ಸರ್ಕಾರಿ ಶಾಲೆಗಳಲ್ಲಿ ಕರಾಟೆ ತರಬೇತಿ ಪ್ರಾರಂಭಿಸಲು ಶಿಕ್ಷಣ ಸಚಿವರಿಗೆ ಮನವಿ
ಬಳ್ಳಾರಿ, ಜನವರಿ 22: ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕರಾಟೆ ತರಬೇತಿ ಆರಂಭಿಸಬೇಕೆಂದು ಹಿರಿಯ ಕರಾಟೆ ತರಬೇತುದಾರರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಇಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಭೇಟಿಯಾದ ಕರಾಟೆ ಹಿರಿಯ ತರಬೇತುದಾರರ ನಿಯೋಗ, ಪ್ರೌಢ ಶಾಲೆಗಳ ವಿದ್ಯಾರ್ಥಿನಿಯರಲ್ಲಿ ಆತ್ಮರಕ್ಷಣೆ ಹೆಚ್ಚಿಸುವ ಸಲುವಾಗಿ ಈ ಕರಾಟೆ ತರಬೇತಿ ಮುಖ್ಯವಾಗಿದೆ ಎಂದರು.
ಆದ್ದರಿಂದ ಕರಾಟೆ ತರಬೇತಿ ಪುನರಾರಂಭಿಸಬೇಕೆಂದು ಸಚಿವರಲ್ಲಿ ಕೋರಿದ್ದಾರೆ. ಹಿರಿಯ ತರಬೇತುದಾರರ ಮನವಿಯನ್ನು ಆಲಿಸಿದ ಸಚಿವ ಸುರೇಶ್ ಕುಮಾರ್, ಕರಾಟೆ ತರಬೇತಿ ಪುನರಾರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಬಳ್ಳಾರಿಯ ಹಿರಿಯ ತರಬೇತುದಾರರಾದ ಕಟ್ಟೇಸ್ವಾಮಿ, ಸುಭಾಷ್ ಚಂದ್ರ, ಕೊಪ್ಪಳದ ಹಿರಿಯ ತರಬೇತುದಾರ ಮೌನೇಶ ವಡ್ಡಟಿ, ವಿಜಯಪುರದ ಹಿರಿಯ ತರಬೇತುದಾರ ಶಿವಕುಮಾರ ಶಾರದಳ್ಳಿ ಸೇರಿದಂತೆ ಅನೇಕರು ಸಚಿವರಿಗೆ ಈ ಮನವಿ ಮಾಡಿದ್ದಾರೆ.












Click it and Unblock the Notifications