ಉಪಚುನಾವಣೆ: ಜಮಖಂಡಿ ಟಿಕೆಟ್ ಘೋಷಣೆ, ಬಿಜೆಪಿಗೆ ಬಂಡಾಯದ ತಲೆನೋವು
ಬೆಂಗಳೂರು, ಅಕ್ಟೋಬರ್ 10: ಜಮಖಂಡಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬಿಜೆಪಿಯಲ್ಲಿ ಬಂಡಾಯ ತಲೆದೋರಿದೆ.
ರಾಜ್ಯದಲ್ಲಿ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ 3 ರಂದು ಚುನಾವಣೆ ನಡೆಯಲಿದೆ. ಇವುಗಳಲ್ಲಿ ಜಮಖಂಡಿ ಕ್ಷೇತ್ರಕ್ಕೆ ಮಾತ್ರ ಸದ್ಯಕ್ಕೆ ಬಿಜೆಪಿ ಟಿಕೆಟ್ ಘೋಷಿಸಿದೆ ಇನ್ನುಳಿದ ಕ್ಷೇತ್ರಗಳಿಗೆ ಅಧಿಕೃತವಾಗಿ ಟಿಕೆಟ್ ಘೋಷಣೆ ಆಗಿಲ್ಲ.
ಜಮಖಂಡಿ ಕ್ಷೇತ್ರದಿಂದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೆಟ್ ನೀಡಲು ಬಿಜೆಪಿಯು ಕೋರ್ ಕಮಿಟಿಯಲ್ಲಿ ತೀರ್ಮಾನ ತೆಗೆದುಕೊಂಡಿದೆ. ಆದರೆ ಇದು ಕ್ಷೇತ್ರದಲ್ಲಿ ಬಿಜೆಪಿ ಗುಂಪುಗಳ ಮಧ್ಯೆ ವಿರಸ ಮೂಡಿಸಿದೆ.
ಜಮಖಂಡಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ ಬಿ.ಎಸ್.ಸಿಂಧೂರ ಅವರು ಬಿಜೆಪಿ ರಾಜ್ಯ ನಾಯಕರ ನಿರ್ಧಾರಕ್ಕೆ ಅಸಮಾಧಾನಗೊಂಡಿದ್ದು ಬಂಡಾಯದ ಮುನ್ಸೂಚನೆ ಕೊಟ್ಟಿದ್ದಾರೆ.

ಬಿ.ಎಸ್.ಸಿಂಧೂರ ಬಂಡಾಯದ ಬಾವುಟ
ಜಮಖಂಡಿ ಕ್ಷೇತ್ರದಿಂದ ಶ್ರೀಕಾಂತ ಕುಲಕರ್ಣಿ, ಬಿ.ಎಸ್.ಸಿಂಧೂರ ಮತ್ತು ಸಂಗಮೇಶ ನಿರಾಣಿ ಅವರು ಅಭ್ಯರ್ಥಿ ಆಗಿದ್ದರು. ಹಿರಿಯ ನಾಯಕರು ಸಂಗಮೇಶ ನಿರಾಣಿ ಅವರ ಮನವೊಲಿಸಿದ ನಂತರ ಅವರು ಸ್ಪರ್ಧೆಯಿಂದ ಹಿಂದೆ ಸರಿದರು. ಆದರೆ ಬಿ.ಎಸ್.ಸಿಂಧೂರ ಅವರು ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ದಿವಂಗತ ಸಿದ್ದು ನ್ಯಾಮಗೌಡ ಪುತ್ರನಿಗೆ ಟಿಕೆಟ್
ಕಾಂಗ್ರೆಸ್ನ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಜಮಖಂಡಿ ಕ್ಷೇತ್ರಕ್ಕೆ ಅವರ ಮಗ ಆನಂದ್ ನ್ಯಾಮಗೌಡ ಅವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿದ್ದು ಕ್ಷೇತ್ರದಲ್ಲಿ ಅವರು ಗೆಲ್ಲುವ ಅಭ್ಯರ್ಥಿ ಎಂದೇ ಹೇಳಲಾಗುತ್ತಿದೆ.

