ಸಿದ್ದರಾಮಯ್ಯರ ಹೀನಾಯ ಸ್ಥಿತಿ ಯಾವ ರಾಜಕಾರಣಿಗೂ ಬೇಡ: ಈಶ್ವರಪ್ಪ
Recommended Video

ಬಳ್ಳಾರಿ, ಅಕ್ಟೋಬರ್ 26: ತಾವೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಸಿದ್ದರಾಮಯ್ಯ ಅವರ ಈಗಿನ ಪರಿಸ್ಥಿತಿ ಯಾವ ರಾಜಕಾರಣಿಗೂ ಬರಬಾರದು ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಬಹುಮತ ಬರಲಿಲ್ಲ ಎಂದರೆ ಯಾರ ಜತೆಗೂ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದ ಜೆಡಿಎಸ್ನದ್ದು ಉತ್ತರನ ಪೌರುಷ. ಅವರೊಂದಿಗೆ ಕೈಜೋಡಿಸಿದ ಕಾಂಗ್ರೆಸ್ಗೆ ಎದುರಾಗಿರುವ ಪರಿಸ್ಥಿತಿ ಬೇರೆ ಯಾವ ಪಕ್ಷಕ್ಕೂ ಬರಬಾರದು ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ವ್ಯಂಗ್ಯವಾಗಿ ಹೇಳಿದರು.
ಜೆಡಿಎಸ್ಅನ್ನು ಬಿಜೆಪಿಯ ಬಿ ಟೀಮ್ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಕುಮಾರಸ್ವಾಮಿ ಅವರ ಅಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಅವರೇ ಟೀಕಿಸಿದ್ದರು. ಸ್ವಾತಂತ್ರ್ಯ ಬಂದಾಗಿನಿಂದಲೂ ಇಂತಹ ಕೆಟ್ಟ ಮುಖ್ಯಮಂತ್ರಿಯನ್ನು ನೋಡಿಲ್ಲ ಎಂದು ದೇವಗೌಡರು ಸಿದ್ದರಾಮಯ್ಯ ಅವರ ಮೇಲೆ ಹರಿಹಾಯ್ದಿದ್ದರು. ಸ್ವತಃ ದೇವೇಗೌಡರ ಪತ್ನಿ ಚನ್ನಮ್ಮ ಅವರೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದರು.
ಈಗ ಅವರ ಜತೆಯೇ ಕೈಜೋಡಿಸಿರುವ ಸಿದ್ದರಾಮಯ್ಯ ಅವರನ್ನು ಈಗ ಕೇಳುವವರೇ ಇಲ್ಲ. ಅವರ ಸ್ಥಿತಿ ಯಾವ ರಾಜಕಾರಣಿಗೂ ಬರಬಾರದು ಎಂದರು.

ಪೇಪರ್ ಹುಲಿ ಗುಂಡೂರಾವ್
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೇವಲ ಪೇಪರ್ ಹುಲಿ. ಅವರು ನೀಡುವ ಎಚ್ಚರಿಕೆ, ಆದೇಶಗಳನ್ನು ಅವರ ಪಕ್ಷದ ಯಾರೂ ಮೂಸಿ ಕೂಡ ನೋಡುವುದಿಲ್ಲ. ಅವರನ್ನು ನೋಡಿದರೆ ಯಾರಿಗೂ ಭಯವಿಲ್ಲ. ಅವರನ್ನು ಲೆಕ್ಕಕ್ಕೂ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಯಾರು ಬಂದರೂ ರಾಜ್ಯದಲ್ಲಿ ಕಾಂಗ್ರೆಸ್ ಉಳಿಯುವ ಸ್ಥಿತಿಯಲ್ಲಿ ಇಲ್ಲ. ಇಲ್ಲಿ ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಸರ್ಕಾರ ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರ ಆಟ ಏನೂ ನಡೆಯುತ್ತಿಲ್ಲ ಎಂದು ಲೇವಡಿ ಮಾಡಿದರು.

ಡಿಕೆಶಿ ನುಡಿದಿದ್ದು ಸತ್ಯ
ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಪ್ರಯತ್ನದ ಬಗ್ಗೆ ಡಿಕೆ ಶಿವಕುಮಾರ್ ಕ್ಷಮೆ ಕೋರಿರುವ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಡಿಕೆ ಶಿವಕುಮಾರ್ ಅವರ ಮಾತು ಸತ್ಯ. ಅವರು ಪ್ರಾಮಾಣಿಕವಾಗಿ ಕ್ಷಮೆ ಕೋರಿದ್ದಾರೆ. ರಾಜ್ಯ ಕಾಂಗ್ರೆಸ್ನಲ್ಲಿ ಅನೇಕ ಅತೃಪ್ತ ಶಾಸಕರಿದ್ದಾರೆ. ಅವರು ಪಕ್ಷ ತ್ಯಜಿಸಲು ಚರ್ಚೆ ನಡೆಸಿದ್ದಾರೆ ಎಂದರು.

ಹಗುರವಾಗಿ ಮಾತಾಡ್ಬೇಡಿ
ಸಿದ್ದರಾಮಯ್ಯ ಅವರು ಶೋಭಾ ಕರಂದ್ಲಾಜೆ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ನಿಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಹೀಗೆಯೇ ಮಾತನಾಡುತ್ತೇವೆಯೇ? ಸಿದ್ದರಾಮಯ್ಯ ಅವರೇ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅವರು ಹೀಗೆಯೇ ಮಾನಾಡುತ್ತಿದ್ದರೆ, ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೆರಡು ಸ್ಥಾನಗಳಿಗೆ ಬರಲಿದೆ. ವ್ಯಕ್ತಿ ಆಧಾರಿತವಾಗಿ ಮಾತನಾಡುತ್ತಾರೆ. ಶ್ರೀರಾಮುಲು, ಶೋಭಾ ಕರಂದ್ಲಾಜೆ ಬಗ್ಗೆ ಕೀಳಾಗಿ ಮಾತನಾಡಿರುವ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಸಂಸ್ಕೃತಿಗೆ ತಕ್ಕ ಪಾಠ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ಶನಿ, ರಾಹು, ಕೇತು ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಸಂಸ್ಕೃತಿಯನ್ನು ನೋಡಿ ಜನರು ಕಾಂಗ್ರೆಸ್ ಅನ್ನು ಸೋಲಿಸಿದ್ದಾರೆ. ಮನಸಿಗೆ ಬಂದಂತೆ ಹೇಳಿಕೆ ನೀಡುವ ಸಿದ್ದರಾಮಯ್ಯ ಅವರಂತಹ ಭಂಡ ರಾಜಕಾರಣಿಯನ್ನು ನಾನು ನೋಡಿಲ್ಲ ಎಂದು ಟೀಕಿಸಿದರು.












Click it and Unblock the Notifications