇ ಗೆಲ್ಲುವುದು ಎಂದರು.

ಬಳ್ಳಾರಿಯಲ್ಲಿ ಶ್ರೀರಾಮುಲು ಮಣ್ಣಿನ ಮಗ. ನನ್ನ ಬಂಧನವಾದಾಗ ಸ್ವಾಭಿಮಾನ ಮೆರೆದ ಶ್ರೀರಾಮುಲು ರಾಜೀನಾಮೆ ನೀಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಸೋಲಿಸಲು ಎಲ್ಲರೂ ಒಂದಾದರು. ಆದರೂ ಐವತ್ತು ಸಾವಿರ ಮತಗಳ ಅಂತರದಿಂದ ಅವರು ಗೆದ್ದರು ಎಂದರು.
ಈಗ ಕಾಂಗ್ರೆಸ್ನವರು ಡಿ.ಕೆ. ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರ ಹೆಸರು ಹೇಳಿದರೆ ಬಳ್ಳಾರಿಯ ಜನತೆ ಆವೇಶದಲ್ಲಿ ಇನ್ನೂ ಹೆಚ್ಚಿನ ಮತಗಳನ್ನು ಬಿಜೆಪಿ ನೀಡಿ ಶಾಂತಾ ಅವರನ್ನು ಗೆಲ್ಲಿಸುತ್ತಾರೆ. ಇಲ್ಲಿನ ಜನರಿಗೆ ಸ್ವಾಭಿಮಾನವಿದೆ. ಬಳ್ಳಾರಿಯ ಜನರು ಶ್ರೀರಾಮುಲು ಅವರನ್ನು ಸ್ವಾಭಿಮಾನಿ ಎಂದೇ ಬೆಳೆಸಿದ್ದಾರೆ. ಹೀಗಾಗಿ ಅವರು ಮಣ್ಣಿನ ಮಗನನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಬಳ್ಳಾರಿಯ ಜನರು ಶಾಂತಮ್ಮನಿಗೆ ಮತಗಳನ್ನು ನೀಡಿ ಆಯ್ಕೆ ಮಾಡಿ ಕಳುಹಿಸುವುದರಲ್ಲಿ ಸಂಶಯವಿಲ್ಲ. ಅರಿಶಿಣ ಕುಂಕುಮ ಕೊಟ್ಟು ಮಗಳೆಂಬ ಮಮತೆಯೊಂದೊಗೆ ಉಡಿ ತುಂಬಿ ಆಯ್ಕೆ ಮಾಡುತ್ತಾರೆ ಎಂದರು.












Click it and Unblock the Notifications