80 ಸಾವಿರ ರೂ ಲಂಚಕ್ಕೆ ಬೇಡಿಕೆ: ಬಳ್ಳಾರಿ ಪಾಲಿಕೆ ಸಿಬ್ಬಂದಿ ಲೋಕಾಯುಕ್ತರ ಬಲೆಗೆ
ಬಳ್ಳಾರಿ, ನವೆಂಬರ್17: ಫಾರಂ 2 ಮತ್ತು ಫಾರಂ 3 ನೀಡಲು 80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ವಲಯ ಕಚೇರಿ ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಮೇಲೆ ಬಳ್ಳಾರಿ ಮಹಾನಗರ ಪಾಲಿಕೆಯ ಸಿಬ್ಬಂದಿಗಳಾದ ಫಸ್ಟ್ ಗ್ರೇಡ್ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್ ಹಾಗೂ ಕೇಸ್ ವರ್ಕರ್ ಚಿನ್ನಯ್ಯ ಎನ್ನುವವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಬ್ದುಲ್ ಖಾದರ್ ಹಾಗೂ ಚಿನ್ನಯ್ಯ ಬಳ್ಳಾರಿ ಜಿಲ್ಲೆಯ ನಿವಾಸಿ ಕಿರಣ್ ಎನ್ನುವವರಿಗೆ ಮನೆಯ ಖಾತೆ ಮಾಡಿ ಕೊಡಲು ಫಾರಂ 2 ಮತ್ತು 3 ನೀಡದೆ ಸತಾಯಿಸಿದ್ದರಲ್ಲದೇ, ಖಾತೆ ಮಾಡಿ ಕೊಡಲು 80 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಕಿರಣ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುಧವಾರ ಮಧ್ಯವರ್ತಿಗಳ ಮೂಲಕ ಲಂಚದ ಹಣ 80 ಸಾವಿರ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ವಿಜಯನಗರದಲ್ಲಿ ಭೀಕರ ಅಪಘಾತ: ಕಾರು ಚಾಲಕ ಸ್ಥಳದಲ್ಲೇ ಸಾವು
ವಿಜಯನಗರ: ಸಾರಿಗೆ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ, ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸಪೇಟೆ ತಾಲೂಕಿನ ಕೊಂಡನಾಯಕನಹಳ್ಳಿ ಬಳಿ ನಡೆದಿದೆ. ಅಬ್ದುಲ್ ಮದೀನ್ ಮೃತ ಕಾರು ಚಾಲಕ ಎಂದು ಗುರುತಿಸಲಾಗಿದೆ.
ಹರಪನಹಳ್ಳಿಯಿಂದ ಹೈದ್ರಾಬಾದ್ಗೆ ಹೊರಟಿದ್ದ ಸಾರಿಗೆ ಬಸ್, ಕಮಲಾಪುರದಿಂದ ಹೊಸಪೇಟೆಗೆ ತೆರಳುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾರಿಗೆ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಅಪಘಾತ ಸ್ಥಳಕ್ಕೆ ಹೊಸಪೇಟೆಯ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ಕಾರು ಚಾಲಕನ ದೇಹವನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹೊರ ತೆಗೆದ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಹೊಸಪೇಟೆಯ ಸಂಚಾರಿ ಪೊಲೀಸರು ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications