ಕಾಂಗ್ರೆಸ್ ಬ್ಲಾಕ್ ಸಭೆಯ ಮಧ್ಯೆ ಲಕ್ಷ್ಮಣ ಸವದಿಗೆ ಫೋನ್ ಮಾಡಿದ ಸಿದ್ದರಾಮಯ್ಯ
ಬಾಗಲಕೋಟೆ, ಡಿ 12: ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ರಾಜ್ಯದೆಲ್ಲಡೆ ಸಾರ್ವಜನಿಕರ ಪರದಾಟ ಹೇಳತೀರದು. ಸರಕಾರ ನಮ್ಮ ಸಮಸ್ಯೆಗಳಿಗೆ ಕಿವಿಗೊಡದಿದ್ದರೆ, ಮುಷ್ಕರ ಅನಿರ್ದಿಷ್ಟಾವಧಿಯ ವರೆಗೆ ಮುಂದುವರಿಯುವುದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ.
ತಮ್ಮ ವಿಧಾನಸಭಾ ಕ್ಷೇತ್ರ ಬಾದಾಮಿ ಪ್ರವಾಸದಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಾರಿಗೆ ಸಚಿವ ಕಮ್ ಡಿಸಿಎಂ ಲಕ್ಷ್ಮಣ ಸವದಿಗೆ ದೂರವಾಣಿ ಕರೆಮಾಡಿ ಮುಷ್ಕರದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ ತಾಲೂಕು ಮಟ್ಟದ ಬ್ಲಾಕ್ ಸಭೆಯಲ್ಲಿ ಭಾಗವಹಿಸುತ್ತಿದ್ದ ಸಿದ್ದರಾಮಯ್ಯ, ಸಭೆಯ ಮಧ್ಯೆಯೇ ಸವದಿ ಜೊತೆ ಚರ್ಚಿಸಿದ್ದಾರೆ. "ಏ..ಸವದಿ, ಮೊದಲು ಬಿಎಂಟಿಸಿ, ಕೆಎಸ್ ಆರ್ಟಿಸಿ ನೌಕರರನ್ನು ಕರೆದು ಚರ್ಚೆ ಮಾಡಿ ಸಮಸ್ಯೆ ಇತ್ಯರ್ಥ ಮಾಡಪ್ಪಾ'ಎಂದು ತಮ್ಮ ಎಂದಿನ ಶೈಲಿಯಲ್ಲಿ ಹೇಳಿದರು.

ಆ ವೇಳೆ ಸವದಿ ಫೋನ್ ನಲ್ಲಿ ಏನು ಹೇಳಿದ್ದಾರೋ ಎಂದು ತಿಳಿದು ಬಂದಿಲ್ಲ, "ನಾನು ಬಾದಾಮಿಯಲ್ಲಿದ್ದೇನೆ. ನನಗೆ ನಿನ್ನ ಸಮಸ್ಯೆ ಅರ್ಥವಾಗುತ್ತೆ. ನೌಕರರ ಸಂಘದವರ ಜೊತೆ ಕೂತು ಮಾತುಕತೆ ನಡೆಸಿ ಮುಷ್ಕರ ಮೊದಲು ಕೈಬಿಡುವಂತೆ ಮಾಡು. ಜನಸಾಮಾನ್ಯರಿಗೆ ತೊಂದರೆಯಾಗ್ತಿದೆಯಪ್ಪಾ. ಕೊನೆಗೆ ನಿನ್ನನ್ನೇ ಟಾರ್ಗೆಟ್ ಮಾಡುತ್ತಾರೆ"ಎಂದು ಸಿದ್ದರಾಮಯ್ಯ ಹೇಳಿದರು.
ಈ ನಡುವೆ, ಗೃಹಸಚಿವ ಬಸವರಾಜ ಬೊಮ್ಮಾಯಿಯವರನ್ನು ನಿವಾಸಕ್ಕೆ ಕರೆಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಮುಷ್ಕರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಲಕ್ಷ್ಮಣ ಸವದಿಯ ಮೇಲೆ ಫುಲ್ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ.
"ನೌಕರರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಬದ್ದವಾಗಿದೆ. ಕೋವಿಡ್ ಸಂದರ್ಭದಲ್ಲೂ , ನಷ್ಟದಲ್ಲಿದ್ದರೂ ಸಿಬ್ಬಂದಿಗಳಿಗೆ ವೇತವನ್ನು ನೀಡಿದ್ದೇವೆ. ನೌಕರರು ಇದನ್ನು ಅರ್ಥಮಾಡಿಕೊಂಡು ಇಂದಿನಿಂದಲೇ ಕೆಲಸಕ್ಕೆ ಹಾಜರಾಗಬೇಕೆಂದು ಮನವಿ ಮಾಡುತ್ತಿದ್ದೇನೆ"ಎಂದು ಬಸವರಾಜ ಬೊಮ್ಮಾಯಿ ಹೇಳಿದರು.












Click it and Unblock the Notifications