ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ನಿಯೋಗ: ಅಖಂಡ ಬಳ್ಳಾರಿಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮನವಿ
ಬಳ್ಳಾರಿ, ಮಾರ್ಚ್ 25: ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಅವರನ್ನು ನವದೆಹಲಿಯ ಸಂಸತ್ ಭವನದಲ್ಲಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಬೂಡಾ ಅಧ್ಯಕ್ಷ ದಮ್ಮೂರ್ ಶೇಖರ್ ಅವರು ಭೇಟಿ ಮಾಡಿ ಮಾಡಿದರು.
ಬಳ್ಳಾರಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಮುಖ ಸ್ಥಳಗಳಾದ ಬಳ್ಳಾರಿ ಕೋಟೆ, ಮಿಂಚೇರಿ ಗುಡ್ಡ, ಸಂಗನಕಲ್ಲು ಬೆಟ್ಟ, ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಹಾಗೂ ಡಾ.ರಾಜಕುಮಾರ್ ಉದ್ಯಾನವನಗಳನ್ನು ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದ್ದು, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂಸದರ ನೇತೃತ್ವದ ನಿಯೋಗದ ಪತ್ರದಲ್ಲಿ, "ಅಖಂಡ ಬಳ್ಳಾರಿ ಜಿಲ್ಲೆಯನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಾಗಿ ವಿಭಜಿಸುವುದರಿಂದ ಬಳ್ಳಾರಿಯಲ್ಲಿ ಪ್ರವಾಸಿ ಪ್ರಾಮುಖ್ಯತೆಯ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಅಗತ್ಯವು ಈಗ ಅಪಾರ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಮೂಲಕ ಹಿಂದಿನ ವಿಜಯನಗರ ಸಾಮ್ರಾಜ್ಯದ ಪ್ರಮುಖ ಪುರಾತತ್ವ ಸ್ಥಳಗಳು ಈಗ ಹೊಸದಾಗಿ ರಚಿಸಲಾದ ವಿಜಯನಗರದ ಜಿಲ್ಲೆಯಲ್ಲಿ ಹಂಪಿ ಇದೆ.'

ಬಳ್ಳಾರಿ ಮತ್ತು ಸುತ್ತಮುತ್ತಲಿನ ಉಳಿದ ಪ್ರವಾಸಿ ಸ್ಥಳಗಳಿಗೆ ರಸ್ತೆ ಸಂಪರ್ಕವನ್ನು ಮತ್ತು ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಮೂಲಕ, ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಬಹುದು. ಪ್ರವಾಸಿಗರನ್ನು ಆಕರ್ಷಿಸಲು ನೂತನ ತಂತ್ರಜ್ಞಾನ ಬಳಸಿಕೊಂಡು ಮತ್ತು ಜಿಲ್ಲೆಯಲ್ಲಿ ಹೊಸ ಪ್ರವಾಸಿ ತಾಣವಾಗಿ ರಚಿಸುವ ಮೂಲಕ ನವೀನ ಮತ್ತು ಆಕರ್ಷಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.
ಬಳ್ಳಾರಿ ನಗರದ ಐತಿಹಾಸಿಕ ಮತ್ತು ಸಂರಕ್ಷಿತ ಸ್ಮಾರಕವಾದ ಬಳ್ಳಾರಿ ಗುಡ್ಡ, ಕೋಟೆಗೆ (ಫೋರ್ಟ್ ಹಿಲ್) ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ರೋಪ್ ವೇ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಹಾಗೂ ಸಂಗನಕಲ್ಲು ಗುಡ್ಡದ ನಿರ್ವಹಣೆ ಮಾಡಲು ಆಗುವುದಿಲ್ಲ ಎಂದು ರಾಜ್ಯ ಪುರಾತತ್ವ ಇಲಾಖೆ ಕೇಂದ್ರ ಪುರಾತತ್ವ ಇಲಾಖೆಗೆ ಪತ್ರ ಬರೆದಿದೆ.
ಪ್ರವಾಸೋದ್ಯಮ ಇಲಾಖೆ ಅನುದಾನ ನೀಡಿದ್ದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ನಿರ್ವಹಣೆ ಮಾಡುವ ಬಗ್ಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದೆ. ಅದರಂತೆ ಈಗಾಗಲೇ ಹಂಪಿ ವಲಯದ ಪುರಾತತ್ವ ಇಲಾಖೆಯು ಕೇಂದ್ರ ಪುರಾತತ್ವ ಇಲಾಖೆಗೆ ಈ ಯೋಜನೆಗಳಿಗೆ ಬೇಕಾದ ಅನುಮತಿ ಹಾಗೂ ನಿರ್ದೇಶನಗಳನ್ನು ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಳ್ಳಾರಿ ಗುಡ್ಡೆಕ್ಕೆ ರೋಪ್ ವೇ ಅಥವಾ ಕೇಬಲ್ ಕಾರ್ ನಿರ್ಮಿಸುವುದರಿಂದ ಹೆಚ್ಚಿನ ಪ್ರವಾಸಿಗರು ಬೆಟ್ಟಕ್ಕೆ ಭೇಟಿ ನೀಡಿ ಕೋಟೆಯ ಆಕರ್ಷಕ ಮನಮೋಹಕವಾದ ಪ್ರಕೃತಿಯನ್ನು ಸವಿಯಬಹುದು. ಈ ಬೆಟ್ಟ ಏರಲು ವಯಸ್ಕರ ಪ್ರವಾಸಿಗರಿಗೆ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ರೋಪ್ ವೇ ನಿರ್ಮಾಣ ಮಾಡಲು ಇದಕ್ಕೆ ಬೇಕಾದ ಎಲ್ಲ ಅನುಮತಿಯನ್ನು ಕೇಂದ್ರ ಪುರಾತತ್ವ ಇಲಾಖೆಯಿಂದ ನೀಡಬೇಕು ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.












Click it and Unblock the Notifications