ಬಳ್ಳಾರಿ ವಿಮ್ಸ್ ದುರಂತ: ಸಚಿವ ಸುಧಾಕರ್ ವಿರುದ್ಧ ಸೋಮಶೇಖರ್ ರೆಡ್ಡಿ ಅಸಮಧಾನ
ಬಳ್ಳಾರಿ, ಸೆಪ್ಟೆಂಬರ್ 17: ಆರೋಗ್ಯ ಸಚಿವ ಸುಧಾಕರ್ ಅವರು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ, ವಿಮ್ಸ್ ನಿರ್ದೇಶಕ ಸ್ಥಾನಕ್ಕೆ ಡಾ ಗಂಗಾಧರ ಗೌಡ ಆಯ್ಕೆ ಮಾಡಬೇಡಿ ಎಂದು ಸಚಿವ ಸುಧಾಕರ್ಗೆ ನಾವೆಲ್ಲ ಅನೇಕ ಬಾರಿ ಹೇಳಿದೆವು, ಆದರೂ ಸಚಿವ ಗಂಗಾಧರ ಗೌಡರನ್ನೇ ನೇಮಕ ಮಾಡಿದರು ಎಂದು ಆರೋಗ್ಯ ಸಚಿವರ ವಿರುದ್ಧ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಕೂಡ ಅಸಮಾಧಾನ ಹೊರ ಹಾಕಿದ್ದಾರೆ.
ಬಳ್ಳಾರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ವಿಮ್ಸ್ ದುರಂತಕ್ಕೆ ವಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಗಂಗಾಧರಗೌಡರ ನಿರ್ಲಕ್ಷ್ಯವೇ ಕಾರಣ. ವಿಮ್ಸ್ ಆಸ್ಪತ್ರೆ ಬಹಳ ದೊಡ್ಡ ಆಸ್ಪತ್ರೆ, ನಿರ್ದೇಶಕರಾದವರು ಪ್ರತಿದಿನ ರೌಂಡ್ಸ್ ಹಾಕಬೇಕು, ಪ್ರತಿ ದಿನ ಐದು ಸಾವಿರ ರೋಗಿಗಳು ಬರುತ್ತಾರೆ. ಇಲ್ಲಿನ ವ್ಯವಸ್ಥೆಗಳನ್ನು ತಿಳಿದುಕೊಳ್ಳಬೇಕಿತ್ತು. ಇನ್ನು ಮುಂದಿನ ದಿನಗಳಲ್ಲಾದರೂ ಅವರು ಇದನ್ನೆಲ್ಲಾ ಅರಿತು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಬಳ್ಳಾರಿ ವಿಮ್ಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ
ಗಂಗಾಧರ ಗೌಡರನ್ನು ವಿಮ್ಸ್ ನಿರ್ದೇಶಕರನ್ನು ನೇಮಕಮಾಡುವುದು ಬೇಡ, ಅವರು ಉಪನ್ಯಾಸಕರಾಗಿ ಕೆಲಸ ಮಾಡಿದವರು, ಆಡಳಿತದ ಬಗ್ಗೆ ಅನುಭವ ಇಲ್ಲ ಎಂದು ಹೇಳಿದ್ದೆವು. ಆದರೆ ಸಚಿವರು ಇವರು ಪಾರದರ್ಶಕವಾಗಿ ಕೆಲಸ ಮಾಡುತ್ತಾರೆಂದು ಹೇಳಿ ಇವರನ್ನು ನೇಮಕ ಮಾಡಿದ್ದಾರೆ. ಇವರಿಗಿಂತ ಒಳ್ಳೆಯ ವೈದ್ಯರು ಅನುಭವ ಇರುವ ವೈದ್ಯರು ಇದ್ದಾರೆ ಎಂದು ನಾವು ಮೊದಲೇ ಹೇಳಿದ್ದೆವು. ಆದರೆ, ತಮ್ಮ ಮಾತು ಕೇಳಲಿಲ್ಲ ಎಂದು ಹೇಳುವ ಮೂಲಕ ತಾವು ಸೂಚಿಸುವ ವೈದ್ಯರನ್ನು ನಿರ್ದೇಶಕರಾಗಿ ಮಾಡಿಲ್ಲ ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಘಟನೆ ನಡೆದ ನಂತರ ನಿರ್ದೇಶಕರ ಬದಲಾವಣೆ ಮಾಡಬೇಕೆಂದು ಸಿಎಂಗೆ ಮನವಿ ಮಾಡುತ್ತೇವೆ, ಅವರನ್ನು ಬದಲಾವಣೆ ಮಾಡಿದರೆ ಒಳ್ಳೆಯದು. ಒಳ್ಳೆಯ ಆಡಳಿತಗಾರರು ಅಗತ್ಯವಿದೆ. ಈ ದುರಂತಕ್ಕೆ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ನೇರ ಕಾರಣ ಎಂದು ಹೇಳಲಾಗಲ್ಲ, ಆದರೆ ಅವರ ನಿರ್ಲಕ್ಷ್ಯದಿಂದ ಇದೆಲ್ಲಾ ಆಗಿದೆ. ಸಿಬ್ಬಂದಿಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದರಲ್ಲಿ ಅವರು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಸಚಿವ ಶ್ರೀರಾಮುಲು ಮತ್ತು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಮಾಡಿದ್ದರಿಂದ ಮೃತರಿಗೆ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಇದನ್ನು ಸರಕಾರಿ ಪ್ರಾಯೋಜಿತ ಸಾವುಗಳು ಎಂದು ಹೇಳುವುದು ಸರಿಯಲ್ಲ, ನಿತ್ಯವು ಹಲವು ಜನರು ತೀರಿಕೊಂಡು ಹೋಗುತ್ತಾರೆ, ಅದಕ್ಕೆ ಸರಕಾರವೇ ಕಾರಣವೆಂದು ಹೇಳುವುದು ಸರಿಯಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.