ಎಚ್ ಡಿಕೆ ಬಜೆಟ್: ಬಾಗಲಕೋಟೆ ಜಿಲ್ಲೆಗೆ ಶೂನ್ಯ ಕೊಡುಗೆ
Recommended Video

ಬಾಗಲಕೋಟೆ, ಜುಲೈ.05: ರಾಜ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ದೊರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಇಂದಿನ 2 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಬಾಗಲಕೋಟೆ ಜಿಲ್ಲೆಗೆ ಬಹುತೇಕ ಕಹಿಯಾಗಿದೆ.
ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ನಲ್ಲಿ ಬಾಗಲಕೋಟೆಗೆ ಶೂನ್ಯ ಕೊಡುಗೆ. ಜಿಲ್ಲೆಗೆ ಐಟಿ ಪಾರ್ಕ್, ಬಾಗಲಕೋಟೆ-ಕುಡಚಿ ರೈಲುಮಾರ್ಗಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಬಗ್ಗೆ ಮತ್ತು ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಪರಿಹಾರ ಒದಗಿಸದೇ ಇರುವುದು, ಈಗಾಗಲೇ ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಲಲಿತ ಕಲಾ ಮಹಾವಿದ್ಯಾಲಯ ಘೋಷಣೆಯಾದರೂ ಕಾಮಗಾರಿ ಬಗ್ಗೆ ಪ್ರಸ್ತಾಪವಾಗಲಿಲ್ಲ.
ಬಾಗಲಕೋಟೆ ಜಿಲ್ಲೆಯ ಮಹತ್ವಕಾಂಕ್ಷೆ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದಾಗಿ ಮಾತ್ರ ಹೇಳಿರುವ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಪ್ರವಾಹ ಬಂದಾಗ ಎಷ್ಟೋ ಕುಟುಂಬಗಳು ತಗಡಿನ ಶೆಡ್ ನಲ್ಲಿ ವಾಸ ಮಾಡುತ್ತಿದ್ದಾರೆ. ಅಂತಹವರಿಗೆ ಸೂರು ಕಲ್ಪಿಸುವ ಕುರಿತು ಪ್ರಸ್ತಾಪವಾಗಿಲ್ಲ.

ಇನ್ನೂ ಬಾಗಲಕೋಟೆಯಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಸ್ವಾಧೀನವಾಗಲಿರುವ ಸಂತ್ರಸ್ತರ ಪುನರ್ವಸತಿ ಹಾಗೂ ಜಮೀನಿಗೆ ಪರಿಹಾರ ನೀಡುವ ಬಗ್ಗೆ ಸ್ಪಷ್ಟತೆ ಬಜೆಟ್ ನಲ್ಲಿ ಕಂಡುಬರಲಿಲ್ಲ.
ಬಾಗಲಕೋಟೆಯ 527 ಮೀ.ವರೆಗೆ ಸಂಪೂರ್ಣ ಸ್ಥಳಾಂತರ ಮಾಡುವುದಾಗಿ ಹಿಂದಿನ ಸರ್ಕಾರ ಹೇಳಿಕೊಂಡು ಬಂದಿದ್ದವು. ಇದರ ಜತೆಗೆ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಐತಿಹಾಸಿಕ ಸ್ಥಾನವಾಗಿರುವ ಐಹೊಳೆ ಗ್ರಾಮ ಸ್ಥಳಾಂತರ ಬಗ್ಗೆ ಯಾವುದೇ ಮಾತನ್ನು ಇಲ್ಲಿ ಪ್ರಸ್ತಾಪಿಸಿಲ್ಲ.
ಶಾಸಕ ಸಿದ್ದರಾಮಯ್ಯ ಸ್ಪರ್ಧೆ ಮಾಡಿ ಗೆದ್ದಿರುವ ಬಾದಾಮಿ ಪ್ರವಾಸಿ ತಾಣ ಅಭಿವೃದ್ಧಿಯಾಗಲೀ ಅಥವಾ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಹಣವನ್ನು ಕುಮಾರಸ್ವಾಮಿ
ಮೀಸಲಿಟ್ಟಿಲ್ಲ.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಎಷ್ಟು ಹಣ ಈ ಭಾರಿ ಬಜೆಟ್ ನಲ್ಲಿ ಮೀಸಲಿಡಲಾಗುತ್ತದೆ ಎಂದು ಎಲ್ಲರೂ ಕಾತುರದಿಂದ ಜನ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆದರೆ ಇಲ್ಲಿಯೂ ಎಷ್ಟು ಹಣ ಮೀಸಲಿಟ್ಟದ್ದಾರೆ ಎಂಬ ಬಗ್ಗೆ ವಿವರ ಹೇಳದೇ ಕೇವಲ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಕಾಮಗಾರಿ ತ್ವರಿತಗತಿ ಮಾಡುವುದಾಗಿ ಹೇಳಿದ್ದನ್ನು ಬಿಟ್ಟರೆ ಐದು ವರ್ಷದಲ್ಲಿ ಯುಕೆಪಿ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿದರು.

ಒಟ್ಟಾರೆ ಬಾಗಲಕೋಟೆಗೆ ಸಮ್ಮಿಶ್ರ ಸರ್ಕಾರದ ಕೊಡುಗೆ ಮಾತ್ರ ಏನೂ ಇಲ್ಲ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ವಿಕಲಚೇತನ ಮುಖಂಡ ಘನಶ್ಯಾಂ ಭಾಂಡಗೆ, ಕುಮಾರಸ್ವಾಮಿಯವರು ವಿಕಲಚೇತನರ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ ಮತ್ತು ರಾಜ್ಯದ ವಿಕಲಚೇತನರ ಸಮೀಕ್ಷೆಗೆ ಅನುದಾನ ಮೀಸಲಿಟ್ಟಿರುವುದು ಶ್ಲಾಘನೀಯ ಎಂದರು.
ಸಂತ್ರಸ್ತರಿಗೆ ಅನ್ಯಾಯ
ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮೈಸೂರ ಭಾಗಕ್ಕೆ ಹೆಚ್ಚು ಸೀಮಿತವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ದೊಡ್ಡ ಯೋಜನೆಯಾದ ಈ ಕಾಮಗಾರಿಗೆ ಪ್ರತಿ ವರ್ಷ ಎಷ್ಟು ಖರ್ಚು ಮಾಡುತ್ತೇವೆ ಎಂದು ಹೇಳಲಿಲ್ಲ.
ಇನ್ನೂ ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರು ಮನೆ , ಜಮೀನು ತ್ಯಾಗ ಮಾಡಿದ್ದಾರೆ ಸಂತ್ರಸ್ತರಿಗೆ ಸೌಲಭ್ಯ, ಪುನರ್ವಸತಿ ಕಲ್ಪಿಸುವ ಬಗ್ಗೆ ಚಕಾರ ಎತ್ತಿಲ್ಲ ಎಂದು ಬಾಗಲಕೋಟೆ ಮುಳಗಡೆ ಸಂತ್ರಸ್ತರ ಹೋರಾಟ ಸಮಿತಿಯ ಮುಖಂಡ ಶರಣಪ್ಪ ಕೆರೂರ ಹೇಳುತ್ತಾರೆ.
ಕುಮಾರಸ್ವಾಮಿಯವರು ರೈತರ 34 ಸಾವಿರಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತಾರೆ. ನುಡಿದಂತೆ ನಡೆದುಕೊಳ್ಳುತ್ತಾರೆ ಎಂಬ ಆಶಯ ಇತ್ತು ಆದರೆ ಕೇವಲ 2 ಲಕ್ಷ ರೂಪಾಯಿ ವರೆಗೆ ಸಾಲ ಮನ್ನಾ ಮಾಡಿ ಸಂಪೂರ್ಣ ಸಾಲ ಮನ್ನಾ ಮಾಡದಿರುವುದು ಬೇಸರ ತಂದಿದೆ ಎಂದರು.












Click it and Unblock the Notifications