ಸತೀಶ ಜಾರಕಿಹೊಳಿ ಕಡೆಗಣನೆ ಖಂಡಿಸಿ ಬಾಗಲಕೋಟೆಯಲ್ಲಿ ಪ್ರತಿಭಟನೆ
ಬಾಗಲಕೋಟೆ, ಜೂನ್.11: ವೈಚಾರಿಕ ಬದ್ಧತೆಯ ಜನಪರ ನಾಯಕ ಸತೀಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟದಲ್ಲಿ ಕಡೆಗಣಿಸಿದ್ದನ್ನು ಖಂಡಿಸಿ
ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನಂತರ ಮಾತನಾಡಿದ ವೇದಿಕೆಯ ಜಿಲ್ಲಾ ಸಂಯೋಜಕ ಶ್ರೀಶೈಲ ಅಂಟಿನ್, ಈ ಮೈತ್ರಿ ಸರ್ಕಾರ ಸಾಮಾಜಿಕವಾಗಿ ಹಾಗೂ ಭೌಗೋಳಿಕವಾಗಿ ಅಸಮತೋಲನ, ಸರ್ಕಾರವಾಗಿದ್ದು, ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ರಾಜ್ಯದ 14 ಜಿಲ್ಲೆಗಳಿಗೆ ಮತ್ತು ಹಲವಾರು ಸಮುದಾಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿಲ್ಲ.
ಅಲ್ಲದೇ ಸಮರ್ಥವಾಗಿರುವ ಹಲವಾರು ಹಿರಿಯ ನಾಯಕರನ್ನು ಉದ್ದೇಶಪೂರಕವಾಗಿ ಸಂಪುಟದಿಂದ ಹೊರಗಿಡಲಾಗಿದೆ. ಶೀಘ್ರ ಸಮಸ್ಯೆ ಇತ್ಯರ್ಥಪಡಿಸದಿದ್ದರೆ , ಜಾರಕಿಹೊಳಿಯವರು ಕಾಂಗ್ರೆಸ್ ಪಕ್ಷ ತೊರೆದರೆ ಕರ್ನಾಟಕ ಇನ್ನೊಂದು ಉತ್ತರ ಪ್ರದೇಶವಾಗಲಿದೆ.

ಉತ್ತರ ಪ್ರದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಕಾಂಗ್ರೆಸ್ ಪಕ್ಷದ ತೊರೆದಿರುವುದರಿಂದ ಇಂದಿಗೂ ಕೂಡ ಕಾಂಗ್ರೆಸ್ ಪಕ್ಷ ಅಲ್ಲಿ ತಲೆ ಎತ್ತಲೂ ಸಾಧ್ಯವಿಲ್ಲ. ಸತೀಶ ಜಾರಕಿಹೊಳಿ ಅಗ್ರಗಣ್ಯ ನಾಯಕರಾಗಿದ್ದು, ಇವರನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದರು.
ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿರುವ ಈ ಮೈತ್ರಿ ಸರ್ಕಾರದ ವಿರುದ್ಧ ವೇದಿಕೆ ಇತರೆ ದಲಿತ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆ ತಾಲೂಕು ಮತ್ತು ಹೋಬಳಿ ಮಟ್ಟಗಳಲ್ಲಿ ಪ್ರತಿಭಟನೆ ನಡೆಸಲಿದೆ.
ಜೂನ್. 19ರಂದು ಬೆಂಗಳೂರಿನಲ್ಲಿ ಮತ್ತೊಮ್ಮೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ಮಹೇಶ ಹುಗ್ಗಿ, ಹನಮಂತ, ಬಸು ಹೂವಿನಹಳ್ಳಿ, ಲಕ್ಷ್ಮಣ ಮಾಲಗಿ, ಸುಭಾಸ ಗಸ್ತಿ, ರವಿ ತಳವಾರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications