ಗವಿಯಪ್ಪ ವಿರುದ್ಧ ಧ್ವನಿ ಎತ್ತಿದ ಬಿಜೆಪಿ ಟಿಕೇಟ್ ಆಕಾಂಕ್ಷಿಗಳು
ಬಳ್ಳಾರಿ, ಏಪ್ರಿಲ್ 14: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಹೊಸಪೇಟೆ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಅವರಿಗೆ ಬಿಜೆಪಿಯಲ್ಲಿ ಎದುರಾಳಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಟಿಕೇಟ್ ನಿಮಗೇ, ನೀವೇ ಸ್ಪರ್ಧಿಸುವುದು ಎಂದು ಹೇಳಿದ್ದರೂ, ಟಿಕೇಟ್ ಪಡೆಯಲು ಅನೇಕರು ಹರಸಾಹಸಪಡುತ್ತಿದ್ದಾರೆ.
ಧ್ವನಿ ಎತ್ತಿದ ಟಿಕೇಟ್ ಆಕಾಂಕ್ಷಿಗಳು
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅದಲು - ಬದಲು ಆಗಿದ್ದರೂ, ಹಳೆಯ ಮತ್ತು ವಲಸಿಗರ ಸಮಸ್ಯೆ ಶುರುವಾಗಿದೆ. ಅಷ್ಟೇ ಅಲ್ಲ, ಎಚ್.ಆರ್. ಗವಿಯಪ್ಪ ಅವರಿಗೆ ಇನ್ನೂ ಟಿಕೇಟ್ ಖಾತ್ರಿ ಆಗಿಲ್ಲ. ನಾವೂ ಸ್ಪರ್ಧೆಯಲ್ಲಿದ್ದೇವೆ ಎಂದು ಡಾ. ಕೆ.ಆರ್. ಕವಿರಾಜ್ ಅರಸ್, ಪತ್ತಿಕೊಂಡ ಕಿಶೋರ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ, ಧ್ವನಿ ಎತ್ತಿದ್ದಾರೆ.

ಅಷ್ಟೇ ಅಲ್ಲ, ಈಗ ಪಕ್ಷಕ್ಕೆ ಬಂದವರಿಗೆ ಟಿಕೇಟ್ ನೀಡಿದಲ್ಲಿ, ದಶಕಗಳಿಂದ ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕರ ಪಾಡೇನು? ನಮ್ಮೊಂದಿಗೆ ರಾಣಿ ಸಂಯುಕ್ತ ಅವರೂ ಮಹಿಳಾ ಕೋಟಾದಡಿ ಟಿಕೇಟ್ ಆಕಾಂಕ್ಷಿಯಾಗಿ ಸಾಕಷ್ಟು ಜನಪರ ಜನಪ್ರಿಯ ಕೆಲಸಗಳನ್ನು ವರ್ಷಗಟ್ಟಲೆ ನಡೆಸಿದ್ದಾರೆ. ಜನರೊಂದಿಗೆ ಸಕ್ರಿಯವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗವಿಯಪ್ಪ ಸಕ್ರೀಯವಾಗಿಲ್ಲ...
2004 ರ ಚುನಾವಣೆಯಲ್ಲಿ ಎಚ್.ಆರ್.ಗವಿಯಪ್ಪ ಹೊಸಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ, 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋಲನುಭವಿಸಿದ್ದಾರೆ. ಸೋತ ನಂತರ ಗವಿಯಪ್ಪ, ಈ ಕ್ಷೇತ್ರದಲ್ಲಿ ಸಕ್ರೀಯವಾಗಿಲ್ಲ.
ಸೋಲು - ಗೆಲುವುಗಳ ಲೆಕ್ಕಾಚಾರ ಹಾಕದೇ ಪಕ್ಷ ಇವರಿಗೆ ಮಣೆಹಾಕಿದ್ದು ತಪ್ಪು. ನಾವುಗಳೂ ಟಿಕೇಟ್ ಆಕಾಂಕ್ಷಿಗಳು. ನಾವು, ಟಿಕೇಟ್ ಗಾಗಿ ಹೋರಾಟ ನಡೆಸುತ್ತೇವೆ. ಪಕ್ಷದ ಮುಖಂಡರಲ್ಲಿ ಅಹವಾಲು ಸಲ್ಲಿಸುತ್ತೇವೆ. ನಮ್ಮ ಧ್ವನಿಗೆ ಮನ್ನಣೆ ನೀಡದೇ ಇದ್ದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬೆಂಬಲಿಗರ ಸಭೆ ನಡೆಸಲಿದ್ದೇವೆ.
ನಮ್ಮ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿಗೆ ನಷ್ಟವಾಗಲಿದೆ ಎನ್ನುವ ಅಂಶವನ್ನೂ ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications