Budget 2024; ಬಳ್ಳಾರಿಯಿಂದ ನೂತನ ರೈಲಿಗೆ ಬೇಡಿಕೆ, ಮಾರ್ಗ
ಬಳ್ಳಾರಿ, ಜನವರಿ 31: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2024-25ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ನಲ್ಲಿ ರೈಲ್ವೆ ಇಲಾಖೆಯ ಘೋಷಣೆಗಳು ಸೇರಿವೆ. ಬಜೆಟ್ನಲ್ಲಿ ಬಳ್ಳಾರಿ ಭಾಗಕ್ಕೆ ಹೊಸ ರೈಲುಗಳ ನಿರೀಕ್ಷೆ ಇದೆ.
ಲೋಕಸಭೆ ಚುನಾವಣೆ ಎದುರಾಗುವುದರಿಂದ, ಕರ್ನಾಟಕದಲ್ಲಿ 25 ಬಿಜೆಪಿಯ ಸಂಸದರು ಇರುವುದರಿಂದ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ನೈಋತ್ಯ ರೈಲ್ವೆ ಪ್ರಧಾನ ಕಛೇರಿಯನ್ನು ಹೊಂದಿದೆ.

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ. ಎಂ. ಮಹೇಶ್ವರ ಸ್ವಾಮಿ ಬಳ್ಳಾರಿ ಭಾಗದ ರೈಲುಗಳ ಬೇಡಿಕೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಕಳೆದ ವರ್ಷ ಬೆಂಗಳೂರು-ಬಳ್ಳಾರಿ ವಂದೇ ಭಾರತ್ ರೈಲಿಗೆ ಬೇಡಿಕೆ ಇಡಲಾಗಿತ್ತು. ಈ ಘೋಷಣೆ ಹೊರಬೀಳಲಿದಯೇ? ಎಂದು ಕಾದು ನೋಡಬೇಕಿದೆ.
ಕರ್ನಾಟಕದಲ್ಲಿ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ತಂದು ಕೊಡುವ ಮಾರ್ಗಗಳಲ್ಲಿ ಬಳ್ಳಾರಿ ಸಹ ಒಂದು. ವಾಣಿಜ್ಯೋದ್ಯಮದಿಂದಲೂ ಸಹ ಸಾಕಷ್ಟು ಆದಾಯವಿದೆ. ಆದ್ದರಿಂದ ಬಜೆಟ್ನಲ್ಲಿ ಜಿಲ್ಲೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಹ ಒತ್ತಾಯಿಸಲಾಗಿದೆ.
ಹೊಸ ರೈಲುಗಳ ಬೇಡಿಕೆ
* ಬಳ್ಳಾರಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲು. ಇಲ್ಲವಾದಲ್ಲಿ ಉಭಯ ನಗರಗಳ ನಡುವೆ ಇಂಟರ್ಸಿಟಿ ರೈಲು ಸಂಚಾರವನ್ನು ಬಳ್ಳಾರಿ-ಯಲಹಂಕ-ಬೆಂಗಳೂರು ಮಾರ್ಗದಲ್ಲಿ ಆರಂಭಿಸಬೇಕು.
* ಹುಬ್ಬಳ್ಳಿ-ಬಳ್ಳಾರಿ ಗುಂತಕಲ್ ಬೈಪಾಸ್, ರಾಯಚೂರು, ಕಲಬುರಗಿ ನಡುವೆ ಬೀದರ್ಗೆ ಹೊಸ ರೈಲನ್ನು ಆರಂಭಿಸಬೇಕು.
* ನೈಋತ್ಯ ರೈಲ್ವೆ ವಲಯದ ಕೇಂದ್ರ ಕಛೇರಿ ಇರುವ ಹುಬ್ಬಳ್ಳಿಯಿಂದ ಗುಂತಕಲ್ ಮಾರ್ಗವಾಗಿ ರಾಮೇಶ್ವರಂ ಮತ್ತು ಕನ್ಯಾಕುಮಾರಿಗೆ ರೈಲು ಸಂಚಾರ ಬೇಕು.
* ಶಿವಮೊಗ್ಗ-ಬಳ್ಳಾರಿ- ಚೆನ್ನೈ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುತ್ತಿದ್ದ ರೈಲನ್ನು ಪುನಃ ಆರಂಭಿಸಬೇಕು.
* ಬೆಂಗಳೂರು-ಹೊಸಪೇಟೆ, ಕಾರಟಗಿ-ಯಶವಂತಪುರ ರೈಲುಗಳು ಬಳ್ಳಾರಿ ಕಂಟೋನ್ಮೆಂಟ್ ಜೊತೆಗೆ ಕಡ್ಡಾಯವಾಗಿ ಬಳ್ಳಾರಿ ನಿಲ್ದಾಣಕ್ಕೆ ಬಂದು ಹೋಗಬೇಕು.
* ಮುಂಬೈ-ಹೊಸಪೇಟೆ ಎಕ್ಸ್ಪ್ರೆಸ್ ರೈಲು ಬಳ್ಳಾರಿ ಮಾರ್ಗವಾಗಿ ಮೈಸೂರು ತನಕ ವಿಸ್ತರಣೆ ಆಗಬೇಕು. ಗುಂತಕಲ್-ಚಿಕ್ಕಜಾಜೂರು ಎಕ್ಸ್ಪ್ರೆಸ್ ರೈಲು ಮಂಗಳೂರು ತನಕ ವಿಸ್ತರಣೆ ಆಗಬೇಕು.
ಉಳಿದಂತೆ ಬಳ್ಳಾರಿ-ರಾಯದುರ್ಗ-ಚಿತ್ರದುರ್ಗ-ಚಿಕ್ಕಜಾಜೂರು ಮಾರ್ಗದಲ್ಲಿ ರೈಲುಗಳ ಸಂಚಾರ ಹೆಚ್ಚಿದ್ದು, ಇದನ್ನು ಬ್ರಾಡ್ ಗೇಜ್ ಡಬ್ಲಿಂಗ್ ಮಾರ್ಗವಾಗಿ ಅಭಿವೃದ್ಧಿಗೊಳಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಹಲವು ರೈಲುಗಳು ಬಳ್ಳಾರಿ ನಗರ ರೈಲು ನಿಲ್ದಾಣಕ್ಕೆ ಆಗಮಿಸದೇ ಬಳ್ಳಾರಿ ಕಂಟೋನ್ಮೆಂಟ್ ಮೂಲಕ ಸಂಚಾರ ನಡೆಸುತ್ತವೆ. ಆದ್ದರಿಂದ ಜನರ ಅನುಕೂಲಕ್ಕಾಗಿ ರೈಲುಗಳು ಬಳ್ಳಾರಿ ನಗರಕ್ಕೆ ಆಗಮಿಸುವಂತೆ ಆಗಬೇಕು ಎಂಬ ಬೇಡಿಕೆಯೂ ಇದೆ.
ಬಳ್ಳಾರಿ ನಗರದ ಹೊಸ ಬಸ್ ನಿಲ್ದಾಣ ಮತ್ತು ಸ್ಟೇಡಿಯಂ ನಡುವೆ ನೂತನ ಬೈಪಾಸ್ ನಿಲ್ದಾಣದ ಪ್ರಸ್ತಾವನೆ ಇದೆ. ಇದಕ್ಕೆ ರೈಲ್ವೆ ವಲಯ ಒಪ್ಪಿಗೆ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಅಮೃತ್ ಭಾರತ್ ಸ್ಟೇಷನ್ ಅಡಿ ಬಳ್ಳಾರಿ ರೈಲು ನಿಲ್ದಾಣವನ್ನು 17 ಕೋಟಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಇನ್ನೂ ಹೆಚ್ಚುವರಿ ಅನುದಾನ ನೀಡಿ, ಇನ್ನೂ 3 ಪ್ಲಾಟ್ ಫಾರ್ಮ್ ನಿರ್ಮಾಣ ಮಾಡಬೇಕು ಎಂಬ ನಿರೀಕ್ಷೆ ಇದೆ.
ಕೊಪ್ಪಳದ ಗಂಗಾವತಿ ಮತ್ತು ಬಳ್ಳಾರಿಯ ದರೋಜಿ ನಡುವೆ 25 ಕಿ. ಮೀ. ಅಂತರವಿದೆ. ಈ ಹೊಸ ರೈಲು ಮಾರ್ಗದ ಸಮೀಕ್ಷೆ ಮುಗಿದಿದೆ. ಕಾಮಗಾರಿಯನ್ನು ಅರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ.












Click it and Unblock the Notifications