ಶ್ರೀರಾಮುಲು ಸೋದರಿ ಪುತ್ರಿಯ ಮದುವೆ ಕಾಂಗ್ರೆಸ್ ಮುಖಂಡನ ಮಗನ ಜೊತೆ ನಿಗದಿ
ಬಳ್ಳಾರಿ, ಅ 8: ಮೊಣಕಾಲ್ಮೂರು ಶಾಸಕ ಮತ್ತು ಬಿಜೆಪಿ ಮುಖಂಡ ಬಿ ಶ್ರೀರಾಮುಲು ಅವರ ಸಹೋದರಿ ಜೆ ಶಾಂತಾ ಅವರ ಪುತ್ರಿಯ ವಿವಾಹ, ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನ ಜೊತೆ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.
ಬಳ್ಳಾರಿಯ ಮಾಜಿ ಸಂಸದೆ ಮತ್ತು ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಯಾಗಿರುವ ಜೆ ಶಾಂತಾ ಅವರ ಪುತ್ರಿ ಪ್ರಸನ್ನ ಲಕ್ಷ್ಮೀ ಅವರ ವಿವಾಹ, ಬಳ್ಳಾರಿಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಅವರ ಪುತ್ರ ಪವನ್ ಕುಮಾರ್ ಜೊತೆ, ಅಕ್ಟೋಬರ್ ಹನ್ನೊಂದರಂದು ನಡೆಯಲಿದೆ.
ಅಶ್ವಯುಜ ಮಾಸ, ನವರಾತ್ರಿಯ ಎರಡನೇ ದಿನ (ಅ 11) ನಗರದ ಅಲ್ಲಂ ಭವನದಲ್ಲಿ ಮದುವೆಗೆ ಮಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರು ನಗರದಲ್ಲಿ 'ಬ್ರಾಂದಿ ಶೀನಾ' ಎಂದೇ ಹೆಸರಾಗಿರುವವರು.

ಮದುವೆಯ ಆಮಂತ್ರಣ ಪತ್ರದಲ್ಲಿ ತಮ್ಮ ಸುಖಾಗಮನ ಬಯಸುವವರು 'ಶ್ರೀರಾಮುಲು ಕುಟುಂಬ ಮತ್ತು ಗಾಲಿ ಜನಾರ್ಧನ ರೆಡ್ಡಿ ಕುಟುಂಬ' ಎಂದು ಬರೆಯಲಾಗಿದೆ.
ಈ ಹಿಂದೆ, ಭಾರತೀಯ ಜನತಾ ಪಕ್ಷದಿಂದಲೇ ಬಳ್ಳಾರಿ ಮಹಾನಗರಪಾಲಿಕೆಯ ಸದಸ್ಯರಾಗಿದ್ದ ಬ್ರಾಂದಿ ಶೀನಾ, ಗಾಲಿ ರೆಡ್ಡಿ ಕುಟುಂಬದ ಜೊತೆಗಿನ ಮನಸ್ತಾಪದಿಂದ ಪಕ್ಷ ತೊರೆದು, ಕಾಂಗ್ರೆಸ್ ಸೇರಿದ್ದರು ಎನ್ನುವ ಮಾಹಿತಿಯಿದೆ.












Click it and Unblock the Notifications