ಡೇಂಜರ್ ಸಿಟಿಯಾದ ಬಳ್ಳಾರಿ: ಜನವಸತಿಗೆ ಯೋಗ್ಯವಲ್ಲ
ಬಳ್ಳಾರಿ, ಫೆಬ್ರವರಿ 12: ಗಣಿ ನಾಡು ಅಂತಾನೇ ಹೆಸರು ಪಡೆದಿರುವ ಬಳ್ಳಾರಿ ಈಗ ಹೆಚ್ಚಿನ ವಾಯುಮಾಲಿನ್ಯದಿಂದ ಡೇಂಜರ್ ಸಿಟಿ, ಕಿಲ್ಲರ್ ಸಿಟಿ ಎಂಬ ಹೆಸರು ತೆಗೆದುಕೊಳ್ಳುತ್ತಿದೆ.
ಹೌದು. ದೇಶದ ಜನರೇ ಬೆಚ್ಚಿಬೀಳುವ ಸಂಗತಿ ಒಂದು ಹೊರ ಬಿದ್ದಿದೆ. ಹೌದು, ಬಳ್ಳಾರಿಯಲ್ಲಿ ವಾಯು ಮಾಲಿನ್ಯದ ಪ್ರಮಾಣವನ್ನು ಕೇಳಿದರೆ ಎಲ್ಲರೂ ಬೆಚ್ಚಿ ಬೀಳುವುದಂತು ಸತ್ಯ. ಯಾಕೆಂದರೆ ವಾಯು ಮಾಲಿನ್ಯಕ್ಕೆ ಹೆಸರಾಗಿದ್ದ ದೇಶದ ರಾಜಧಾನಿ ದೆಹಲಿಗಿಂತ ಮೂರು ಪಟ್ಟು ಹೆಚ್ಚು ಬಳ್ಳಾರಿಯಲ್ಲಿ ದಾಖಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕೆಲ ದಿನಗಳು 500 ರಿಂದ 999 ರ ವರಗೆ ಮಾಲಿನ್ಯ ಪ್ರಮಾಣ ದಾಖಲಾಗಿತ್ತು. ಆದರೆ ಈಗ ಬಳ್ಳಾರಿಯಲ್ಲಿ 1398 ರಷ್ಟು ಮಾಲಿನ್ಯ ಪ್ರಮಾಣ ದಾಖಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುವ ಪ್ರಕಾರ ವಾಯು ಮಾಲಿನ್ಯ 100 ರಷ್ಟು ಇದ್ದರೆ ಮಾತ್ರ ಉಸಿರಾಡಲು ಯೋಗ್ಯವಾದ ವಾತಾವರಣ.

ಉಸಿರಾಡಲು ಯೋಗ್ಯವಾದ ಗಾಳಿಯಿಲ್ಲ
ಆದರೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ಇದ್ದರೆ ಅದು ಉಸಿರಾಡಲು ಯೋಗ್ಯವಾದ ಗಾಳಿ ಅಲ್ಲವಂತೆ. ಇನ್ನು ದೆಹಲಿಯಲ್ಲಿ 500 ಗಡಿ ದಾಟಿದರೆ ಅಲ್ಲಿನ ಸರ್ಕಾರ, ಶಾಲಾ-ಕಾಲೇಜುಗಳಿಗೆ ರಜೆ ನೀಡಿತ್ತು. ಬಳ್ಳಾರಿಯ ಇಷ್ಟೊಂದು ಪ್ರಮಾಣದ ವಾಯು ಮಾಲಿನ್ಯ ಇಲ್ಲಿನ ಜನರಿಗೆ ಗೊತ್ತೇ ಇಲ್ಲ.

ಆಘಾತಕಾರಿ ಅಂಶ ಬೆಳಕಿಗೆ
ಈ ಆಘಾತಕಾರಿ ಅಂಶ ಹೊರ ಬೀಳಲು ಕಾರಣ ಬಳ್ಳಾರಿಯ ನಿವಾಸಿ ಶಶಿ ಎಂಬುವವರು. ವೃತ್ತಿಯಲ್ಲಿ ಇಂಜಿನಿಯರ್ ಆದ ಇವರು ಮಾಲಿನ್ಯ ನಿಯಂತ್ರಣದ ಬಗ್ಗೆ ಹೆಚ್ಚಿನ ಒಲವು ತೋರಿದ್ದಾರೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅವರಿಗೆ ದುಂಬಾಲು ಬಿದ್ದು ಬಳ್ಳಾರಿಯ ಕೆಲ ಭಾಗದಲ್ಲಿ ವಾಯು ಮಾಲಿನ್ಯ ಪರೀಕ್ಷೆ ಮಾಡಿಸಿದ್ದಾರೆ.

ಬಳ್ಳಾರಿ ಕೇಂದ್ರ ಭಾಗದಲ್ಲಿ ಹೆಚ್ಚಿನ ಮಾಲಿನ್ಯ
ಆಗ ಬಳ್ಳಾರಿಯ ಈ ಆಘಾತಕಾರಿ ಅಂಶ ಬಹಿರಂಗವಾಗದೆ. ಬಳ್ಳಾರಿಯ ದುರ್ಗಾದೇವಿ ದೇವಸ್ಥಾನದ ಬಳಿ 250 ಗಡಿ ದಾಟಿದರೆ, ಎಸ್ಪಿ ಸರ್ಕಲ್ ಬಳಿ 300 ರಷ್ಟು ದಾಖಲಾಗಿದೆ. ಆದರೆ ಬಳ್ಳಾರಿ ಕೇಂದ್ರ ಭಾಗದಂತೆ ಇರುವ ಮಿಲ್ಲರ್ ಸರ್ಕಲ್ ಬಳಿ 1398 ರಷ್ಟು ಮಾಲಿನ್ಯ ಇರುವ ಸಂಗತಿ ಬಹಿರಂಗವಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿಯೂ ಈ ಪ್ರಮಾಣದ ಮಾಲಿನ್ಯ ಇಲ್ಲ.

ಇಷ್ಟೊಂದು ಪ್ರಮಾಣದಲ್ಲಿ ಮಾಲಿನ್ಯಕ್ಕೆ ಕಾರಣ
ಇನ್ನು ಇಷ್ಟೊಂದು ಪ್ರಮಾಣದಲ್ಲಿ ಮಾಲಿನ್ಯ ಉಂಟಾಗಲು ಕಾರಣ, ಇಲ್ಲಿನ ಹದಗೆಟ್ಟ ರಸ್ತೆ ದೂಳು, ಅವಧಿ ಮುಗಿದಿರುವ ವಾಹನಗಳ ಚಾಲನೆ ಕಾರಣ. ಮಹಾನಗರ ಪಾಲಿಕೆ ಮಾಲಿನ್ಯ ನಿಯಂತ್ರಣ ತಡೆಯಲು ಸಾಕಷ್ಟು ಹಣ ವೆಚ್ಚ ಮಾಡುತ್ತದೆ. ಆದರೆ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಂದ ಈಗ ಬಳ್ಳಾರಿ ನಗರದ ಈ ದುಸ್ಥಿತಿಗೆ ಬಂದು ತಲುಪಿದೆ.












Click it and Unblock the Notifications