Video; ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಬಾಗಲಕೋಟೆ ವಿಶೇಷ ಜಾತ್ರೆ
ಬಾಗಲಕೋಟೆ, ಜೂನ್ 1: ಸಾಮಾನ್ಯವಾಗಿ ಭಕ್ತರು ದೇವರಿಗೆ ಹೂ, ಹಣ್ಣುಗಳನ್ನು ನೈವೇದ್ಯ ಮಾಡಿ ಭಕ್ತಿ ಸಮರ್ಪಿಸುತ್ತಾರೆ. ಆದರೆ ಇಲ್ಲೊಂದು ಕಡೆ ಪೂಜಾರಿಗಳೇ ತಲೆಗೆ ತೆಂಗಿನ ಕಾಯಿಗಳನ್ನು ಒಡೆದುಕೊಳ್ಳುವುದರ ಮೂಲಕ ಭಕ್ತಿಯನ್ನ ಸಮರ್ಪಿಸುತ್ತಾರೆ.
ಇಂತಹ ಅಪರೂಪದ ದೃಶ್ಯ ಕಂಡು ಬಂದದ್ದು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿನ ದಂಡಿನ ದುರ್ಗಾ ದೇವಿ ಜಾತ್ರೆಯಲ್ಲಿ. ಸಾವಿರಾರು ಜನರು ಪಾಲ್ಗೊಳ್ಳುವ ಈ ಜಾತ್ರೆ ಕಳೆದ 28 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.
ಮಾಟ ಮಂತ್ರ ನಿವಾರಣೆಯಾಗುತ್ತೆ ಅಂತ ಮಹಿಳೆಯರಿಗೆ ಚಾಟಿಯಿಂದ ಥಳಿತ
ಈ ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆಯುವುದು ಪೂಜಾರಿಗಳು ತಲೆಗೆ ತೆಂಗಿನಕಾಯಿ ಒಡೆದುಕೊಂಡು ಭಕ್ತಿ ಸಮರ್ಪಿಸುವ ದೃಶ್ಯ. ಇದನ್ನು ನೋಡುವುದು ತುಂಬಾ ರೋಮಾಂಚನಕಾರಿಯಾಗಿದ್ದು, ಭಕ್ತಿಯ ಪರಾಕಷ್ಠೆಗೆ ಭಕ್ತಾದಿಗಳು ಜೈಕಾರ ಹಾಕಿ ಪೂಜಾರಿಗಳಿಗೆ ಪ್ರೋತ್ಸಾಹ ನೀಡುತ್ತಾರೆ.
ಈ ಬಾರಿಯೂ ಕೂಡ ಕಲಾದಗಿ ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದ ಪೂಜಾರಿಗಳಾದ ದಲ್ಲಪ್ಪ ಹಾಗೂ ನಾಗಪ್ಪ ಒಟ್ಟು ಮೂವತ್ತಕ್ಕೂ ಅಧಿಕ ತೆಂಗಿನಕಾಯಿಗಳನ್ನು ತಲೆಗೆ ಒಡೆದುಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಪ್ರತೀವರ್ಷ ಪೂಜಾರಿಗಳು ತಲೆಗೆ ತೆಂಗಿನಕಾಯಿಗಳನ್ನು ಒಡೆದುಕೊಳ್ಳುವುದನ್ನ ನೋಡಲು ಜಿಲ್ಲೆ ಮಾತ್ರವಲ್ಲ, ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.
ಹರಣಶಿಕಾರಿ ಸಮಾಜದ ಬಾಂಧವರ ಆರಾಧ್ಯ ದೈವವಾಗಿರುವ ದಂಡಿನ ದುರ್ಗಾ ದೇವಿಜಾತ್ರೆಯಲ್ಲಿ ಭಾಗಿಯಾಗಿ ಹರಕೆ ಹೊತ್ತರೆ ಬೇಡಿದ ಬೇಡಿಕೆಗಳು ಈಡೇರುತ್ತವೆ ಎನ್ನುವ ಇಲ್ಲಿನ ಜನರ ನಂಬಿಕೆ. ಹೀಗಾಗಿ ಜಾತ್ರೆಯ ಸಂದರ್ಭದಲ್ಲಿ ಪ್ರತೀ ವರ್ಷ ಸಾವಿರಾರು ಭಕ್ತರು ದೇವಿಗೆ ಹರಕೆ ಹೊರುತ್ತಾರೆ.
ಕೊಳ್ಳೇಗಾಲ; ಪವಾಡ ಸೃಷ್ಟಿಯ ಸೀಗಮಾರಮ್ಮನ ನರಬಲಿ ಹಬ್ಬ
ಇನ್ನು ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕಲಾದಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಗುತ್ತದೆ. ಭಕ್ತರು ಪರಸ್ಪರ ಭಂಡಾರ ಎರಚುವ ಮೂಲಕ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕಳೆದ 2 ವರ್ಷ ಸರಳ ಜಾತ್ರೆ; ಇದು 28ನೇ ಜಾತ್ರೆಯಾಗಿದೆ, ಕೋವಿಡ್ ಕಾರಣದಿಂದ ಕಳೆದ 2 ವರ್ಷದ ಜಾತ್ರೆಯನ್ನು ಸರಳವಾಗಿ ನಡೆಸಲಾಗಿತ್ತು. ದಂಡಿನ ದುರ್ಗಮ್ಮ ಗದಗದಲ್ಲಿ ಹುಟ್ಟಿದ್ದಳು, ಮೊದಲು ಅಲ್ಲಿಗೆ ಹೋಗಿ ಜಾತ್ರೆ ನಡೆಸಲಾಗುತ್ತಿತ್ತು. ಈಗ ಇಲ್ಲಿಯೇ ಜಾತ್ರೆ ಮಾಡುತ್ತಾರೆ.
ಪೂಜಾರರಿಗೆ ತಾಯಿ ದುರ್ಗವ್ವ ಮೈಮೇಲೆ ಬರುವುದರಿಂದ ಪೂಜಾರಿಗಳು 25ರಿಂದ 30 ಕಾಯಿಗಳನ್ನು ಒಡೆದುಕೊಳ್ಳುತ್ತಾರೆ. ಇದು ಸಾಮಾನ್ಯ ಜನರಿಂದ ಸಾಧ್ಯವಿಲ್ಲ. ತಾಯಿ ಶಕ್ತಿಯಿಂದ ಮಾತ್ರ ಒಡೆಯಲು ಸಾಧ್ಯ, ಈ ಹಿಂದೆ 40ಕ್ಕೂ ಹೆಚ್ಚು ಕಾಯಿಗಳನ್ನು ಒಡೆದ ದಾಖಲೆಗಳಿವೆ.
ಈ ಜಾತ್ರೆಗೆ ಎಲ್ಲರೂ ಜಾತಿ ಭೇದ ಬಿಟ್ಟು ಸಹಕಾರ ನೀಡುತ್ತಾರೆ. ನಮ್ಮಿಂದಲೇ ಈ ಜಾತ್ರೆ ನಡೆಸಲು ಸಾಧ್ಯವಿಲ್ಲ. ಆಸುಪಾಸಿನ ರೈತರು ಸಾಥ್ ನೀಡುತ್ತಾರೆ. ಸಾವಿರಾರು ಮಂದಿ ಹರಕೆ ಕಟ್ಟಿಕೊಳ್ಳುತ್ತಾರೆ. ಮಕ್ಕಳಿಲ್ಲದವರು ಇಲ್ಲಿಗೆ ಬಂದು ತೊಟ್ಟಿಲು ಕಟ್ಟುತ್ತಾರೆ, ಅಂತಹ ಹರಕೆ ಹೊತ್ತವರು ಮುಂದಿನ ವರ್ಷ ಮಗುವಿನೊಂದಿಗೆ ಬಂದು ಹರಕೆ ತೀರಿಸಿದ ಉದಾಹರಣೆಯಿದೆ ಎಂದು ಸ್ಥಳೀಯರು ಹೇಳಿದರು.