ಬಾದಾಮಿಯಲ್ಲಿ ಮನೆ ಹುಡುಕುತ್ತಿದ್ದಾರೆ ಸಿದ್ದರಾಮಯ್ಯ
ಬಾದಾಮಿ, ಮೇ 26: ಸಿದ್ದರಾಮಯ್ಯ ಅವರ ಕೈಬಿಡದ ಬಾದಾಮಿ ಕ್ಷೇತ್ರದ ಜನರ ಜೊತೆ ಬೆರೆಯಲೆಂದು ಸಿದ್ದರಾಮಯ್ಯ ಅವರು ತಮ್ಮ ವಾಸ್ತವ್ಯವನ್ನು ಬಾದಾಮಿಗೆ ಬದಲಾಯಿಸುವ ತಯಾರಿಯಲ್ಲಿದ್ದಾರೆ.
ತಮ್ಮ ಆಪ್ತರಿಗೆ ಬಾದಾಮಿಯಲ್ಲಿ ಮನೆ ಹುಡುಕುವಂತೆ ಈಗಾಗಲೇ ಸಿದ್ದರಾಮಯ್ಯ ಅವರು ಸೂಚಿಸಿದ್ದು, ಮನೆ ಹುಡುಕುವ ಕಾರ್ಯ ಪ್ರಗತಿಯಲ್ಲಿದೆ.
ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹೇಶ್ ಹೊಸಗೌಡ ಅವರ ಮನೆ ಸೇರಿದಂತೆ ಇನ್ನೂ ಕೆಲವು ಮನೆಗಳನ್ನು ಸಿದ್ದರಾಮಯ್ಯ ಅವರಿಗಾಗಿ ನೋಡಿ ಇಟ್ಟಿದ್ದಾರೆ ಅವರ ಆಪ್ತರು. ಸಕಲ ಸೌಲಭ್ಯ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವ ಕಾರಣ ಮನೆ ಹುಡುಕುವ ಕಾರ್ಯ ತಡವಾಗಿದೆ ಎಂದಿವೆ ಮೂಲಗಳು.

ಚುನಾವಣೆಯಲ್ಲಿ ಗೆದ್ದ ನಂತರ ಈ ವರೆಗೆ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರಕ್ಕೆ ಹೋಗಿಯೇ ಇಲ್ಲ, ಹಾಗಾಗಿ ಜೂನ್ 1ರಂದು ಸಿದ್ದರಾಮಯ್ಯ ಅವರು ಬಾದಾಮಿಗೆ ಹೋಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದು ಅಂದೇ ಮನೆ ಅಂತಿಮ ಆಗಲಿದೆ.
ಹತ್ತಿರದಲ್ಲಿಯೇ ಬಾದಾಮಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದ್ದು, ಜೊತೆಗೆ ಲೋಕಸಭೆ ಚುನಾವಣೆಗಳೂ ಸಹಿತ ಬರುತ್ತಿರುವ ಕಾರಣ ವಿರೋಧಿಗಳ ಟೀಕೆಗೆ ತುತ್ತಾಗಬಾರದು ಎಂಬ ಎಚ್ಚರಿಕೆಯೂ ಹೀಗೆ ಬಾದಾಮಿಗೆ ವಾಸ್ತವ್ಯ ಬದಲಾಯಿಸುವ ಹಿಂದಿದೆ.
ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ವಾಸ್ತವ್ಯ ಹೂಡಿದರೆ ಕ್ಷೇತ್ರದ ಅಭಿವೃದ್ಧಿ ಸುಲಭವಾಗಬಹುದು ಎಂಬ ಆಸೆ ಕ್ಷೇತ್ರದ ಜನರಲ್ಲಿದೆ.












Click it and Unblock the Notifications