ಬಿಜೆಪಿಗೆ ಗೆಲುವು ಸರಳವಿಲ್ಲ
ಕಾಂಗ್ರೆಸ್ ಪಕ್ಷವು ಪ್ರಬಲ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿರುವ ಜೊತೆಗೆ ಕಾಂಗ್ರೆಸ್ನ ಅಭ್ಯರ್ಥಿಗೆ ಸಿಂಪತಿ ಬಲವೂ ಧಕ್ಕುವ ಕಾರಣ ಚುನಾವಣೆ ಗೆಲ್ಲಲು ಬಿಜೆಪಿ ಬಹಳ ಶ್ರಮ ಪಡಬೇಕು. ಆದರೆ ಇದೀಗ ಪಕ್ಷದಲ್ಲೇ ಎದ್ದಿರುವ ಬಂಡಾಯವು ಬಿಜೆಪಿ ಶಕ್ತಿ ಕುಂದಿಸುವುದರಲ್ಲಿ ಅನುಮಾನವಿಲ್ಲ. ಕಳೆದ ಬಾರಿ ಸೋತಿರುವ ಶ್ರೀಕಾಂತ ಕುಲಕರ್ಣಿ ಅವರೇ ಈ ಬಾರಿಯೂ ಅಭ್ಯರ್ಥಿ ಆಗಿದ್ದು ಯಾವ ರೀತಿಯಲ್ಲಿ ಜನರ ಮತ ಸೆಳೆಯುತ್ತಾರೆಂಬುದು ಕಾದು ನೋಡಬೇಕು.

ಅಸಮಾಧಾನ ಸರಿಪಡಿಸುವ ಜವಾಬ್ದಾರಿ ಉಸ್ತುವಾರಿಗಳಿಗೆ
ಬಿ.ಎಸ್.ಸಿಂಧೂರ ಅವರ ಅಸಮಾಧಾನ ತಗ್ಗಿಸಲು ಬಿಜೆಪಿಯು ಏನು ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಜಮಖಂಡಿ ಕ್ಷೇತ್ರದ ಉಪಚುನಾವಣೆ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್, ಮುರಗೇಶ ನಿರಾಣಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಪಿ.ಸಿ.ಗದ್ದಿನಗೌಡರ್, ಪ್ರಭಾಕರ ಕೋರೆ ಅವರನ್ನು ನೇಮಿಸಲಾಗಿದೆ. ಕ್ಷೇತ್ರದಲ್ಲಿ ಬುಗಿಲೆದ್ದಿರುವ ಅಸಮಾಧಾನವನ್ನು ಸರಿಪಡಿಸುವ ಜವಾಬ್ದಾರಿಯನ್ನು ಉಸ್ತುವಾರಿಗಳಿಗೆ ನೀಡಿದೆ ಬಿಜೆಪಿ.

ಕಳೆದ ಚುನಾವಣೆ ಫಲಿತಾಂಶ ಏನಾಗಿತ್ತು
ಇದೇ ವರ್ಷದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಸಿದ್ದು ನ್ಯಾಮಗೌಡ ಅವರು 49245 ಮತಗಳನ್ನು ಗಳಿಸುವ ಮೂಲಕ ಸಮೀಪ ಪ್ರತಿಸ್ಪರ್ಧಿ ಶ್ರೀಕಾಂತ ಕುಲಕರ್ಣಿ ಅವರ ವಿರುದ್ಧ 2795 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಗೆಲುವಿನ ಅಂತರ ಬಹಳ ಕಡಿಮೆಯೇ ಇತ್ತು. ಆದರೆ ಈಗ ಸಿದ್ದು ನ್ಯಾಮಗೌಡ ಅವರ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ಕಾರಣ ಸಿಂಪತಿ ಮತಗಳು ಕಾಂಗ್ರೆಸ್ ಪಾಲಾಗಲಿವೆ ಎನ್ನಲಾಗಿದೆ.












Click it and Unblock the Notifications